ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ನಲ್ಲಿ ಸುಧಾರಣೆಗಳನ್ನು ಸಾಂಸ್ಥಿಕಗೊಳಿಸುವ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿತು.
ಈ ಸಂಬಂಧ ರಾಧಾಕೃಷ್ಣನ್ ಸಮಿತಿ ಮತ್ತು ನಂದನ್ ನಿಲೇಕಣಿ ಸಮಿತಿಗಳು ನೀಡಿರುವ ಶಿಫಾರಸುಗಳ ಜಾರಿಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್ಟಿಎ) ನಿರ್ದೇಶನ ನೀಡಿತು.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು, ಈ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಪ್ರಮಾಣಪತ್ರ ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.
'ರಾಧಾಕೃಷ್ಣನ್ ಸಮಿತಿಯು ಹೇಳಿದಂತೆ ಇದೊಂದು ವ್ಯವಸ್ಥಿತ ಸಮಸ್ಯೆಯಾಗಿದ್ದು, ಸುಧಾರಣೆಗಳನ್ನು ಸಾಂಸ್ಥಿಕಗೊಳಿಸುವುದು ಅತ್ಯಂತ ಮುಖ್ಯವಾಗಿದೆ. ಕಾಗದದ ಮೇಲಿನ ಪ್ರಕ್ರಿಯೆಗಳು ಎಲ್ಲವೂ ಸರಿಯಾಗಿಯೇ ಕಾಣಿಸುತ್ತವೆ. ಆದರೆ, ಒಂದು ಪರೀಕ್ಷೆ ಮುಗಿದು ಮತ್ತೊಂದು ಪರೀಕ್ಷೆ ಬರುವಷ್ಟರಲ್ಲಿ ಸಂಪೂರ್ಣ ಚಿತ್ರಣವೇ ಬದಲಾಗಿರುತ್ತದೆ' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ನೀಟ್ ಪರೀಕ್ಷೆಯಲ್ಲಿ ಲೋಪಗಳಿಗೆ ಆಸ್ಪದ ಇಲ್ಲ: ತುಷಾರ್ ಮೆಹ್ತಾ
ವಿಚಾರಣೆಯ ಸಂದರ್ಭದಲ್ಲಿ ನೀಟ್ ಪ್ರಶ್ನೆಪತ್ರಿಕೆ ಮುದ್ರಣದಿಂದ ಹಿಡಿದು ವಿದ್ಯಾರ್ಥಿಗಳ ಕೈ ಸೇರುವವರೆಗೆ ಅಳವಡಿಸಲಾಗಿರುವ ಭದ್ರತಾ ಕ್ರಮಗಳ ಕುರಿತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿವರಿಸಿದ್ದಾರೆ.
'ನೀಟ್ ಪರೀಕ್ಷಾ ವ್ಯವಸ್ಥೆಯು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಲೋಪಗಳಿಗೆ ಆಸ್ಪದ ಇಲ್ಲ' ಎಂದು ಅವರು ಪ್ರತಿಪಾದಿಸಿದ್ದಾರೆ.
'ಪ್ರಶ್ನೆ ಬ್ಯಾಂಕ್ ಸಿದ್ಧಪಡಿಸಲು ಹಲವು ಮಾಡರೇಟರ್ಗಳನ್ನು ಬಳಸಿಕೊಳ್ಳಲಾಗುತ್ತದೆ. ತಾವು ಸಿದ್ಧಪಡಿಸಿದ ಯಾವ ಪ್ರಶ್ನೆ ಅಂತಿಮ ಪ್ರಶ್ನೆಪತ್ರಿಕೆಯಲ್ಲಿ ಇರಲಿದೆ ಎಂಬುದು ಅವರಿಗೂ ತಿಳಿದಿರುವುದಿಲ್ಲ. ಪ್ರಶ್ನೆಪತ್ರಿಕೆಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಸಣ್ಣ ಚಲನವಲನವನ್ನೂ ನಿಖರವಾಗಿ ದಾಖಲಿಸಲಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.
ಅಖಿಲ ಭಾರತ ವೈದ್ಯಕೀಯ ಸಂಘಗಳ ಮಹಾ ಒಕ್ಕೂಟ (ಎಫ್ಎಐಎಂಎ) ಪರವಾಗಿ ವಕೀಲೆ ತನ್ವಿ ದುಬೆ ಸೇರಿದಂತೆ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ನಡೆಸಿತು.

