ಇಂಫಾಲ್/ಚುರಚಾಂದ್ಪುರ: ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಹಳ್ಳಿಗಳ ಸಂಖ್ಯೆ ಏರಿಕೆಯಾಗಿರುವುದು ಏಕೆ ಎಂಬುದನ್ನು ಬಿಜೆಪಿ ಶಾಸಕ ಪಾವೊಲಿಯನ್ಲಾಲ್ ಹೌಕಿಪ್ ವಿವರಿಸಿದ್ದಾರೆ.
1990ರ ದಶಕದಲ್ಲಿ ನಾಗಾ ಮತ್ತು ಕುಕಿ ಬುಡಕಟ್ಟು ಸಮದಾಯಗಳ ನಡುವೆ ನಡೆದ ಸಂಘರ್ಷದಿಂದ ಉಂಟಾದ ವ್ಯಾಪಕ ವಲಸೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಹಣಕ್ಕಾಗಿ ನಕಲಿ ಹಳ್ಳಿಗಳನ್ನು ಸೃಷ್ಟಿಸಿರುವುದೇ ಗ್ರಾಮಗಳ ಸಂಖ್ಯೆ ಏರಿಕೆಯಾಗಿರುವುದಕ್ಕೆ ಕಾರಣ ಎಂದು ತಿಳಿಸಿದ್ದಾರೆ.
ಸರ್ಕಾರದ ದಾಖಲೆಗಳಲ್ಲಿನ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಒಟ್ಟು 926 ಅನಧಿಕೃತ ಗ್ರಾಮಗಳಿವೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಹೌಕಿಪ್ ಈ ರೀತಿ ಹೇಳಿದ್ದಾರೆ.
ಚುರಚಾಂದ್ಪುರದ ಸೈಕೋಟ್ ವಿಧಾನಸಭಾ ಕ್ಷೇತ್ರದ ಶಾಸಕ ಹೌಕಿಪ್, ಶುಕ್ರವಾರ ತಡರಾತ್ರಿ ಸಾಮಾಜಿಕ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ, 'ಚುರಚಾಂದ್ಪುರ, ಕಾಂಗ್ಪೊಕ್ಪಿ ಮತ್ತು ಇತರ ಕೆಲವು ಗುಡ್ಡಗಾಡು ಜಿಲ್ಲೆಗಳಲ್ಲಿ ಹಳ್ಳಿಗಳ ಸಂಖ್ಯೆ ಹೆಚ್ಚಾಗಿವೆ. 1992 ರಿಂದ 1995ರ ಅವಧಿಯಲ್ಲಿ ನಡೆದ ಜನಾಂಗೀಯ ಸಂಘರ್ಷದ ವೇಳೆ ಉಂಟಾದ ವ್ಯಾಪಕ ವಲಸೆಯೇ ಇದಕ್ಕೆ ಕಾರಣ. ಜೊತೆಗೆ, ನರೇಗಾ ಹಣ ದೋಚಲು ನಕಲಿ ಹಳ್ಳಿಗಳನ್ನೇ ಸೃಷ್ಟಿಸಿದರೊಂದಿಗೆ ಭ್ರಷ್ಟ ಅಧಿಕಾರಿಗಳು ಶಾಮೀಲಾಗಿದ್ದಾರೆ' ಎಂದು ಹೇಳಿದ್ದಾರೆ.
ಮುಂದುವರಿದು, 'ತಮ್ಮ ಮಕ್ಕಳ ನೇತೃತ್ವದಲ್ಲಿ ಹೊಸದಾಗಿ ಸಣ್ಣ ಸಣ್ಣ ಹಳ್ಳಿಗಳನ್ನು ಸೃಷ್ಟಿಸುವುದಕ್ಕಾಗಿ ಗ್ರಾಮಗಳನ್ನು ವಿಭಜಿಸುವ ಕುಕಿ ಸಮುದಾಯದ ಸಂಪ್ರದಾಯವೂ ಅದಕ್ಕೆ ಕಾರಣ' ಎಂದು ಉಲ್ಲೇಖಿಸಿದ್ದಾರೆ.
1992ರಿಂದ 1995ರವರೆಗೆ ನಡೆದ ಸಂಘರ್ಷದಲ್ಲಿ ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಸುಮಾರು 50,000ಕ್ಕೂ ಹೆಚ್ಚು ಜನರು ಸುರಕ್ಷಿತ ಸ್ಥಳಗಳತ್ತ ಮುಖ ಮಾಡಿದ್ದರು. ನಾಗಾ ಸಮುದಾಯದ ಪ್ರಾಬಲ್ಯವಿರುವ ಗ್ರಾಮಗಳಲ್ಲಿ ಅಲ್ಪ ಸಂಖ್ಯಾತರಾಗಿದ್ದ ಕುಕಿಗಳು ಮತ್ತು ಕುಕಿ ಪ್ರಾಬಲ್ಯವಿದ್ದ ಹಳ್ಳಿಗಳಲ್ಲಿ ಅಲ್ಪಸಂಖ್ಯಾತರಾಗಿದ್ದ ನಾಗಾ ಜನರು, ತಮ್ಮ ಬುಡಕಟ್ಟಿನ ಪ್ರಾಬಲ್ಯವಿರುವ ಕಡೆಗೆ ಪಲಾಯನ ಮಾಡಿದ್ದರು.
ಜನಸಂಖ್ಯೆ ವಿಚಾರವಾಗಿ ಶನಿವಾರವೂ ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ಹೌಕಿಪ್, 2001ರ ಜನಗಣತಿಯ ಪ್ರಕಾರ ಸೇನಾಪತಿ ಜಿಲ್ಲೆಯಲ್ಲಿ ಜನಸಂಖ್ಯೆಯಲ್ಲಿ ಅಸಹಜ ಏರಿಕೆ ಕಂಡುಬಂದಿರುವುದಕ್ಕೆ ಮ್ಯಾನ್ಮಾರ್ನಿಂದ ಅಕ್ರಮ ವಲಸಿಗರು ನುಸುಳಿರುವುದು ಕಾರಣವಲ್ಲ. ಜನಗಣತಿಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.
ಮಣಿಪುರವು ಮ್ಯಾನ್ಮಾರ್ನೊಂದಿಗೆ 398 ಕಿ.ಮೀ. ಉದ್ದದ ಅಂತರರಾಷ್ಟ್ರೀಯ ಗಡಿ ಹಂಚಿಕೊಂಡಿದೆ.

