ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಎಸ್ಪಿ ಸಿದ್ಧವಾಗುತ್ತಿದ್ದು ಪಕ್ಷದ ಬಲವರ್ಧನೆ ಕೆಲಸ ಪ್ರಗತಿಯಲ್ಲಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬುಧವಾರ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ, ಪಕ್ಷದ ಹಿರಿಯ ನಾಯಕ ಸತೀಶ್ ಚಂದ್ರ ಮಿಶ್ರಾ ಅವರಿಗೆ ಚುನಾವಣೆ ಸಂಬಂಧಿತ ಪ್ರಮುಖ ಜವಾಬ್ದಾರಿ ವಹಿಸಿರುವುದಾಗಿ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ಸಮಾಜದ ಎಲ್ಲಾ ವರ್ಗಗಳ ಬೆಂಬಲವನ್ನು ವಿಸ್ತರಿಸಲು ಬಿಎಸ್ಪಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದೆ. ವಿಧಾನಸಭಾ ಮಟ್ಟದ ಕಾರ್ಯಕರ್ತರ ಸಮಾವೇಶಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರ ಹೆಸರುಗಳನ್ನು ಘೋಷಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
2007ರ ಮಾದರಿಯಲ್ಲೇ ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ರಚಿಸುವ ಸಿದ್ಧತೆಯ ಭಾಗವಾಗಿ ಬಿಎಸ್ಪಿ ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದು ಆಡಳಿತಾರೂಢ ಬಿಜೆಪಿ ಮತ್ತು ಇತರ ಎದುರಾಳಿ ಪಕ್ಷಗಳಲ್ಲಿ ಚರ್ಚೆ ಹಾಗೂ ಆತಂಕ ಶುರುವಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ವಿರೋಧ ಪಕ್ಷಗಳ ಕುತಂತ್ರಗಳ ಕುರಿತು ಜಾಗರೂಕರಾಗಿರುವಂತೆ ಕಾರ್ಯಕರ್ತರಿಗೆ ಮಾಯಾವತಿ ಎಚ್ಚರಿಕೆ ನೀಡಿದ್ದಾರೆ. ಈ ಪಕ್ಷಗಳು ಹೆಣೆಯುತ್ತಿರುವ ತಂತ್ರಗಳ ಬಗ್ಗೆ ಜನರು ನಿರಂತರವಾಗಿ ಅರಿವು ಮತ್ತು ಜಾಗರೂಕತೆ ವಹಿಸುವ ಅಗತ್ಯವಿದೆ ಎಂದು ಅವರು ಕಿವಿಮಾತು ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ವಕೀಲರಾಗಿರುವ ಸತೀಶ್ ಚಂದ್ರ ಮಿಶ್ರಾ ಅವರಿಗೆ ಚುನಾವಣಾ ಜವಾಬ್ದಾರಿಗಳ ಜೊತೆಗೆ ಆಯೋಗಕ್ಕೆ ಸಂಬಂಧಿಸಿದ ವಿಷಯಗಳ ಉಸ್ತುವಾರಿಯ ಹೊಣೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

