ಕುಂಬಳೆ: ಜಿಲ್ಲೆಯಾದ್ಯಂತ ಬೀದಿ ನಾಯಿಗಳ ದಾಳಿ ತೀವ್ರಗೊಳ್ಳುತ್ತಿದೆ. ಆಕ್ರಮಣಕಾರಿ ಬೀದಿ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಸ್ಥಳೀಯಾಡಳಿತ ಸಂಸ್ಥೆಗಳು ಪರಿಗಣಿಸುತ್ತಿಲ್ಲ. ಜನರ ಸುರಕ್ಷತೆಯ ವಿಷಯದಲ್ಲೂ ಕ್ರಮ ಕೈಗೊಳ್ಳಲು ಅಧಿಕೃತರು ಹಿಂಜರಿಯುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ಮತ್ತು ಆಡಳಿತ ಸಮಿತಿಗಳು ನ್ಯಾಯಾಲಯದ ಸೂಚನೆಗಳನ್ನು ಸಮರ್ಪಕವಾಗಿ ಪಾಲಿಸಬೇಕೆಂದು ಜನರು ಒತ್ತಾಯಿಸಲು ಪ್ರಾರಂಭಿಸಿದ್ದಾರೆ. ಅಪಾಯಕಾರಿ ಬೀದಿ ನಾಯಿಗಳನ್ನು ಗುರುತಿಸುವುದು, ಕೊಲ್ಲುವುದು ಮತ್ತು ಸಂತಾನಹರಣ ಚಿಕಿತ್ಸೆ ನೀಡುವ ಜವಾಬ್ದಾರಿ ಅವರದ್ದಾಗಿದ್ದರೂ, ಅನೇಕ ಸ್ಥಳಗಳಲ್ಲಿ ಈ ಕ್ರಮಗಳು ನಿಷ್ಪರಿಣಾಮಕಾರಿಯಾಗಿವೆ ಎಂದು ಸ್ಥಳೀಯರು ದೂರುತ್ತಾರೆ. ಒಂದು ಪ್ರದೇಶದಲ್ಲಿ ನಿರಂತರವಾಗಿ ತೊಂದರೆ ಉಂಟುಮಾಡುವ ಮತ್ತು ಸಾಕು ಪ್ರಾಣಿಗಳನ್ನು ಕೊಲ್ಲುವ ನಾಯಿಗಳ ಹಿಂಡುಗಳ ಬಗ್ಗೆ ದೂರುಗಳು ಬಂದ ನಂತರವೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಮಕ್ಕಳ ಮೇಲೆ ದಾಳಿ:
ಕಳೆದ ಕೆಲವು ದಿನಗಳಲ್ಲಿ, ವಲಿಯಪರಂಬದ ಎರಡು ಸ್ಥಳಗಳಲ್ಲಿ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿದ್ದವು. 7, 9 ಮತ್ತು 11 ವರ್ಷ ವಯಸ್ಸಿನ ಮಕ್ಕಳಿಗೆ ಬೀದಿ ನಾಯಿಗಳ ಹಿಂಡು ಕಚ್ಚಿದೆ. ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪ್ಪಳ ಬಂದ್ಯೋಡು ಬಳಿ ಅಡ್ಕದಲ್ಲಿ ಬೀದಿ ನಾಯಿ ಮದರಸಾ ವಿದ್ಯಾರ್ಥಿಯನ್ನು ಅಟ್ಟಾಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಪರವನಡ್ಕ, ಪೈವಳಿಕೆ, ಬಾಯಾರು, ಹೊಸಂಗಡಿ ಮೊದಲಾದೆಡೆ ನಾಯಿಗಳ ಠಳಾಯಿಸುವಿಕೆ ವ್ಯಾಪಕವಾಗಿ ಹೆಚ್ಚಿದೆ. ಬದಿಯಡ್ಕದಲ್ಲಿ ಬೀದಿ ನಾಯಿಗಳು ಪೇಟೆಯಲ್ಲಿ ಮುಕ್ತವಾಗಿ ತಿರುಗಾಡುತ್ತಿವೆ. ಬಹುತೇಕ ಪ್ರತಿದಿನ ವಿವಿಧ ಪ್ರದೇಶಗಳಿಂದ ಇದೇ ರೀತಿಯ ದಾಳಿಗಳು ವರದಿಯಾಗುತ್ತಿವೆ.
