ಕಾಸರಗೋಡು: 15 ವರ್ಷಕ್ಕೂ ಹೆಚ್ಚು ಕಾಲ ನಿರ್ಮಾಣ ಸ್ಥಗಿತಗೊಂಡಿರುವ ಚೇಟುಕುಂಡು ರಿಸಾರ್ಟ್ ಯೋಜನೆಯನ್ನು ಪುನರುಜ್ಜೀವನಗೊಳಿಸಲು ರಾಜ್ಯ ಸರ್ಕಾರ ಮತ್ತು ಬೇಕಲ ರಿಸಾಟ್ರ್ಸ್ ಡೆವಲಪ್ಮೆಂಟ್ ಕಾರ್ಪೋರೇಷನ್ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಳ್ಳಿಕ್ಕೆರೆ ಗ್ರಾಮ ಪಂಚಾಯತಿನಲ್ಲಿ ನಿರ್ಣಯ ಮಂಡಿಸಲಾಗಿದೆ. 20ನೇ ವಾರ್ಡ್ ಪೂಚ್ಚಕ್ಕಾಡ್ ನ ಸದಸ್ಯ ಮುನೀರ್ ತಮನ್ನ ಮಂಡಿಸಿದ ನಿರ್ಣಯಕ್ಕೆ ವಾರ್ಡ್ 22ರ ಸದಸ್ಯ ಅಬ್ದುಲ್ ರಸಾಕ್ ಬೆಂಬಲ ನೀಡಿದರು.
15 ವರ್ಷಗಳಿಂದ ಅನಿಶ್ಚಿತತೆಯಲ್ಲಿ:
ಅಂತರರಾಷ್ಟ್ರೀಯ ಗುಣಮಟ್ಟದ ಬೀಚ್ ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ 1992 ರಲ್ಲಿ ಕೇಂದ್ರ ಸರ್ಕಾರ ನಡೆಸಿದ ರಾಷ್ಟ್ರೀಯ ಸಮೀಕ್ಷೆಯ ಆಧಾರದ ಮೇಲೆ ಕೇರಳದಿಂದ ಆಯ್ಕೆಯಾದ ಏಕೈಕ ವಿಶೇಷ ಪ್ರವಾಸೋದ್ಯಮ ಪ್ರದೇಶ ಬೇಕಲ್ ಆಗಿದೆ.
ಇದರ ಭಾಗವಾಗಿ 1995 ರಲ್ಲಿ ರಾಜ್ಯ ಸರ್ಕಾರ ಬೇಕಲ್ ಪ್ರವಾಸೋದ್ಯಮ ಯೋಜನೆಯನ್ನು ಘೋಷಿಸಿತು. ಯೋಜನೆಯ ಅಭಿವೃದ್ಧಿ ಕಾರ್ಯಗಳನ್ನು ಸಮನ್ವಯಗೊಳಿಸಲು ಮುಖ್ಯ ಕಾರ್ಯದರ್ಶಿಯನ್ನು ಅಧ್ಯಕ್ಷರನ್ನಾಗಿ ಮಾಡಿ ಬಿ.ಆರ್.ಡಿ.ಸಿ.ಯನ್ನು ರಚಿಸಲಾಗಿತ್ತು.
ಪಳ್ಳಿಕ್ಕೆರೆ ಸಹಿತ ಜಿಲ್ಲೆಯ ನಾಲ್ಕು ಕರಾವಳಿ ಪಂಚಾಯತಿಗಳಲ್ಲಿ ಸುಮಾರು 235 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಬಿಆರ್ಡಿಸಿಯು ಪಂಚತಾರಾ ರಿಸಾರ್ಟ್ಗಳನ್ನು ಸ್ಥಾಪಿಸಲು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ವಿವಿಧ ಖಾಸಗಿ ಸಂಸ್ಥೆಗಳಿಗೆ ದೀರ್ಘಾವಧಿಯ ಗುತ್ತಿಗೆಗೆ ಭೂಮಿಯನ್ನು ಹಸ್ತಾಂತರಿಸಿತು. ಇದರ ಭಾಗವಾಗಿ ಪಳ್ಳಿಕ್ಕೆರೆ ಪಂಚಾಯತಿಯ ಚೇಟುಕುಂಡು ಪ್ರದೇಶದಲ್ಲಿ 55 ಎಕರೆ ಭೂಮಿಯನ್ನು ತಿರುವನಂತಪುರಂ ಕೇಂದ್ರವಾಗಿರುವ ಏರ್ ಟ್ರಾವೆಲ್ ಎಂಟರ್ಪ್ರೈಸಸ್ ಎಂಬ ಕಂಪನಿಗೆ ರಿಸಾರ್ಟ್ ನಿರ್ಮಾಣಕ್ಕಾಗಿ ಲೀಸ್ಗೆ ನೀಡಲಾಗಿತ್ತು.
