ಕಾಸರಗೋಡು: ಓಣಂ ಹಬ್ಬದ ಪ್ರೀತಿ, ಸಹೋದರತ್ವ ಮತ್ತು ಸಮಾನತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಸಾಹಿತ್ಯ ಸಂಘದ ಆಶ್ರಯದಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಅದ್ದೂರಿಯ ಓಣಂನ್ನು ಆಚರಿಸಲಾಯಿತು. ಶನಿವಾರ ಆಂಜನೇಯ ಓಪನ್ ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮವು ವಿವಿಧ ಕಲಾ ಪ್ರದರ್ಶನಗಳಿಂದ ಗಮನ ಸೆಳೆಯಿತು.
ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಓಣಂ ಕೇವಲ ಒಂದು ಹಬ್ಬವಲ್ಲ; ಅದು ಮಲಯಾಳಿಗಳ ಸಂಸ್ಕøತಿ ಮತ್ತು ಜೀವನದರ್ಶನದಲ್ಲಿ ಆಳವಾಗಿ ಬೇರೂರಿರುವ ಪ್ರೀತಿ, ಸಮಾನತೆ ಹಾಗೂ ಸಹೋದರತ್ವದ ಮಹತ್ವದ ಸಂದೇಶವಾಗಿದೆ ಎಂದು ಸ್ವಾಮೀಜಿ ಹೇಳಿದರು. ಮಹಾಬಲಿಯ ಆಳ್ವಿಕೆಯ ಕಾಲದ ಕುರಿತಾದ ಕಲ್ಪನೆಯು ಮಾನವರ ನಡುವಿನ ಎಲ್ಲ ಭೇದ ಭಾವಗಳನ್ನು ನಿವಾರಿಸಿ, ಎಲ್ಲರೂ ಸಮಾನವಾಗಿ ಬದುಕುವ ಸಮಾಜದ ಕನಸನ್ನು ಮುಂದಿಡುತ್ತದೆ ಎಂದು ಅವರು ತಿಳಿಸಿದರು.
ಮನುಷ್ಯನನ್ನು ಮನುಷ್ಯನಾಗಿ ಕಾಣುವುದು, ಪರಸ್ಪರ ಪ್ರೀತಿಸುವುದು, ಗೌರವಿಸುವುದು ಮತ್ತು ಸಹಾಯ ಮಾಡುವುದರಲ್ಲಿಯೇ ಓಣಂನ ನಿಜವಾದ ಸಂದೇಶ ಸಾಕಾರಗೊಳ್ಳುತ್ತದೆ ಎಂದು ಸ್ವಾಮೀಜಿ ಹೇಳಿದರು. ಓಣಂನ ಮೌಲ್ಯಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿಯೂ, ಇತರರ ಸಂತೋಷದಲ್ಲಿ ಸಂತಸ ಪಡುವುದರಲ್ಲಿಯೂ ನಿಜವಾದ ಓಣಂ ಸಂತೋಷ ಅಡಗಿದೆ ಎಂದು ಅವರು ಹೇಳಿದರು. ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿವಿದ್ಯಾರ್ಥಿಗಳ ಮೇಲಿದೆ ಎಂದು ಸ್ವಾಮೀಜಿ ನೆನಪಿಸಿದರು.
ವಿದ್ಯಾಲಯದ ಪ್ರಾಂಶುಪಾಲ ಟಿ. ವಿ. ಸುಕುಮಾರ ಅವರು ಓಣಂ ಶುಭಾಶಯಗಳನ್ನು ತಿಳಿಸಿ ಮಾತನಾಡಿದರು. ಕೇರಳದ ಸಾಂಸ್ಕೃತಿಕ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಹೊಸ ಪೀಳಿಗೆಗೆಪರಿಚಯಿಸುವಲ್ಲಿ ಇಂತಹ ಆಚರಣೆಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು. ಓಣಂ ಆಚರಣೆ ಕೇವಲ ಮನರಂಜನೆಗೆ ಸೀಮಿತವಾಗದೆ, ಮಕ್ಕಳಲ್ಲಿ ಪ್ರೀತಿ ಹಂಚಿಕೊಳ್ಳುವ ಮನೋಭಾವ, ಸಹಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯಗಳನ್ನು ಬೆಳೆಸುವ ಅವಕಾಶವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ವಿವಿಧ ಕಲಾಪ್ರದರ್ಶನಗಳು ಓಣಂ ಆಚರಣೆಗೆ ಮತ್ತಷ್ಟು ಮೆರುಗು ನೀಡಿದವು. ನೃತ್ಯ, ಗಾಯನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು. ಕೇರಳದ ವೈಶಿಷ್ಟ್ಯಪೂರ್ಣ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸಿದ ಕಲಾಪ್ರದರ್ಶನಗಳು ಎಲ್ಲರ ಗಮನಸೆಳೆದವು.
ವಿದ್ಯಾಲಯದ ಉಪಪ್ರಾಂಶುಪಾಲ ಅಭಿಜಿತ್ ಎಂ.ಕೆ., ಮುಖ್ಯಶಿಕ್ಷಕಿಯರಾದ ಪೂರ್ಣಿಮಾ ಎಸ್.ಆರ್. ಮತ್ತು ಸಿಂಧು ಶಶೀಂದ್ರನ್, ಶೈಕ್ಷಣಿಕ ಸಂಯೋಜಕ ಶೀನಾ ಕೆ.ಪಿ. ಹಾಗೂ ಸಾಹಿತ್ಯ ಸಂಘದ ಸದಸ್ಯರು ಓಣಂ ಆಚರಣೆಯ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು. ಶಿಕ್ಷಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

.jpeg)
.jpeg)
.jpeg)
.jpeg)
.jpeg)
