ನವದೆಹಲಿ:'ದೆಹಲಿಯ ನಾರಾಯಣಾ ಪ್ರದೇಶದಲ್ಲಿನ ಸಭಾಂಗಣದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಬುಧವಾರ ಕರೆಯಲಾಗಿತ್ತು. ಬಿಜೆಪಿ ಒತ್ತಡಕ್ಕೆ ಮಣಿದು ಕೊನೆ ಕ್ಷಣದಲ್ಲಿ ಸಭಾಂಗಣ ಬಳಕೆಗೆ ನೀಡಿದ್ದ ಅನುಮತಿ ಹಿಂಪಡೆದ ಕಾರಣ ಸಭೆಯನ್ನು ರದ್ದುಪಡಿಸಲಾಯಿತು' ಎಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.
ಸಭೆ ರದ್ದುಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪಕ್ಷದ ಪದಾಧಿಕಾರಿಗಳು ಸಭಾಂಗಣವನ್ನು ಮುಂಚಿತವಾಗಿಯೇ ಕಾಯ್ದಿರಿಸಿದ್ದರು. ಸಭೆ ನಡೆಸುವುದಕ್ಕಾಗಿ ಕಾರ್ಯಕರ್ತರು ಅಲ್ಲಿಗೆ ತೆರಳಿದ ವೇಳೆ, 'ಒತ್ತಡ'ದ ಕಾರಣಕ್ಕೆ ಬುಕಿಂಗ್ ಅನ್ನು ರದ್ದುಪಡಿಸಿದ್ದಾಗಿ ಅವರಿಗೆ ತಿಳಿಸಲಾಯಿತು' ಎಂದು ಹೇಳಿದರು.
'ಈ ಪ್ರದೇಶದಲ್ಲಿರುವ ಇತರ ಸಭಾಂಗಣಗಳಲ್ಲಿಯೂ ಸಭೆ ನಡೆಸುವುದಕ್ಕೆ ನಮಗೆ ಅನುಮತಿ ನಿರಾಕರಿಸಲಾಗುತ್ತಿದೆ. ಸಿಜೆಪಿ ಸಭೆ ನಡೆಸುವುದಕ್ಕೆ ಸ್ಥಳ ಒದಗಿಸಲು ಮುಂದಾದವರಿಗೆ ಬೆದರಿಕೆ ಒಡ್ಡಲಾಗುತ್ತಿದೆ' ಎಂದು ಅವರು ಆರೋಪಿಸಿದರು.