ಆದರೆ ನಿರ್ಮಾಣ ಕಾರ್ಯಗಳು ಆರಂಭಗೊಂಡಿದ್ದರೂ ನಂತರ ಸ್ಥಗಿತಗೊಂಡಿದ್ದರಿಂದ ಕಳೆದ 15 ವರ್ಷಕ್ಕೂ ಹೆಚ್ಚು ಕಾಲದಿಂದ ಯೋಜನೆಯು ಅನಿಶ್ಚಿತತೆಯಲ್ಲಿದೆ. ಕಂಪನಿಯು ಸಾಲ ಪಡೆದಿದ್ದ ಬ್ಯಾಂಕ್ಗಳ ಮರುಪಾವತಿಯನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ವಿಷಯವು ನ್ಯಾಯಾಲಯಕ್ಕೆ ತಲುಪಿದ್ದು, ಪ್ರಕರಣವು ಪ್ರಸ್ತುತ ಕೇರಳ ಹೈಕೋರ್ಟ್ನ ಪರಿಗಣನೆಯಲ್ಲಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ನಷ್ಟವಾಗುತ್ತಿರುವುದು ಕೋಟ್ಯಂತರ ಆದಾಯ:
ರಿಸಾರ್ಟ್ ಸಾಕಾರಗೊಳ್ಳುತ್ತಿದ್ದರೆ ಸ್ಥಳೀಯರಿಗೆ ನೇರ ಮತ್ತು ಪರೋಕ್ಷವಾಗಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ಪಂಚಾಯತಿಗೂ ರಾಜ್ಯ-ಕೇಂದ್ರ ಸರ್ಕಾರಗಳಿಗೂ ತೆರಿಗೆ ಆದಾಯ ಲಭಿಸಿ ಪ್ರದೇಶದ ಆರ್ಥಿಕತೆಗೆ ಗಣನೀಯ ಉತ್ತೇಜನ ದೊರೆಯುತ್ತಿತ್ತು.
ಸಮೀಪದ ಉದುಮ ಪಂಚಾಯತಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಆರ್ಡಿಸಿಯ ಮೂರು ರಿಸಾರ್ಟ್ಗಳಿಂದ ವಾರ್ಷಿಕವಾಗಿ ಸುಮಾರು ಎರಡು ಕೋಟಿ ರೂಪಾಯಿ ತೆರಿಗೆ ಆದಾಯ ಲಭಿಸುತ್ತಿರುವಾಗ, ಪಳ್ಳಿಕ್ಕೆರೆಯಲ್ಲಿ ರಿಸಾರ್ಟ್ ಕಾರ್ಯಾರಂಭ ಮಾಡದ ಕಾರಣ ಕಟ್ಟಡ ತೆರಿಗೆ ಸೇರಿದಂತೆ ಲಕ್ಷಾಂತರ ರೂಪಾಯಿಗಳ ಆದಾಯ ಪಂಚಾಯತಿಗೆ ನಷ್ಟವಾಗುತ್ತಿದ್ದು, ಬಿಆರ್ಡಿಸಿಗೂ ದೊಡ್ಡ ಪ್ರಮಾಣದಲ್ಲಿ ಗುತ್ತಿಗೆ ಆದಾಯ ನಷ್ಟವಾಗುತ್ತಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಖಾಸಗಿ ಕಂಪನಿ, ಬ್ಯಾಂಕ್ಗಳು, ಬಿಆರ್ಡಿಸಿ ಕಕ್ಷಿಗಳಾಗಿರುವ ಹೈಕೋರ್ಟ್ ಪ್ರಕರಣದ ವಿಚಾರಣಾ ಕ್ರಮಗಳನ್ನು ವೇಗಗೊಳಿಸಬೇಕು ಮತ್ತು ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದ ಕಂಪನಿಯಿಂದ ಸೈಟ್ ಅನ್ನು ವಾಪಸ್ ಪಡೆದು ಪ್ರಸ್ತುತ ಲೀಸ್ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ನಿರ್ಣಯ ಆಗ್ರಹಿಸುತ್ತದೆ. ನಂತರ ಕಾನೂನುಬದ್ಧ ಕ್ರಮಗಳನ್ನು ಪೂರ್ಣಗೊಳಿಸಿ ಮತ್ತೊಂದು ಅರ್ಹ ಕಂಪನಿಗೆ ಸೈಟ್ ಹಸ್ತಾಂತರಿಸಿ ರಿಸಾರ್ಟ್ ನಿರ್ಮಾಣವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕಾರ್ಯಾರಂಭಿಸಲು ರಾಜ್ಯ ಸರ್ಕಾರ ಮತ್ತು ಬಿಆರ್ಡಿಸಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಪಳ್ಳಿಕ್ಕೆರೆ ಗ್ರಾಮ ಪಂಚಾಯತಿ ಆಗ್ರಹಿಸಿದೆ.
ಹೈಲೈಟ್ಸ್:
- 20ನೇ ವಾರ್ಡ್ ಸದಸ್ಯ ಮುನೀರ್ ತಮನ್ನ ಅವರು ಪಂಚಾಯತಿನಲ್ಲಿ ನಿರ್ಣಯ ಮಂಡಿಸಿದರು
- ರಾಜ್ಯ ಸರ್ಕಾರ ಮತ್ತು ಬಿಆರ್ಡಿಸಿಯು ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹ
- ಖಾಸಗಿ ಕಂಪನಿಗೆ ಗುತ್ತಿಗೆಗೆ ನೀಡಲಾದ 55 ಎಕರೆ ಭೂಮಿಯಲ್ಲಿನ ಯೋಜನೆಯು ಅನಿಶ್ಚಿತತೆಯಲ್ಲಿ
- ಯೋಜನೆ ಸಾಕಾರಗೊಳ್ಳದ ಕಾರಣ ಕೋಟ್ಯಂತರ ರೂ. ತೆರಿಗೆ ಆದಾಯ ನಷ್ಟ

.jpg)
.jpg)
