ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ನೀರಿನ ರಭಸಕ್ಕೆ ಚಮೋಲಿ ಜಿಲ್ಲೆಯ ನೀತಿ ಕಣಿವೆ ಪ್ರದೇಶದಲ್ಲಿದ್ದ ಸೇತುವೆಯೊಂದು ಕೊಚ್ಚಿಹೋಗಿದೆ.
ಈ ಘಟನೆಯ ವಿಡಿಯೋದಲ್ಲಿ ಕೆಸರುಮಿಶ್ರಿತ ಬೃಹತ್ ಪ್ರಮಾಣದ ನೀರು ಲೋಹದ ಸೇತುವೆಗೆ ಬಲವಾಗಿ ಅಪ್ಪಳಿಸಿರುವುದು ಕಂಡುಬಂದಿದೆ. ಕ್ಷಣಾರ್ಧದಲ್ಲೇ ನೀರಿನ ಭೀಕರ ರಭಸಕ್ಕೆ ಸೇತುವೆ ಬುಡಮೇಲಾಗಿ ನದಿಯ ದಂಡೆಯತ್ತ ತಳ್ಳಲ್ಪಟ್ಟಿತು.
ನದಿಯ ಪಕ್ಕದ ರಸ್ತೆಯಲ್ಲಿದ್ದ ಟ್ರಕ್ ಮತ್ತು ಎಸ್ಯುವಿ ಕಾರು ಈ ದುರಂತದ ಕೆಲವೇ ನಿಮಿಷಗಳ ಮುನ್ನ ವಾಪಸ್ ತಿರುಗಿ ಸುರಕ್ಷಿತವಾಗಿ ಪಾರಾಗಿರುವುದು ಸೆರೆಯಾಗಿದೆ.
ಸೇತುವೆ ಕೊಚ್ಚಿಹೋದ ಕಾರಣ ಈ ಪ್ರದೇಶವು ಮುಖ್ಯ ಪಟ್ಟಣದಿಂದ ಸಂಪರ್ಕವನ್ನು ಕಳೆದುಕೊಂಡಿದೆ. ಈ ಪ್ರದೇಶದಲ್ಲಿ ಪ್ರಯಾಣಿಸದಂತೆ ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ. ಪರಿಸ್ಥಿತಿ ಸುಧಾರಿಸಿ ಆಡಳಿತವು ಹಸಿರು ನಿಶಾನೆ ನೀಡುವವರೆಗೆ ಜನರು ತಮ್ಮ ಪ್ರಯಾಣವನ್ನು ಮುಂದೂಡಬೇಕು ಎಂದು ತಿಳಿಸಲಾಗಿದೆ.
ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿರುವುದರಿಂದ ಕಣಿವೆಯ ನದಿ ಮತ್ತು ಹಳ್ಳಗಳ ದಂಡೆಯಲ್ಲಿ ವಾಸಿಸುವ ಜನರು ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತವು ಸೂಚಿಸಿದೆ.

