ಒಟ್ಟಾವೊ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೆನಡಾ ಪ್ರವಾಸ ಕೈಗೊಳ್ಳುತ್ತಿರುವುದಕ್ಕೆ ನೂರಕ್ಕೂ ಅಧಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಈ ಸಂಬಂಧ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಕೆಲವು ಸಚಿವರಿಗೆ ಪತ್ರ ಬರೆದಿದ್ದು, ಮೋಹನ್ ಭಾಗವತ್ ಅವರ ಭೇಟಿಯ ಕುರಿತು ರಾಜಕೀಯ ಒತ್ತಡಗಳನ್ನು ಬದಿಗಿಟ್ಟು, ಕಾನೂನು ನಿಯಮಗಳ ಅನುಸಾರವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿವೆ.
'ಭಾಗವತ್ ಅವರು ಕೆನಡಾ ಪ್ರವೇಶಿಸದಂತೆ ನಿರ್ಭಂಧಿಸಬೇಕು' ಎಂದು ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್ಡಿಪಿ) ಸಂಸದರಾದ ಜೆನ್ನಿ ಕ್ವಾನ್, ಹೀದರ್ ಮೆಕ್ಫರ್ಸನ್ ಸೇರಿದಂತೆ ಹಲವು ಸಂಘಟನೆಗಳು ಕರೆ ನೀಡಿದ್ದವು. ಇದರ ವಿರುದ್ಧ ಸದ್ಯ ನೂರಕ್ಕೂ ಹೆಚ್ಚು ಸಂಘಟನೆಗಳು, ಪ್ರಧಾನಿ ಕಾರ್ನಿ, ಸಾರ್ವಜನಿಕ ಸುರಕ್ಷತೆ ಇಲಾಖೆ ಸಚಿವ ಗ್ಯಾರಿ ಆನಂದಸಂಗರೀ, ವಲಸೆ ಸಚಿವೆ ಲೇನಾ ಮೆಟ್ಲೆಜ್ ದಿಯಾಬ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಅನಿತಾ ಆನಂದ್ ಅವರಿಗೆ ಪತ್ರ ಬರೆದಿವೆ.
'ಹಿಂದೂ ಸಮುದಾಯದ 10 ಲಕ್ಷಕ್ಕೂ ಹೆಚ್ಚು ಜನರು ಕೆನಡಾದಲ್ಲಿದ್ದಾರೆ. ಭಾಗವತ್ ಅವರು ಇಲ್ಲಿಗೆ ಭೇಟಿ ನೀಡುತ್ತಿರುವುದು ಸಮುದಾಯದವರ ಪಾಲಿಗೆ ಮಹತ್ವದ ವಿಚಾರ' ಎಂಬುದನ್ನು ಒತ್ತಿ ಹೇಳಿವೆ. ಹಾಗೆಯೇ, 'ಆರ್ಎಸ್ಎಸ್ ಅನ್ನು ಸಮುದಾಯ ಹಾಗೂ ಸಾಮಾಜಿಕ ಸೇವೆಗೆ ಹೆಸರಾದ ಸಂಘಟನೆ' ಎಂದು ಬಣ್ಣಿಸಲಾಗಿದೆ.
ಮೋಹನ್ ಭಾಗವತ್ ಹೇಳಿಕೆಗೆ ಬಿಜೆಪಿ ಬೆಂಬಲ
ಭಾಗವತ್ ಅವರು ಕೆನಡಾಗೆ ಭೇಟಿ ನೀಡದಂತೆ ತಡೆಯುವ ಸಲುವಾಗಿ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.
'ಆರ್ಎಸ್ಎಸ್ ಮುಖ್ಯಸ್ಥರು ಸಾಕಷ್ಟು ಬಾರಿ ದ್ವೇಷ ಭಾಷಣ ಮಾಡಿದ ಹಿನ್ನೆಲೆ ಹೊಂದಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸೆಯನ್ನು ಪ್ರತಿಪಾದಿಸಿದ್ದಾರೆ. ಬೆದರಿಕೆ, ಕ್ರಿಮಿನಲ್ ಆರೋಪ ಪ್ರಕರಣಗಳನ್ನು ಎದುರಿಸುತ್ತಿದ್ದು, ನಿಷೇಧಿತ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ' ಎಂಬಿತ್ಯಾದಿ ಆರೋಪಗಳು ಸದ್ಯ ಕೇಳಿಬರುತ್ತಿವೆ.
ಇವುಗಳ ಸತ್ಯಾಸತ್ಯತೆ ಪ್ರಶ್ನಿಸಿರುವ ಸಂಘಟನೆಗಳು, 'ಇವು ಅತ್ಯಂತ ಗಂಭೀರ ಆರೋಪಗಳಾಗಿದ್ದು, ಸ್ಪಷ್ಟ, ವಿಶ್ವಾಸಾರ್ಹ ಪುರಾವೆಗಳಿಲ್ಲದೆ ಸತ್ಯವೆಂದು ಪರಿಗಣಿಸಬಾರದು' ಎಂದು ಮನವಿ ಮಾಡಿವೆ.
ಭಾಗವತ್ ಅವರು ಆಗಸ್ಟ್ 25ರಿಂದ ಅಮೆರಿಕ, ಕೆನಡಾ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಪ್ರವಾಸ ನಿರ್ಬಂಧಿಸಬೇಕು ಎಂಬ ಕೂಗು ಅಮೆರಿಕದಲ್ಲಿಯೂ ಕೇಳಿಬಂದಿದೆ.

