ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೈಗೊಂಡ ಅಧಿಕೃತ ಪ್ರವಾಸ ಹಾಗೂ ಇದಕ್ಕಾಗಿ ಸಾರ್ವಜನಿಕ ನಿಧಿಯಿಂದ ಬಳಸಲಾದ ವೆಚ್ಚದ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಬಹಿರಂಗಪಡಿಸಲು ಚುನಾವಣಾ ಆಯೋಗವು ನಿರಾಕರಿಸಿದೆ. ಇದು 'ವೈಯಕ್ತಿಕ ಮಾಹಿತಿ' ಎಂದು ಉಲ್ಲೇಖಿಸಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಹೇಳಿದ್ದಾರೆ.
ಚುನಾವಣಾ ಆಯುಕ್ತರಾಗಿ 2025ರ ಫೆಬ್ರುವರಿ 19ರಂದು ಅಧಿಕಾರ ವಹಿಸಿಕೊಂಡಾಗಿನಿಂದ ಜ್ಞಾನೇಶ್ ಅವರು ಕೈಗೊಂಡ ಎಲ್ಲಾ ಅಧಿಕೃತ ಪ್ರವಾಸಗಳ ಮಾಹಿತಿ ನೀಡುವಂತೆ ಕೋರಿ ಸಾಕೇತ್, ಆರ್ಟಿಐ ಮೂಲಕ ಜೂನ್ 18ರಂದು ಅರ್ಜಿ ಸಲ್ಲಿಸಿದ್ದರು.
ಜ್ಞಾನೇಶ್ ಅವರು ಕೈಗೊಂಡ ದೇಶೀಯ ಮತ್ತು ವಿದೇಶ ಪ್ರವಾಸಗಳ ಒಟ್ಟು ಸಂಖ್ಯೆ, ದಿನಾಂಕ, ಭೇಟಿ ನೀಡಿದ ಸ್ಥಳ, ಪ್ರಯಾಣದ ಉದ್ದೇಶ, ವಿಧಾನ, ಸರ್ಕಾರದ ವೆಚ್ಚದಲ್ಲಿ ಆಯುಕ್ತರ ಜತೆಗಿದ್ದ ಅಧಿಕಾರಿಗಳ ವಿವರ, ಸ್ಥಳೀಯ ಸಾರಿಗೆ, ದೈನಂದಿನ ಭತ್ಯೆ ಹಾಗೂ ಇತರ ಮಾಹಿತಿ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
ಕೋರಲಾದ ವಿವರವು ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದೆ. ಆದ್ದರಿಂದ ಆರ್ಟಿಐ ಕಾಯ್ದೆ 2005ರ ಸೆಕ್ಷನ್ 8(1)(j) ಅಡಿಯಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿ ಶಿಲ್ಪಿ ಶ್ರೀವಾಸ್ತವ ಪ್ರತಿಕ್ರಿಯಿಸಿರುವ ಪ್ರತಿಯನ್ನು ಗೋಖಲೆ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ.
'ಅಧಿಕೃತ ಭೇಟಿಗಳಿಗೆ ಸಾರ್ವಜನಿಕ ನಿಧಿಯನ್ನು ಬಳಸಿದಾಗ ಅದನ್ನು ಹೇಗೆ ವೈಯಕ್ತಿಕ ಮಾಹಿತಿ ಎಂದು ಕರೆಯಲಾಗುತ್ತದೆ. ಪ್ರಧಾನಿಯವರ ವಿದೇಶ ಪ್ರವಾಸದ ವೆಚ್ಚವನ್ನೂ ಸಂಸತ್ತಿನಲ್ಲಿ ಬಹಿರಂಗಪಡಿಸಲಾಗಿದೆ. ಜ್ಞಾನೇಶ್ ಅವರ ಭೇಟಿಯ ವಿವರಗಳನ್ನು ಬಹಿರಂಗಪಡಿಸದೇ ಇರುವ ಮೂಲಕ ಚುನಾವಣಾ ಆಯೋಗವು ಏನನ್ನು ಮುಚ್ಚಿಡಲು ಯತ್ನಿಸುತ್ತಿದೆ? ಮಾಹಿತಿ ನೀಡಲು ಆಯೋಗವು ಹೆದರುತ್ತಿದೆಯೇ' ಎಂದು ಗೋಖಲೆ ಪ್ರಶ್ನಿಸಿದ್ದಾರೆ.
'ಜ್ಞಾನೇಶ್ ಕುಮಾರ್ ಅವರಲ್ಲಿ ಅಷ್ಟೊಂದು ವಿಶೇಷತೆ ಏನಿದೆ?, ಜ್ಞಾನೇಶ್ ಕುಮಾರ್ ಪ್ರವಾಸಕ್ಕೆಂದು ವೆಚ್ಚ ಮಾಡಿದ ಹಣ ವಿವರ ಬಹಿರಂಗಪಡಿಸಲು ಆಯೋಗ ಭಯಪಡುತ್ತಿದೆಯೇ' ಎಂದು ಅವರು ಗುಡುಗಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಜ್ಞಾನೇಶ್ ಅವರನ್ನು ನೇಮಿಸಿದಾಗಿನಿಂದ ಚುನಾವಣಾ ಆಯೋಗವು ಕಪ್ಪು ಕುಳಿಯಂತಾಗಿದೆ. ಆಯೋಗವನ್ನು ಮೋದಿ, ಶಾ ಹಾಗೂ ಜ್ಞಾನೇಶ್ ತಮ್ಮ ವೈಯಕ್ತಿಕ ಆಸ್ತಿ ಎಂಬಂತೆ ಪರಿಗಣಿಸಿದ್ದಾರೆ' ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ತಿದ್ದುಪಡಿ ಮಾಡಲಾದ ಸೆಕ್ಷನ್ 8(1)(j), ಸಾರ್ವಜನಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ವಿಷಯವಾಗಿದ್ದರೂ ಸಹ ವೈಯಕ್ತಿಕ ಮಾಹಿತಿ ನಿರಾಕರಿಸಲು ಅವಕಾಶ ನೀಡುತ್ತದೆ. ಈ ಮೊದಲು, ಸಾರ್ವಜನಿಕ ಹಿತಾಸಕ್ತಿಗೆ ಒಳಪಟ್ಟಿದ್ದರೆ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ನಿಯಮದಲ್ಲಿ ಅವಕಾಶವಿತ್ತು. 2023ರ ತಿದ್ದುಪಡಿಯು ಮಾನವ ಹಕ್ಕುಗಳ ಹೋರಾಟಗಾರರಿಂದ ತೀವ್ರ ಟೀಕೆಗೆ ಒಳಗಾಗಿತ್ತು.

