ನವದೆಹಲಿ: 2024-25ರಲ್ಲಿ ಕೇಂದ್ರ ಸರಕಾರದ ಲೆಕ್ಕಪತ್ರಗಳನ್ನು ಆಧರಿಸಿ ಸಂಸತ್ತಿನಲ್ಲಿ ಮಂಡಿಸಲಾದ ಮಹಾಲೇಖಪಾಲರ (ಸಿಎಜಿ) ವರದಿಯ ಪ್ರಕಾರ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿಯ (ಎನ್ಡಿಆರ್ಎಫ್) ಶೇ.53ಕ್ಕಿಂತ ಹೆಚ್ಚು ಹಣ ಬಳಸಲ್ಪಡದೆ ಉಳಿದಿದೆ.
ತೀವ್ರ ನೈಸರ್ಗಿಕ ವಿಕೋಪಗಳ ಪರಿಹಾರಕ್ಕಾಗಿ ಎನ್ಡಿಆರ್ಎಫ್ ಅಡಿ ಮಂಜೂರಾಗಿದ್ದ ಒಟ್ಟು 11,474 ಕೋಟಿ ರೂ.ಗಳಲ್ಲಿ ಕೇವಲ 5,356 ಕೋಟಿ ರೂ.ಗಳನ್ನು ರಾಜ್ಯಗಳಿಗೆ ವರ್ಗಾಯಿಸಲಾಗಿದೆ. ಉಳಿದ 6,117.97 ಕೋಟಿ ರೂ.ಗಳನ್ನು 'ಉಳಿತಾಯ' (ಖರ್ಚಾಗದ ಹಣ) ಎಂದು ಸಿಎಜಿ ಪಟ್ಟಿ ಮಾಡಿದೆ.
ರಾಷ್ಟ್ರೀಯ ವಿಪತ್ತು ಶಮನ ನಿಧಿ (ಎನ್ಡಿಎಂಎಫ್) ಅಡಿ ಮಂಜೂರಾಗಿದ್ದ 2,868 ಕೋಟಿ ರೂ.ಗಳಲ್ಲಿ ಕೇವಲ 719.72 ಕೋಟಿ ರೂ.ಗಳನ್ನು (ಸುಮಾರು ಶೇ.25) ರಾಜ್ಯಗಳಿಗೆ ವರ್ಗಾಯಿಸಲಾಗಿದೆ ಎಂದೂ ವರದಿಯು ಬೆಟ್ಟು ಮಾಡಿದೆ.
ಎನ್ಡಿಆರ್ಎಫ್ ಅನ್ನು ತುರ್ತು ಪ್ರತಿಕ್ರಿಯೆ, ಪರಿಹಾರ ಮತ್ತು ಪುನರ್ವಸತಿ ವೆಚ್ಚಗಳಿಗಾಗಿ ಬಳಸಿದರೆ ಎನ್ಡಿಎಮ್ಎಫ್ ಅನ್ನು ವಿಕೋಪಗಳ ಅಪಾಯ ಅಥವಾ ಪರಿಣಾಮವನ್ನು ಕಡಿಮೆ ಮಾಡುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬಳಸಲಾಗುತ್ತದೆ.
ವಿಶೇಷ ನೆರವಿಗಾಗಿ ಕಾಯ್ದಿರಿಸಿದ್ದ 20,000 ಕೋಟಿ ರೂ.ಗಳಲ್ಲಿ ಕೇವಲ 3,350 ಕೋಟಿ ರೂ.ಗಳನ್ನು (ಶೇ.83 ಕ್ಕೂ ಹೆಚ್ಚು ಹಣ ಖರ್ಚಾಗಿಲ್ಲ) ವೆಚ್ಚ ಮಾಡಲಾಗಿದೆ. ಅಲ್ಲದೆ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಿಗಾಗಿ ಮುಂಗಡ ನೆರವಿಗಾಗಿ ಲಭ್ಯವಿರುವ 100 ಕೋಟಿ ರೂ.ಅನುದಾನದಲ್ಲಿ ಒಂದೇ ಒಂದು ಪೈಸೆಯನ್ನೂ ಬಳಸಲಾಗಿಲ್ಲ ಎಂದು ವರದಿಯು ಎತ್ತಿ ತೋರಿಸಿದೆ.
