ಕಾಸರಗೋಡು: ಉದ್ಯೋಗದ ಭರವಸೆ ನೀಡಿ ಹಲವಾರು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿತಾ ರೈ (28) ಮತ್ತೆ ಕೆಲಸಕ್ಕೆ ಸೇರುವ ಸಿದ್ದತೆಯಲ್ಲಿರುವುದಾಗಿ ತಿಳಿದುಬಂದಿದೆ. ಇದರ ಭಾಗವಾಗಿ, ಶಿಕ್ಷಣ ಇಲಾಖೆ ಸಚಿತಾ ವಿರುದ್ಧ ಇಲಾಖಾ ವಿಚಾರಣೆಯನ್ನು ಪುನಃ ಆರಂಭಿಸಿದೆ. ಅವರು ಡಿವೈಎಫ್ಐ ಜಿಲ್ಲಾ ಸಮಿತಿಯ ಸದಸ್ಯರಾಗಿದ್ದರು ಮತ್ತು ಆರೋಪಗಳ ನಂತರ ಅವರನ್ನು ಪಕ್ಷದಿಂದ ಹೊರಹಾಕಲಾಯಿತು.
ದೂರುಗಳನ್ನು ಇತ್ಯರ್ಥಪಡಿಸಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾಹಿತಿ:
ಹಣಕಾಸು ವಂಚನೆ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ಜೈಲಿನಿಂದ ಬಿಡುಗಡೆಯಾದ ಸಚಿತಾ, ದೂರುಗಳನ್ನು ಇತ್ಯರ್ಥಪಡಿಸುವ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದಾರೆ ಎಂದು ವರದಿಯಾಗಿದೆ. ಪ್ರಕರಣವನ್ನು ಹಿಂತೆಗೆದುಕೊಂಡರೆ ಹಣವನ್ನು ಹಿಂದಿರುಗಿಸುವುದಾಗಿ ದೂರುದಾರರಿಗೆ ಭರವಸೆ ನೀಡುವ ಮೂಲಕ ಅವರು ಕೆಲಸಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಮಂಜೇಶ್ವರ ಎಇಒ ಜಿತೇಂದ್ರ ಗುರುವಾರ, ಆಗಸ್ಟ್ 20, 2026 ರಂದು ಆರೋಪಿಗಳು ಮತ್ತು ದೂರುದಾರರನ್ನು ಬಾಡೂರು ಶಾಲೆಗೆ ಕರೆಸಿ ವಿಚಾರಣೆ ನಡೆಸಿದರು.
ಇಲಾಖಾ ವಿಚಾರಣೆ ಮುಂದುವರೆದಿದ್ದು, ಹೆಚ್ಚಿನ ಜನರನ್ನು ಕರೆಯಲಾಗುವುದು ಮತ್ತು ನಂತರ ಡಿಡಿಇಗೆ ವರದಿಯನ್ನು ಸಲ್ಲಿಸಲಾಗುವುದು ಎಂದು ಎಇಒ ಪ್ರತಿಕ್ರಿಯಿಸಿದರು. ಸಚಿತಾ ಅವರ ಅಮಾನತು ಪ್ರಸ್ತುತ ಮುಂದುವರೆದಿದ್ದು, ಇತರ ವಿಷಯಗಳ ಬಗ್ಗೆ ಶಾಲಾ ವ್ಯವಸ್ಥಾಪಕರು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಪೆÇಲೀಸ್ ಪ್ರಕರಣದ ಜೊತೆಗೆ ಇಲಾಖಾ ತನಿಖೆಯೂ ನಡೆಯುತ್ತಿದೆ. ಸಚಿತಾ ಅವರ ಪರವಾಗಿ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕೆಲವರು ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ. ತನಿಖಾ ತಂಡವು ಹಲವು ಪ್ರಕರಣಗಳಲ್ಲಿ ಚಾರ್ಜ್ಶೀಟ್ಗಳನ್ನು ಸಲ್ಲಿಸಿದೆ.
ವಿವಿಧ ಪೆÇಲೀಸ್ ಠಾಣೆಗಳಲ್ಲಿ 11 ಪ್ರಕರಣಗಳು:
ಶಿಕ್ಷಕರ ಸಂಘದ ನಾಯಕಿಯಾಗಿರುವ ಸಚಿತಾ ಅವರನ್ನು ಈ ಹಿಂದೆ ಕುಂಬಳ ಸಿಪಿಎಂ ಪ್ರದೇಶ ಸಮಿತಿಯ ಪ್ರಾಥಮಿಕ ಸದಸ್ಯತ್ವದಿಂದ ಮತ್ತು ಅವರ ಡಿವೈಎಫ್ಐ ಸ್ಥಾನಮಾನದಿಂದ ತೆಗೆದುಹಾಕಲಾಗಿತ್ತು. ಜಿಲ್ಲೆಯ ಬದಿಯಡ್ಕ, ಅಂಬಲತ್ತರ, ಕುಂಬಳೆ, ಮಂಜೇಶ್ವರ, ಆಡೂರು, ಮೇಲ್ಪರಂಬ ಪೋಲೀಸ್ ಠಾಣೆ ವ್ಯಾಪ್ತಿ ಮತ್ತು ಉಪ್ಪಿನಂಗಡಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವರ ವಿರುದ್ಧ 11 ವಂಚನೆ ಪ್ರಕರಣಗಳಿವೆ. ಪೋಲೀಸರಿಗೆ ಬಂದಿರುವ ದೂರುಗಳ ಪ್ರಕಾರ, ಸಿಪಿಸಿಆರ್ಐ, ಕೇಂದ್ರೀಯ ವಿದ್ಯಾಲಯ, ಕರ್ನಾಟಕ ಅಬಕಾರಿ ಇಲಾಖೆ ಮತ್ತು ಶಾಲೆಗಳಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಹಣ ಪಡೆಯಲಾಗಿದೆ.
