ಇಂದೋರ್: 'ಛಾತ್ರೋಂ ಕಿ ಗೂಂಜ್' (ವಿದ್ಯಾರ್ಥಿಗಳ ಧ್ವನಿ), ರಾಜಕೀಯ ಕಾರ್ಯಕ್ರಮವಲ್ಲ. ಪ್ರಸ್ತಾಪಿತ ಜಾಗದಲ್ಲಿ ನಡೆಸಲು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದರೆ ರಸ್ತೆ ಮೇಲೆ ಕಾರ್ಯಕ್ರಮ ನಡೆಸುತ್ತೇವೆ' ಎಂದು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿತು ಪಟ್ವಾರಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.
'ಇಂದೋರ್ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 10.08 ಲಕ್ಷ ನೀಡಿ ರೀಜನಲ್ ಪಾರ್ಕ್ ಎದುರಿನ ಮೈದಾನದ ಸುಮಾರು 12 ಸಾವಿರ ಚದರ ಅಡಿ ಜಾಗವನ್ನು ಕಾಂಗ್ರೆಸ್ ತಾತ್ಕಾಲಿಕ ಭೋಗ್ಯಕ್ಕೆ ಪಡೆದಿದೆ. ಆದರೆ ಇನ್ನೂ ಅನುಮತಿ ಸಿಕ್ಕಿಲ್ಲ. ಸರ್ಕಾರಿ ಪ್ರಕ್ರಿಯೆ ಬಾಕಿ ಇದೆ' ಎಂದು ತಿಳಿಸಿದ್ದಾರೆ.
'ಪೊಲೀಸ್ ಅಥವಾ ಯಾವುದೇ ಇಲಾಖೆಯಿಂದ ನಿಯಮಾನುಸಾರ ಅನುಮತಿ ಕೋರಲಿದ್ದೇವೆ. ₹10 ಕೋಟಿ ಕೇಳಿದರೂ ಪಾವತಿಸಲಿದ್ದೇವೆ' ಎಂದು ಪತ್ರಕರ್ತರಿಗೆ ತಿಳಿಸಿದರು.
'ವಾಜಪೇಯಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಮಧ್ಯಪ್ರದೇಶದಲ್ಲಿದ್ದ ಕಾಂಗ್ರೆಸ್ ಸರ್ಕಾರ ಉಚಿತ ಅವಕಾಶ ಕಲ್ಪಿಸಿತ್ತು. ಆದರೆ ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಬಗ್ಗೆ ಬಿಜೆಪಿ ಸರ್ಕಾರದ ಧೋರಣೆ ಒಳ್ಳೆಯ ರಾಜಕಾರಣವಲ್ಲ' ಎಂದರು.
ಇದೇ 12ರಂದು ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಸಿಗದ ಕಾರಣ 19ಕ್ಕೆ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಂದೂಡಿದೆ.

