ನವದೆಹಲಿ (PTI): ಅರಾವಳಿ ಪರ್ವತ ಶ್ರೇಣಿಯ ಮರು ವ್ಯಾಖ್ಯಾನ ಮತ್ತು ರಕ್ಷಣೆ ಕುರಿತ ವರದಿ ಸಲ್ಲಿಕೆಗೆ ನೀಡಿರುವ ಗಡುವನ್ನು ಆರು ತಿಂಗಳು ವಿಸ್ತರಿಸಲು ಉನ್ನತಾಧಿಕಾರ ಸಮಿತಿ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನಾ ಅವರ ಪೀಠವು ನ.30ರ ಒಳಗೆ ವರದಿ ಸಲ್ಲಿಸಲು ನಿರ್ದೇಶಿಸಿದೆ.
ಅರಾವಳಿ ವಿಚಾರದಲ್ಲಿ ತುರ್ತು ಪ್ರಶ್ನೆಗಳಿವೆ. ಅವುಗಳಿಗೆ ಪ್ರತ್ಯೇಕವಾಗಿ ಪರಿಹಾರ ಸೂಚಿಸಲು ಮಧ್ಯಂತರ ವರದಿ ಸಲ್ಲಿಸಿ. ರಾಜಸ್ಥಾನ, ಗುಜರಾತ್ನ ಆದಿವಾಸಿ ಸಮುದಾಯ ಸೇರಿ ಎಲ್ಲ ಬಾಧಿತರ ಅಭಿಪ್ರಾಯ ಆಲಿಸಬೇಕು' ಎಂದು ಪೀಠ ಸೂಚಿಸಿತು.
ವೈವಾಹಿಕ ಅತ್ಯಾಚಾರ: ಕೇಂದ್ರದ ನಿಲುವು ಬಯಸಿದ 'ಸುಪ್ರೀಂ'
ನವದೆಹಲಿ (ಪಿಟಿಐ): ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬೇಕು ಎಂಬುದಕ್ಕೆ ಸಂಬಂಧಿಸಿದ ಅರ್ಜಿಗಳ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವು ತಿಳಿಸಲಿ, ಆ ಬಳಿಕವಷ್ಟೇ ಈ ವಿಚಾರದ ಕುರಿತ ಮೇಲ್ಮನವಿಗಳ ವಿಚಾರಣೆಗೆ ಸೂಕ್ತ ದಿನಾಂಕ ನಿಗದಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ವಿಚಾರಣೆ ವೇಳೆ, ಅರ್ಜಿದಾರ ಮಹಿಳೆಯೊಬ್ಬರ ಪರ ಹಾಜರಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, 'ಈ ವಿಚಾರವಾಗಿ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಬಿಟ್ಟರೆ ಬೇರೆ ಯಾವುದೇ ಪ್ರತಿಕ್ರಿಯೆ ಸಲ್ಲಿಸಿಲ್ಲ. ಹೀಗಾಗಿ, ಈ ಕುರಿತ ಅರ್ಜಿಗಳ ವಿಚಾರಣೆಯನ್ನು ನವೆಂಬರ್ನಲ್ಲಿ ನಡೆಸಬೇಕು ಹಾಗೂ ಸೂಕ್ತ ದಿನಾಂಕ ನಿಗದಿ ಮಾಡಬೇಕು' ಎಂದು ಕೋರಿದರು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿ.ಮೋಹನಾ ಅವರು ಇದ್ದ ನ್ಯಾಯಪೀಠದ ಎದುರು, ಮತ್ತೊಬ್ಬ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲೆ ಕರುಣಾ ನಂದಿ ಅವರೂ ಇದೇ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಅರ್ಜಿಗಳನ್ನು ಬುಧವಾರ ನಡೆಯಲಿರುವ ವಿಚಾರಣೆಯ ಪಟ್ಟಿಗೆ ಸೇರಿಸಲಾಗಿದೆ. ಕೇಂದ್ರ ಸರ್ಕಾರ ಏನು ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಗಮನಿಸಿ, ಸೂಕ್ತ ದಿನಾಂಕ ನಿಗದಿ ಮಾಡಲಾಗುವುದು' ಎಂದು ಹೇಳಿತು.
ಐಪಿಸಿ ಸೆಕ್ಷನ್ 375 (2) (ಈಗ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 63), 'ವೈವಾಹಿಕ ಅತ್ಯಾಚಾರ'ವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವುದರಿಂದ ವಿನಾಯಿತಿ ನೀಡುತ್ತದೆ. ಕಾಯ್ದೆಯ ಈ ಅವಕಾಶದ ಸಿಂಧುತ್ವ ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿದೆ.