ಪ್ರಬಲ ಪ್ರತಿಭಟನೆ:
ಕೆಲವು ದಿನಗಳ ಹಿಂದೆ, ಮಕ್ಕಳು ಮನೆಯಿಂದ ಹೊರಬರಲು ಸಾಧ್ಯವಾಗದ ಪ್ರಸ್ತುತ ಪರಿಸ್ಥಿತಿಯನ್ನು ಉಲ್ಲೇಖಿಸಿ ಬಿಜೆಪಿ ಪ್ರತಿನಿಧಿಗಳು ಮೊಗ್ರಾಲ್ ಪುತ್ತೂರು ಪಂಚಾಯತಿ ಕಚೇರಿಯ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದರು. ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಮತ್ತು ಆಡಳಿತ ಸಮಿತಿ ಕಣ್ಣು ಮುಚ್ಚಿಕೊಂಡಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಉಪ ಆರೋಗ್ಯ ಕೇಂದ್ರಗಳಲ್ಲಿ ಜನರು ನಾಯಿಗಳ ಕಡಿತಗಳಿಂದ ಗಾಯಗೊಂಡು ಚಿಕಿತ್ಸೆಗೆ ಬರುತ್ತಿರುವುದು ವರದಿಯಾಗಿದೆ. ಜನರು ವಿವಿಧ ಉದ್ದೇಶಗಳಿಗಾಗಿ ಅವಲಂಬಿಸಿರುವ ಗ್ರಾಮ ಕಚೇರಿ, ಪಂಚಾಯತಿ ಕಚೇರಿ, ಪೋಲೀಸ್ ಠಾಣೆ, ರೈಲ್ವೆ ನಿಲ್ದಾಣ ಮತ್ತು ಶಾಲೆಗಳಂತಹ ಸ್ಥಳಗಳು ಬೀದಿ ನಾಯಿಗಳ ನೆಲೆಯಾಗಿದೆ. ಬಸ್ ನಿಲ್ದಾಣಗಳಲ್ಲಿ ನಾಯಿಗಳಿಗೆ ಬಿಸ್ಕತ್ತು ಮತ್ತು ಆಹಾರವನ್ನು ನೀಡುವ ಮೂಲಕ ಅವುಗಳನ್ನು ರಕ್ಷಿಸುವ ಜನರಿದ್ದಾರೆ. ಈ ಸ್ಥಳಗಳಿಂದ ನಾಯಿಗಳ ದಾಳಿ ತಡೆಯಲು ಅಧಿಕಾರಿಗಳು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ಅಭಿಮತ:
-ಬೀದಿ ನಾಯಿಗಳ ದಾಳಿ ತೀವ್ರಗೊಂಡಿದೆ. ಈ ಬಗ್ಗೆ ಅಧಿಕೃತರಿಗೆ ಹಲವು ಬಾರಿ ಕ್ರಮಕ್ಕೆ ಒತ್ತಾಯಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ದಿನಗಳ ಹಿಂದೆ ತನ್ನ ಮನೆ ಪರಿಸರದಲ್ಲಿ ಮದರಸಾದಿಂದ ಬರುತ್ತಿದ್ದ ತನ್ನ ಪುತ್ರನ ಮೇಲೆ ಬಿದಿ ನಾಯಿ ಆಕ್ರಮಣಕ್ಕೆ ಯತ್ನಿಸಿದ್ದು, ಕೂದಳೆಳೆಯ ಅಂತರದಲ್ಲಿ ಆತ ಪಾರಾದ. ಈ ಬಗ್ಗೆ ಮನೆಯ ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದರೂ ಅಧಿಕೃತರು ಈವರೆಗೆ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಚಕಾರವೆತ್ತದಿರುವುದು ಅಚ್ಚರಿ ಮೂಡಿಸಿದೆ.
-ಝೈನುದ್ದೀನ್
ಹಾಜಿ ಎಫ್.ಎಂ.ರೋಡ್ ಅಡ್ಕ. ಬಂದ್ಯೋಡು.

.jpg)
.jpg)
