ರಾಂಚಿ: ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಕಳೆದ 13 ದಿನಗಳಿಂದ ರಾಂಚಿಯ ಜೈಪಾಲ್ ಸಿಂಗ್ ಕ್ರೀಡಾಂಗಣದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಮಳೆಯನ್ನೂ ಲೆಕ್ಕಿಸದೆ ಹೋರಾಡುತ್ತಿರುವ ವಿದ್ಯಾರ್ಥಿಗಳಿಗೆ ದೇವಸ್ಥಾನ, ಮಸೀದಿ, ಗುರುದ್ವಾರಗಳು ಮತ್ತು ಸಾರ್ವಜನಿಕರು ಪ್ರತಿದಿನ ಉಚಿತವಾಗಿ ಬಿಸಿ ಅಡುಗೆ, ನೀರು ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ.
ಇನ್ನೊಂದೆಡೆ, ಆರು ಮಂದಿ ಪ್ರತಿಭಟನಾಕಾರರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.
ಜೈಪಾಲ್ ಸಿಂಗ್ ಕ್ರೀಡಾಂಗಣದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಶೆಡ್ಗಳ ಮೊಕ್ಕಾಂ ಹೂಡಿರುವ ವಿದ್ಯಾರ್ಥಿಗಳಿಗೆ, ಯಾವುದೇ ಧರ್ಮದ ಭೇದಭಾವವಿಲ್ಲದೆ ಸಾರ್ವಜನಿಕರು ಅವರಿಗೆ ಬಿಸಿ-ಬಿಸಿ ಆಹಾರವನ್ನು ನೀಡುತ್ತಿದ್ದಾರೆ.
ಈ ದೃಶ್ಯಗಳು ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ನೀಟ್ ಪ್ರತಿಭಟನೆಯನ್ನು ನೆನಪಿಸುವಂತಿವೆ. ಅಲ್ಲಿಯೂ ದೇಶದಾದ್ಯಂತ ಸಾರ್ವಜನಿಕರು ಆನ್ಲೈನ್ ಮೂಲಕ ಪ್ರತಿಭಟನಾಕಾರರಿಗೆ ಊಟವನ್ನು ಕಳುಹಿಸಿಕೊಟ್ಟಿದ್ದರು.
ನಮಗೆ ಶನಿ ದೇವಾಲಯ, ಪಹಾಡಿ ದೇವಾಲಯ, ಹತ್ತಿರದ ಮಸೀದಿ ಮತ್ತು ಗುರುದ್ವಾರಗಳಿಂದ ಸಾಕಷ್ಟು ಆಹಾರ ಸಿಗುತ್ತಿದೆ. ಬೇರೆ ಬೇರೆ ಜಿಲ್ಲೆಗಳ ಜನರು ಸಹ ಮನೆಯಲ್ಲೇ ಮಾಡಿದ ಅಡುಗೆಯನ್ನು ನಮಗಾಗಿ ಕಳುಹಿಸುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಕೂಡ ತಮ್ಮ ಮನೆಗಳಿಂದ ಆಹಾರ ತರುತ್ತಿದ್ದಾರೆ ಎಂದು ಪ್ರತಿಭಟನಾ ಸ್ಥಳದಲ್ಲಿ ಆಹಾರ ವಿತರಿಸುತ್ತಿರುವ ಸ್ವಯಂಸೇವಕ ಆಶುತೋಷ್ ಲಾಲ್ ಹೇಳಿದ್ದಾರೆ.
ಆಹಾರವನ್ನು ಎಲ್ಲರೂ ಸೇರಿ ತಯಾರಿಸಿ ಹಂಚುತ್ತಿದ್ದಾರೆ. ಇಲ್ಲಿ ಯಾವುದೇ ಧರ್ಮ ಅಥವಾ ಜಾತಿಯ ಭೇದಭಾವವಿಲ್ಲ. ಪ್ರತಿಭಟನಾ ಸ್ಥಳಕ್ಕೆ ಬರುವ ಸಾರ್ವಜನಿಕರಿಗೆ ಮತ್ತು ಮಾಧ್ಯಮದವರಿಗೂ ಆಹಾರ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ, ಕುಡಿಯುವ ನೀರು ಮತ್ತು ಇತರ ಅಗತ್ಯ ವಸ್ತುಗಳು ಕೂಡ ನಿರಂತರವಾಗಿ ತಲುಪುತ್ತಿವೆ.
