ಚೆನ್ನೈ: ಕಾಂಚಿಪುರಂ ಜಿಲ್ಲೆಗೆ ಸಮೀಪದ ಪರಂದೂರ್ನಲ್ಲಿ ಗ್ರೀನ್ಫೀಲ್ಡ್ ವಿಮಾಣ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಕೈಬಿಡುವ ಬಗ್ಗೆ ತಮಿಳುನಾಡು ಸರ್ಕಾರ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಆದರೆ, ಅದಕ್ಕೂ ಮೊದಲೇ, ಏಕನಾಪುರಂ ಗ್ರಾಮ ಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರಿಗೆ ಧನ್ಯವಾದ ಸಲ್ಲಿಸುವ ನಿರ್ಣಯವನ್ನು ಶನಿವಾರ ಅಂಗೀಕರಿಸಲಾಗಿದೆ.
ವಿಮಾನ ನಿಲ್ದಾಣ ಯೋಜನೆ ವಿರುದ್ಧ ಏಕನಾಪುರಂ ಗ್ರಾಮ ಸಭೆಯಲ್ಲಿ 2022ರಿಂದಲೂ ನಿರ್ಣಯ ಮಂಡಿಸಲಾಗುತ್ತಿದೆ. ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ, ವಿಮಾನ ನಿಲ್ದಾಣ ನಿರ್ಮಾಣದ ವಿರುದ್ಧ ವಿಧಾನಸಭಾ ಚುನಾವಣೆಗೂ ಮುನ್ನ ಧ್ವನಿ ಎತ್ತಿತ್ತು. ಕಳೆದ ವರ್ಷ (2025ರಲ್ಲಿ) ಗ್ರಾಮಕ್ಕೆ ಭೇಟಿ ನೀಡಿದ್ದ ವಿಜಯ್, ಪ್ರತಿಭಟನೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದ್ದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಏಕನಾಪುರಂ ಗ್ರಾಮ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಲ್ಲಿ, 'ವಿಮಾನ ನಿಲ್ದಾಣ ಯೋಜನೆಯನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿರುವ ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರಿಗೆ ಗ್ರಾಮ ಸಭೆಯು ಕೃತಜ್ಞತೆ ಸಲ್ಲಿಸುತ್ತದೆ. ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತದೆ' ಎಂದು ಉಲ್ಲೇಖಿಸಲಾಗಿದೆ.
ಆಗಿನ ಡಿಎಂಕೆ ಸರ್ಕಾರ 2022ರಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಮಹಾತ್ವಾಕಾಂಕ್ಷೆ ಯೋಜನೆಯನ್ನು ಘೋಷಿಸಿತ್ತು. ಅದಕ್ಕೆ ಸಂಬಂಧಿಸಿದ ಅನಿಶ್ಚಿತತೆಗಳು ಮುಂದುವರಿದಿರುವ ಹೊತ್ತಲ್ಲಿ ಈ ಬೆಳವಣಿಗೆಯಾಗಿದೆ. ಯೋಜನೆಯ ವಿಚಾರವಾಗಿ ಸರ್ಕಾರ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ಇಂತಹ ಸಂದರ್ಭದಲ್ಲಿ ನಿರ್ಣಯ ಮಂಡನೆಯಾಗಿರುವುದು ಗೊಂದಲ ಸೃಷ್ಟಿಸಿದೆ. ಆದರೆ, ವಿದ್ಯುತ್ ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರು, 'ಪರಂದೂರು ವಿಮಾನ ನಿಲ್ದಾಣದ ವಿಚಾರದಲ್ಲಿ ಟಿವಿಕೆ ಪಕ್ಷದ ನಿಲುವು ಬದಲಾಗದು' ಎಂದು ಹೇಳಿದ್ದರು. ಇದೇ ವರ್ಷ (2026ರ) ಮೇ ತಿಂಗಳಲ್ಲಿ ಟಿವಿಕೆ ಸರ್ಕಾರ ರಚನೆಯಾಗಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಅಧಿಕೃತ ಆದೇಶಕ್ಕೂ ಮೊದಲೇ ಸಿಎಂ ವಿಜಯ್ಗೆ ಧನ್ಯವಾದ ನಿರ್ಣಯ ಮಂಡಿಸಿದ ಗ್ರಾಮ ಸಭೆ!
ಒಂದು ಸಾಲಿನಲ್ಲಿಪರಂದೂರು ವಿಮಾನ ನಿಲ್ದಾಣ ಯೋಜನೆ ರದ್ದತಿಗೆ ಸಂಬಂಧಿಸಿದಂತೆ ಅಧಿಕೃತ ಆದೇಶ ಬರುವ ಮುನ್ನವೇ ಏಕನಾಪುರಂ ಗ್ರಾಮ ಸಭೆ ಸಿಎಂ ವಿಜಯ್ಗೆ ಧನ್ಯವಾದ ನಿರ್ಣಯ ಸಲ್ಲಿಸಿದೆ.