ಮುಖ್ಯವಾಗಿ ಸ್ನೇಹಿತರು ಮತ್ತು ಆಪ್ತರಿಂದ ಹಣವನ್ನು ಪಡೆಯಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಕುಂಬಳೆ ಕಿದೂರು ಮೂಲದ ನಿಶ್ಮಿತಾ ಶೆಟ್ಟಿ ಎಂಬವರಿಗೆ ಕೇಂದ್ರ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ವ್ಯವಸ್ಥಾಪಕಿ ಹುದ್ದೆಯ ಭರವಸೆ ನೀಡಿ 15 ಲಕ್ಷ ರೂಪಾಯಿಗಳನ್ನು ಪಡೆದಿರುವುದಾಗಿ ನೀಡಿದ ದೂರಿನಿಂದ ಘಟನೆಯ ವ್ಯಾಪ್ತಿ ಬೆಳಕಿಗೆ ಬಂದಿದೆ. ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಬಾಡೂರು ಮೂಲದ ಬಿ.ಎಸ್. ಮಲ್ಲೇಶ್ ಅವರಿಂದ 1 ಲಕ್ಷ ರೂಪಾಯಿಗಳನ್ನು ಮತ್ತು ಕಡಂಬಾರ್ ಮೂಡಂಬೈಲು ನಿವಾಸಿ ಮೋಕ್ಷಿತ್ ಶೆಟ್ಟಿ ಅವರಿಂದ 1 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎಂಬ ದೂರು ಇದೆ. ಕಾಸರಗೋಡಿನ ಕೇಂದ್ರೀಯ ವಿದ್ಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ದೇಲಂಪಾಡಿ ಮೂಲದ ಸುಚಿತ್ರ ಅವರಿಂದ 7,31,500 ರೂಪಾಯಿಗಳನ್ನು ಪಡೆದಿದ್ದಾರೆ ಎಂಬ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿದ್ದರು.
ಚೆಕ್ ಸ್ವೀಕೃತಿಯ ಹೇಳಿಕೆ:
ಕರ್ನಾಟಕದ ಒಂದು ಗುಂಪು ತನಗೆ ಹಣ ಹಸ್ತಾಂತರಿಸಿದ್ದು, 78 ಲಕ್ಷ ರೂ.ಗಳ ಚೆಕ್ ನೀಡಿದ್ದಾರೆ ಎಂದು ಸಚಿತಾ ಪೋಲೀಸರಿಗೆ ಹೇಳಿಕೆ ನೀಡಿದ್ದರು. ತನಿಖಾ ತಂಡವು ಸಂಬಂಧಿತ ವಿಷಯಗಳನ್ನು ಸಹ ಪರಿಶೀಲಿಸಿತ್ತು. ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಚಿತಾ ಕಾಸರಗೋಡು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು, ಆದರೆ ಅರ್ಜಿಯನ್ನು ತಿರಸ್ಕರಿಸಲಾಯಿತು. ಇದರ ನಂತರ, ನ್ಯಾಯಾಲಯದಲ್ಲಿ ಶರಣಾಗಲು ಬಂದಾಗ ಪೋಲೀಸರು ಅವರನ್ನು ಬಂಧಿಸಿದ್ದರು.
ಎಇಒ ವಿಚಾರಣೆಯ ನಂತರ ಸಚಿತಾ ಹೊರಬಂದಾಗ, ಹಣವನ್ನು ನೀಡಿದವರಿಗೆ ಹಣವನ್ನು ಹಿಂದಿರುಗಿಸಲು ಕೇಳಲಾಯಿತು, ಆದರೆ ಅವರು ಸರಿಯಾದ ಉತ್ತರವನ್ನು ನೀಡದೆ "ತೀರ್ಪು ಬರಲಿ" ಎಂದು ಹೇಳಿ ನುಣುಚಿಕೊಂಡರು. ಆರೋಪಿಯು ಕಾರಿನಲ್ಲಿ ವಿಚಾರಣೆಗೆ ಬಂದರು. ಪ್ರಸ್ತುತ ಬೆಳವಣಿಗೆಗಳ ಬಗ್ಗೆ ನನಗೆ ಏನೂ ಹೇಳಲು ಇಲ್ಲ ಮತ್ತು ಶಾಲಾ ವ್ಯವಸ್ಥಾಪಕರನ್ನು ಕೇಳಬೇಕೆಂದು ಮುಖ್ಯೋಪಾಧ್ಯಾಯ ಸುಧೀರ್ ಪ್ರತಿಕ್ರಿಯಿಸಿರುವರು.