2022-23, 2023-24 ಮತ್ತು 2024-25ರ ಹಣಕಾಸು ವರ್ಷಗಳಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ 'ರಾಜ್ಯಗಳಿಗೆ ವರ್ಗಾವಣೆ' ವಿಭಾಗದಲ್ಲಿ ನಿರಂತರವಾಗಿ ಹಣ ಖರ್ಚಾಗದೆ ಉಳಿಯುತ್ತಿರುವುದನ್ನು ಸಿಎಜಿ ಎತ್ತಿ ತೋರಿಸಿದೆ. ಈ ಅವಧಿಗಳಲ್ಲಿ ಕ್ರಮವಾಗಿ 67,882 ಕೋಟಿ ರೂ., 46,012.89 ಕೋಟಿ ರೂ. ಮತ್ತು 36,219 ಕೋಟಿ ರೂ.ಗಳಷ್ಟು ಅನುದಾನ ಬಳಸಲ್ಪಡದೆ ಉಳಿದಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ನಿರ್ದೇಶನದಂತೆ ವಾಸ್ತವಿಕ ಬಜೆಟ್ ರೂಪಿಸುವ ಕುರಿತು ಹಣಕಾಸು ಸಚಿವಾಲಯವು ಹೊರಡಿಸಿದ ಮಾರ್ಗದರ್ಶಿ ಸೂಚಿಗಳು ಹಾಗೂ ನಮ್ಮ ಆಡಿಟ್ ವರದಿಗಳಲ್ಲಿ ನಿರಂತರವಾಗಿ ಎಚ್ಚರಿಸಿದ್ದರೂ ಸಹ ಈ ಪರಿ ಉಳಿತಾಯ ದಾಖಲಾಗುತ್ತಿದೆ ಎಂದು ಸಿಎಜಿ ವರದಿ ಉಲ್ಲೇಖಿಸಿದೆ.
ಸೂಕ್ತ ಆರ್ಥಿಕ ನೆರವು ಲಭಿಸದೆ ರಾಜ್ಯಗಳ ಸಂಕಷ್ಟ
ಅಸ್ಸಾಮಿನಲ್ಲಿ ಪ್ರವಾಹ ಸಂದರ್ಭದಲ್ಲಿ ಕೋರಿದ ಒಟ್ಟು ನೆರವಿನಲ್ಲಿ ಕೇವಲ ಶೇ.2.4 ರಷ್ಟು ಮಾತ್ರ ಲಭಿಸಿದೆ ಎಂದು ಸಂಸದ ಗೌರವ್ ಗೊಗೊಯ್ ಆರೋಪಿಸಿದ್ದಾರೆ.
ಕೇರಳ ಸರಕಾರವು 2023ರ ವಯನಾಡ್ ಭೂಕುಸಿತದ ಪುನರ್ವಸತಿಗಾಗಿ 2,221 ಕೋಟಿ ರೂ.ಗಳ ಆರ್ಥಿಕ ನೆರವನ್ನು ಕೋರಿದ್ದರೂ ಕೇಂದ್ರದಿಂದ 260.56 ಕೋಟಿ ರೂ. ಅನುಮೋದನೆ ದೊರೆತಿದ್ದು, ಅನುದಾನ ಬಿಡುಗಡೆ ವಿಚಾರದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿದೆ.
2024ರ ಬರ ಪರಿಹಾರವಾಗಿ 18,000 ಕೋಟಿ ರೂ. ಬೇಡಿಕೆಯಿಟ್ಟದ್ದರೂ ಕೇಂದ್ರವು 3,499 ಕೋಟಿ ರೂ. ಬಿಡುಗಡೆ ಮಾಡಿದ್ದರಿಂದ ಕರ್ನಾಟಕವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು.
ತಮಿಳುನಾಡು 2023ರ ಮಿಚೌಂಗ್ ಚಂಡಮಾರುತಕ್ಕೆ 37,907.21 ಕೋಟಿ ರೂ.ಪರಿಹಾರ ಕೋರಿದ್ದರೂ ಕೇವಲ 276 ಕೋಟಿ ರೂ. ಮಂಜೂರಾಗಿದೆ.