ಸಂಜೀವ್ ಕುಮಾರ್, ಪ್ರತಿಭಟನಾನಿರತ ವಿದ್ಯಾರ್ಥಿನಾವು ಹಿಂದೂಗಳಲ್ಲ, ಮುಸ್ಲಿಮರಲ್ಲ, ಸಿಖ್ ಅಥವಾ ಕ್ರಿಶ್ಚಿಯನ್ನರೂ ಅಲ್ಲ. ನಮಗೆ ಒಂದೇ ಗುರುತಿದೆ. ನಾವು ನ್ಯಾಯಕ್ಕೆ ಹೋರಾಡುವ ಮತ್ತು ವ್ಯವಸ್ಥೆಯಲ್ಲಿ ಸುಧಾರಣೆ ಬಯಸುವ ವಿದ್ಯಾರ್ಥಿಗಳು
'ನಮ್ಮ ಹೋರಾಟವು ಧಾರ್ಮಿಕ, ರಾಜಕೀಯ ಅಥವಾ ಜಾತಿ ಆಧಾರಿತ ಗುರುತುಗಳಿಗಿಂತ ಹೆಚ್ಚಾಗಿ ಪರಿಕ್ಷಾ ಸುಧಾರಣೆಗಳ ಮೇಲೆಯೇ ಕೇಂದ್ರೀಕೃತವಾಗಿದೆ' ಎಂದು ಮತ್ತೊಬ್ಬ ಪ್ರತಿಭಟನಾಕಾರ ಮೊಹಮ್ಮದ್ ಕರೀಮ್ ಹೇಳಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿರುವ 'ಜೆಪಿಎಸ್ಸಿ-ಜೆಎಸ್ಎಸ್ಸಿ ಸುಧಾರಣಾ ಮಂಚ್', ಶಾಂತಿಯುತ ಪ್ರತಿಭಟನೆಗೆ ಭಂಗ ತರುವಂತಹ ಯಾವುದೇ ಕೆಟ್ಟ ಅಥವಾ ನಿಂದನಾತ್ಮಕ ಮಾತುಗಳು ಬರದಂತೆ ಎಚ್ಚರ ವಹಿಸಿದೆ.
ಪ್ರತಿಭಟನಾ ಸ್ಥಳದಲ್ಲಿ 'ನಡಾವಳಿ ನಿಯಮ' ಫಲಕವನ್ನು ಹಾಕಲಾಗಿದೆ. ಅದರಲ್ಲಿ, 'ಪ್ರತಿಭಟನಾನಿರತರು ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಜಾತಿ ಆಧಾರಿತ ಹೇಳಿಕೆ ನೀಡಬೇಡಿ. ಮೂಲ ಉದ್ದೇಶದಿಂದ ಪಕ್ಕಕ್ಕೆ ಸರಿಯಬೇಡಿ. ನಮ್ಮ ಹೋರಾಟವು ವ್ಯವಸ್ಥೆಯಲ್ಲಿ ಸುಧಾರಣೆ ತರುವುದಕ್ಕಾಗಿ ಮಾತ್ರ. ಕೆಟ್ಟ ಭಾಷೆಯನ್ನು ಬಳಸಬೇಡಿ' ಎಂದು ಬರೆಯಲಾಗಿದೆ.
ಪ್ರತಿಭಟನೆಯು ತಮ್ಮ ಮೂಲ ಬೇಡಿಕೆಗಳ ಮೇಲೆಯೇ ಕೇಂದ್ರೀಕೃತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ನಿಯಮ ರೂಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರತಿಭಟನಾಕಾರರ ಬೇಡಿಕೆಗಳೇನು?
ಪರೀಕ್ಷಾ ಮಂಡಳಿಗಳಲ್ಲಿ (ಜೆಪಿಎಸ್ಸಿ ಮತ್ತು ಜೆಎಸ್ಎಸ್ಸಿ) ಸುಧಾರಣೆ ತರಬೇಕು.
ಜಾರ್ಖಂಡ್ ಲೋಕ ಸೇವಾ ಆಯೋಗದ 14ನೇ ಪರೀಕ್ಷೆಯನ್ನು ರದ್ದುಗೊಳಿಸಬೇಕು.
ಪರೀಕ್ಷಾ ಅಕ್ರಮದ ಬಗ್ಗೆ ಸಿಬಿಐ ಅಥವಾ ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
-ಪ್ರತಿಭಟನಾಕಾರಸಮಾಜದಿಂದ ಸಿಗುತ್ತಿರುವ ಈ ಪ್ರೀತಿ, ಗೌರವ ಮತ್ತು ಬೆಂಬಲವೇ ನಮಗೆ ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲು ಧೈರ್ಯ ನೀಡುತ್ತಿದೆ. ಸುಧಾರಣೆಗಳ ಕುರಿತು ನಮಗೆ ಖಚಿತ ಭರವಸೆ ಸಿಗುವವರೆಗೆ ಈ ಹೋರಾಟ ಮುಂದುವರಿಯುತ್ತದೆ.
ವಾಲ್ಟರ್ ಲಕ್ರಾ