ಏಕನಾಪುರಂ ಗ್ರಾಮ ಸಭೆಯ ನಿರ್ಣಯವೇನು?
ಪರಂದೂರು ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡುವ ತೀರ್ಮಾನ ಕೈಗೊಂಡಿದ್ದಕ್ಕಾಗಿ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರಿಗೆ ಗ್ರಾಮ ಸಭೆಯು ಕೃತಜ್ಞತೆ ಸಲ್ಲಿಸಿ ನಿರ್ಣಯ ಅಂಗೀಕರಿಸಿದೆ.
ಈ ಯೋಜನೆಗೆ ಗ್ರಾಮಸ್ಥರ ವಿರೋಧವೇಕೆ?
ಈ ಯೋಜನೆಯಿಂದ ಸುಮಾರು 900 ಎಕರೆ ಭೂಮಿ ನಾಶವಾಗುವುದಲ್ಲದೆ, 12 ಕೆರೆಗಳು ಮತ್ತು 20ಕ್ಕೂ ಹೆಚ್ಚು ಕೊಳಗಳು ನಾಶವಾಗಲಿವೆ ಎಂಬ ಆತಂಕ ಗ್ರಾಮಸ್ಥರು ಮತ್ತು ಪರಿಸರವಾದಿಗಳಲ್ಲಿದೆ.
ಸರ್ಕಾರದ ಪ್ರಸ್ತುತ ನಿಲುವು ಏನು?
ರಾಜ್ಯ ಸರ್ಕಾರದಿಂದ ಯೋಜನೆ ರದ್ದತಿಯ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲವಾದರೂ, ಟಿವಿಕೆ ಪಕ್ಷದ ನಿಲುವು ಬದಲಾಗುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ.
ಪರಂದೂರು ವಿಮಾನ ನಿಲ್ದಾಣ ಯೋಜನೆಯ ವ್ಯಾಪ್ತಿ ಎಷ್ಟು?
ಸುಮಾರು 27 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ಒಟ್ಟು 5,746 ಎಕರೆ ಭೂಮಿಯ ಅಗತ್ಯವಿದ್ದು, ಇದರಲ್ಲಿ ಈಗಾಗಲೇ 1,700 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.
ಯೋಜನೆಯ ಹಿನ್ನೆಲೆ ಏನು?
2022ರಲ್ಲಿ ಡಿಎಂಕೆ ಸರ್ಕಾರ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿತ್ತು, ಆದರೆ ಸ್ಥಳೀಯವಾಗಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆ ಅನುಷ್ಠಾನವು ಅನಿಶ್ಚಿತತೆಯಲ್ಲಿದೆ.
ಪ್ರಮುಖ ಅಂಕಿಅಂಶಗಳು
27,000 ಕೋಟಿಯೋಜನೆಯ ಅಂದಾಜು ವೆಚ್ಚ5,746 ಎಕರೆಅಗತ್ಯವಿರುವ ಒಟ್ಟು ಭೂಮಿ900 ಎಕರೆಏಕನಾಪುರಂ ವ್ಯಾಪ್ತಿಯಲ್ಲಿರುವ ಭೂಮಿ2022ಯೋಜನೆ ಘೋಷಣೆಯಾದ ವರ್ಷ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಏತನ್ಮಧ್ಯೆ, ಗ್ರೀನ್ಫೀಲ್ಡ್ ವಿಮಾನ ನಿಲ್ದಾಣದ ಸ್ಥಳ ಬದಲಾವಣೆ ಸಂಬಂಧ ತಮಿಳುನಾಡು ಸರ್ಕಾರದಿಂದ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
₹ 27 ಸಾವಿರ ಕೋಟಿ ವೆಚ್ಚದ ಈ ಯೋಜನೆಗೆ 5,746 ಎಕರೆಯಷ್ಟು ಪ್ರದೇಶ ಬೇಕಾಗಿದ್ದು, ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ (ಟಿಐಡಿಸಿಒ) ಈಗಾಗಲೇ 1,700 ಎಕರೆ ವಶಪಡಿಸಿಕೊಂಡಿದೆ. ಉದ್ದೇಶಿತ ಸ್ಥಳದಲ್ಲಿ 1,500 ಎಕರೆಯಷ್ಟು ಪ್ರದೇಶವನ್ನು ಸರ್ಕಾರ ಹೊಂದಿದೆ. ಹೀಗಾಗಿ, ಇನ್ನು 2,500 ಎಕರೆ ಸ್ವಾಧೀನಪಡಿಸಿಕೊಳ್ಳುವುದು ಬಾಕಿ ಇದೆ.
