ಕಣ್ಣೂರು: ಕಣ್ಣೂರಿನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾಂಕ್ರೀಟ್ಮಿಕ್ಸರ್ ಹೆವಿ ಲಾರಿ ಡಿಕ್ಕಿ ಹೊಡೆದು ಬೆಂಕಿತಗುಲಿದ ಪರಿಣಾಮ ಇಬ್ಬರು ಸಜೀವ ದಹನಗೊಂಡಿದ್ದಾರೆ. ಹೊಸದುರ್ಗ ಮಾವುಂಗಾಲ್ ನಿವಾಸಿ ಇಬಿನೈಸರ್ ಆಂಟೊ (24) ಮತ್ತು ಪಾಲಕ್ಕಾಡ್ ನಿವಾಸಿ ಮುಹಮ್ಮದ್ ಶೆಬಿನ್ (22)ಮೃತಪಟ್ಟವರು.
ಕಣ್ಣೂರು ಪಿಲಾತ್ತರ ಮಂಡೂರು ರಾಜ್ಯ ಹೆದ್ದಾರಿಯ ಮಂಡೂರು ಮಸೀದಿ ಸನಿಹ ಸೋಮವಾರ ನಸುಕಿನ 3.25ಕ್ಕೆ ಅಪಘಾತ ನಡೆದಿದೆ. ವಳಯಂಗಾಡಿಯಿಂದ ಬರುತ್ತಿದ್ದ ಲಾರಿಯ ಕ್ಲಚ್ ಕೆಟ್ಟುಹೋದ ಪರಿಣಾಮ ಅದನ್ನು ನಿನ್ನೆ ಮಧ್ಯಾಹ್ನ ರಸ್ತೆ ಬದಿ ನಿಲ್ಲಿಸಲಾಗಿತ್ತು. ಅದರ ದುರಸ್ತಿಗಾಗಿ ಸೋಮವಾರ ನಸುಕಿಗೆ ಹೊಸದುರ್ಗದಿಂದ ಮೆಕಾನಿಕ್ಗಳು ಬಂದು ಲಾರಿಯ ಕ್ಯಾಬಿನ್ನ ತಳಭಾಗವನ್ನು ಪರಿಶೀಲಿಸುತ್ತಿದ್ದ ವೇಳೆ ಆ ಲಾರಿಗೆ ಪಿಲಾತ್ತರದಿಂದ ಅತಿವೇಗದಲ್ಲಿ ಬಂದ ಮಿಕ್ಸರ್ ಹೆವಿ ಲಾರಿ ಡಿಕ್ಕಿ ಹೊಡೆದಿದೆ. ಅದರ ಆಘಾತಕ್ಕೆ ಬೆಂಕಿ ಎದ್ದು ಅದು ಇಡೀ ಲಾರಿಗೆ ವ್ಯಾಪಿಸಿದೆ. ಮಾತ್ರವಲ್ಲ ದುರಸ್ತಿ ಕೆಲಸ ನಿರ್ವಹಿಸಲು ಬಂದ ಮೆಕ್ಯಾನಿಕ್ಗಳ ವಾಹನಕ್ಕೂ ಬೆಂಕಿ ಆವರಿಸಿದೆ. ಶಬ್ದ ಕೇಳಿ ಪರಿಸರ ನಿವಾಸಿಗಳು ಸ್ಥಳಕ್ಕಾಗಮಿಸಿದ್ದು, ಅಗ್ನಿಶಾಮಕದಳ ಆಗಮಿಸಿ ಬೆಂಕಿ ತಗುಲಿ ಸಜೀವ ದಹನಗೊಂಡ ಇಬ್ಬರನ್ನೂ ಹೊರತೆಗೆದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ. ಅಪಘಾತದಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿಯ ಚಾಲಕ ಇಡುಕ್ಕಿ ನಿವಾಸಿ ಇಮ್ಮಾನ್ಯುಯೆಲ್ (26)ಗಾಯಗೊಂಡಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಗಳ ಡಿಕ್ಕಿಯ ರಭಸಕ್ಕೆ ಸನಿಹದ ಮಸೀದಿಯ ಗೋಡೆ ಬಿರುಕು ಉಂಟಾಗಿದೆ.

