ನವದೆಹಲಿ: ಆದಾಯದ ಆಧಾರದಲ್ಲಿ ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ) ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ(ಒಬಿಸಿ) ಮೀಸಲಾತಿ ನಿಗದಿ ಮಾಡಬೇಕು ಎಂಬ ಕೋರಿಕೆಯನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದೆ.
ಐತಿಹಾಸಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವಿಕೆ ಆಧಾರದಲ್ಲಿ ಈ ವರ್ಗಗಳನ್ನು ಗುರುತಿಸಲಾಗಿದೆಯೇ ವಿನಾ ಅವುಗಳ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಅಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹೇಳಿದೆ.
ಇಂದಿರಾ ಸಾಹ್ನಿ ಪ್ರಕರಣದಲ್ಲಿ (1992) 9 ಸದಸ್ಯರ ಸಂವಿಧಾನ ಪೀಠ, ನಂತರ ಇತರ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿರುವ ಕೇಂದ್ರ ಸರ್ಕಾರ, ಎಸ್ಸಿ ಮತ್ತು ಎಸ್ಟಿಗೆ ಮೀಸಲಾತಿ ನೀಡುವ ವೇಳೆ ಕೆನೆ ಪದರ ನೀತಿ ಅನ್ವಯಿಸಲು ಸಾಧ್ಯ ಇಲ್ಲ ಎಂದೂ ಹೇಳಿದೆ.
ಉತ್ತರ ಪ್ರದೇಶದ ರಮಾಶಂಕರ್ ಪ್ರಜಾಪತಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಪ್ರತಿಕ್ರಿಯೆ ನೀಡಲಾಗಿದೆ.
'ಸಂವಿಧಾನದ 341 ಹಾಗೂ 342ನೇ ವಿಧಿಯಡಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಪಟ್ಟಿಗಳ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಈ ಪಟ್ಟಿಗಳಿಗೆ ಸಂಸತ್ತು ಮಾತ್ರ ತಿದ್ದುಪಡಿ ತರುವ ಅಧಿಕಾರ ಹೊಂದಿದೆ. ಯಾವುದೇ ರಾಜ್ಯ ಸರ್ಕಾರವಾಗಲಿ, ನ್ಯಾಯಾಲಯ ಅಥವಾ ಪ್ರಾಧಿಕಾರವು ಈ ಪಟ್ಟಿಯನ್ನು ಬದಲಾಯಿಸಲು ಸಾಧ್ಯ ಇಲ್ಲ. ಸಂವಿಧಾನದ 102ನೇ ತಿದ್ದುಪಡಿ ಬಳಿಕ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೂ(ಎಸ್ಇಬಿಸಿ) ಇಂಥದೇ ರಕ್ಷಣೆ ಖಾತ್ರಿಪಡಿಸಲಾಗಿದೆ' ಎಂದು ಸಚಿವಾಲಯ ವಿವರಿಸಿದೆ.

