ನವದೆಹಲಿ: ಭಾರಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ 'ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2026' ಅನ್ನು ಜಂಟಿ ಸಂಸದೀಯ ಸಮಿತಿಗೆ ಶಿಫಾರಸು ಮಾಡಿ ಲೋಕಸಭೆಯಲ್ಲಿ ಬುಧವಾರ ನಿರ್ಣಯ ಅಂಗೀಕರಿಸಲಾಗಿದೆ.
ಮಸೂದೆ ಹಿಂಪಡೆಯುವಂತೆ ವಿರೋಧ ಪಕ್ಷಗಳ ಸದಸ್ಯರ ಆಗ್ರಹ ಮತ್ತು ತೀವ್ರ ಪ್ರತಿಭಟನೆಯ ನಡುವೆ ಹೆಚ್ಚಿನ ಪರಿಶೀಲನೆಗಾಗಿ 31 ಸದಸ್ಯರ ಸಂಸದೀಯ ಸಮಿತಿಗೆ ಮಸೂದೆಯನ್ನು ಶಿಫಾರಸು ಮಾಡಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಗಾಗಿ ವಿಪಕ್ಷಗಳ ಘೋಷಣೆ ನಡುವೆಯೇ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ನಿಲುವಳಿ ಮಂಡಿಸಿದರು. ಲೋಕಸಭೆಯಿಂದ 21 ಸದಸ್ಯರು ಮತ್ತು ರಾಜ್ಯಸಭೆಯಿಂದ 10 ಸದಸ್ಯರನ್ನು ಸಂಸದೀಯ ಸಮಿತಿಗೆ ನೇಮಕ ಮಾಡಲಾಗುತ್ತದೆ.
ಲೋಕಸಭೆಯಿಂದ ಸಮಿತಿಗೆ ಸದಸ್ಯರನ್ನು ಸ್ಪೀಕರ್ ಓಂ ಬಿರ್ಲಾ ಆಯ್ಕೆ ಮಾಡಿದರೆ, ರಾಜ್ಯಸಭೆಯಿಂದ ಸಭಾಪತಿ ಸಿ.ಪಿ ರಾಧಾಕೃಷ್ಣನ್ ಆಯ್ಕೆ ಮಾಡಲಿದ್ದಾರೆ.
ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನದಂದು ವರದಿ ಸಲ್ಲಿಸಲು ಸದನ ಸಮಿತಿಗೆ ಸೂಚಿಸಲಾಗಿದೆ.
ಸದನ ಸಮಿತಿ ರಚನೆ ನಿರ್ಣಯಕ್ಕೂ ಮುನ್ನ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಕಾಂಗ್ರೆಸ್ ಸದಸ್ಯ ಕೆ.ಸಿ. ವೇಣುಗೋಪಾಲ್, ಈ ಮಸೂದೆಯನ್ನು ಅಲ್ಪಸಂಖ್ಯಾತರು ಮತ್ತು ಎನ್ಜಿಒಗಳನ್ನು ಗುರಿಯಾಗಿಸಿಕೊಂಡು ರಚಿಸಲಾಗಿದೆ ಎಂದು ಆರೋಪಿಸಿದ್ದರು.
ವೇಣುಗೋಪಾಲ್ ಆರೋಪವನ್ನು ತಳ್ಳಿಹಾಕಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳ ನಾಯಕರೇ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಶಿಫಾರಸು ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದರು.