ಪರಂದೂರು ಚೆನ್ನೈನಿಂದ ಸುಮಾರು 70 ಕಿ.ಮೀ. ದೂರದಲ್ಲಿದೆ. ಗ್ರೀನ್ಫೀಲ್ಡ್ ಚೆನ್ನೈ - ಬೆಂಗಳೂರು ಎಕ್ಸ್ಪ್ರೆಸ್ವೇ ಹಾಗೂ ತಿರುಮಲಪುರ ರೈಲು ನಿಲ್ದಾಣವೂ ಉದ್ದೇಶಿತ ಯೋಜನಾ ಸ್ಥಳದಿಂದ ಕೆಲವೇ ಕಿ.ಮೀ. ದೂರದಲ್ಲಿ ಇವೆ. ಹೀಗಾಗಿ, ಸುಲಭವಾಗಿ ಸಂಪರ್ಕ ಸಾಧಿಸಬಹುದು ಎಂಬ ಕಾರಣಕ್ಕೆ ಪರಂದೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಸುಮಾರು 900 ಎಕರೆ ಏಕನಾಪುರಂ ವ್ಯಾಪ್ತಿಯಲ್ಲಿದ್ದು, ಇಲ್ಲಿನ ಗ್ರಾಮಸ್ಥರು ತಮ್ಮ ಜಾಗ ಬಿಟ್ಟುಕೊಡಲು ನಿರಾಕರಿಸಿದ್ದಾರೆ.
ಈ ಯೋಜನೆಯು ಸುಮಾರು 12 ದೊಡ್ಡ ಕೆರೆಗಳನ್ನು, 20ಕ್ಕೂ ಹೆಚ್ಚು ಕೊಳಗಳು, ಮಳೆ ನೀರು ಸಂಗ್ರಹಿಸಲು ಹಲವೆಡೆ ರೂಪಿಸಿರುವ ನೀರಾವರಿ ಹೊಂಡಗಳನ್ನು ನಾಶಮಾಡಲಿದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ನೂರಾರು ಎಕರೆ ಜೌಗು ಪ್ರದೇಶ ನಾಶವಾಗಲಿದ್ದು, ಮುಂಗಾರು ಮಳೆ ಸಂದರ್ಭದಲ್ಲಿ ಚೆನ್ನೈ ಪ್ರವಾಹದಲ್ಲಿ ಮುಳುಗಲಿದೆ ಎಂದೂ ಎಚ್ಚರಿಸಿದ್ದಾರೆ.
ಪರಂದೂರು, ನಾಗಪಟ್ಟು ಹಾಗೂ ನೆಲವೊಯ್ ಗ್ರಾಮಗಳಲ್ಲಿಯೂ ಯೋಜನೆಗೆ ವಿರೋಧ ವ್ಯಕ್ತವಾಗಿತ್ತು. ಆದರೆ, ದಿನ ಕಳೆದಂತೆ ಪ್ರತಿಭಟನೆಯ ಬಿಸಿ ಕಡಿಮೆಯಾಗಿದೆ.
ನಾಲ್ಕು ಸ್ಥಳಗಳು ಸರ್ಕಾರದ ಮುಂದಿದ್ದವು
ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡು ಸರ್ಕಾರವು ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಎದುರು ಇರಿಸಿದ್ದ ಪ್ರಸ್ತಾವನೆಯಲ್ಲಿ ನಾಲ್ಕು ಸ್ಥಳಗಳನ್ನು ಸೂಚಿಸಿತ್ತು. ತಿರುಪ್ಪರೂರ್, ಪರಂದೂರ್, ಪಣ್ಣೂರ್ ಹಾಗೂ ಪದಲಮ್ನಲ್ಲಿ ಪರಶೀಲನೆ ನಡೆಸಿದ ಅಧಿಕಾರಿಗಳು ಪರಂದೂರು ಮತ್ತು ಪಣ್ಣೂರ್ ಅನ್ನು ಶಾರ್ಟ್ಲಿಸ್ಟ್ ಮಾಡಿತ್ತು. ಪಟ್ಟಿಯಲ್ಲಿನ ಮೊದಲನೇ ಸ್ಥಳವನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿತ್ತು.
ಚೆನ್ನೈ ಹೊರವಲಯದಲ್ಲೇ ಇರುವ ಶ್ರೀಪೆರುಂಬುದೂರ್ನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 2006ರಲ್ಲೇ ರಾಜ್ಯ ಸರ್ಕಾರ ಯೋಜಿಸಿತ್ತು. ಆದರೆ, ಆಗ ಅಧಿಕಾರದಲ್ಲಿದ್ದ ಡಿಎಂಕೆಯ ಮಿತ್ರಪಕ್ಷದ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ವಿರೋಧ ವ್ಯಕ್ತಪಡಿಸಿತ್ತು. ಹಾಗಾಗಿ, ಆಗ ಯೋಜನೆ ಕಾರ್ಯಗತಗೊಂಡಿರಲಿಲ್ಲ. ಈ ನಿಟ್ಟಿನಲ್ಲಿ 2011ರಿಂದ 2021ರವರಗೆ ಅಧಿಕಾರದಲ್ಲಿದ್ದ ಎಐಎಡಿಎಂ ಸರ್ಕಾರ ಮಾಡಿದ ಪ್ರಯತ್ನಗಳೂ ಕೈಗೂಡಿರಲಿಲ್ಲ.

