ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮಿಯಾಪದವಿನ ಬಟ್ಟಿಪದವಿನಲ್ಲಿ ದುಷ್ಕರ್ಮಿಗಳ ತಂಡವೊಂದು ಹಾಡಹಗಲು ಗಾಳಿಯಲ್ಲಿ ಗುಂಡುಹಾರಿಸುವ ಮೂಲಕ ಈ ಪ್ರದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ದುಷ್ಕರ್ಮಿಗಳ ತಂಡ, ಇಲ್ಲಿನ ಅಂಗಡಿ ಮಾಲಿಕ ಶುಹೈಬ್ ಮೊಯ್ದೀನ್ ಶೇಖ್ ಎಂವರಿಗೆ ಬಂದೂಕು ತೋರಿಸಿ ಜೀವಬೆದರಿಕೆಯೊಡ್ಡಿರುವುದಲ್ಲದೆ, ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಭಯದ ವಾತಾವರಣ ಸೃಷ್ಟಿಸಿದೆ.
ಕಾರಿನಲ್ಲಿ ಆಗಮಿಸಿದ ತಂಡ ದಾಂಧಲೆ ನಡೆಸಿ,ಪರಾರಿಯಾಗಿದೆ. ಈ ಘಟನೆಯ ಹಿಂದೆ ಮಿಯಾಪದವಿನ ನಿವಾಸಿಗಳಾದ ರಫೀಮ್ ಮತ್ತು ಖಾದರ್ ಮಡಂಗಲ್ಲು ಶಾಮೀಲಾಗಿರುವ ಬಗ್ಗೆ ಪೆÇಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಇವರಿಬ್ಬರೂ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಕುಟುಂಬ ಕಲಹಕ್ಕೆ ಸಂಬಂಧಿಸಿ ಶುಹೈಬ್ ಹಾಗೂ ಮಚ್ಚಂಪಾಡಿ ನಿವಾಸಿಯೊಬ್ಬರ ಮಧ್ಯೆ ವಾಗ್ವಾದವೇರ್ಪಟ್ಟಿದ್ದು, ಇದರ ಮುಂದುವರಿದ ಭಾಗವಾಗಿ ತಂಡ ಬಂದೂಕು ತೋರಿಸಿ ಬೆದರಿಕೆಯೊಡ್ಡಿರುವುದಲ್ಲದೆ, ಗಾಳಿಯಲ್ಲಿ ಗುಂಡುಹಾರಾಟ ನಡೆಸಿ ಭಯದ ವಾತಾವರಣ ಉಂಟುಮಾಡಿರುವುದಾಗಿ ಪೊಲೀಸರು ನಡೆಸಿದ ತನಿಖೆಯಿಂದ ತಿಳಿದು ಬಂದಿದೆ.
ಘಟನೆ ನಂತರ ತಂಡ ಅದೇ ಕಾರಿನಲ್ಲಿ ಪರಾರಿಯಾಗಿದ್ದು, ಈ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

