ಕಾಸರಗೋಡು: ಸಂವಿಧಾನಕ್ಕೆ ಅಪಚಾರವಾದಾಗ ಪ್ರತಿಭಟಿಸುವ ಮನೋಭಾವವನ್ನು ಪ್ರತಿಯೊಬ್ಬ ಪ್ರಜೆ ಕೈಗೊಳ್ಳಬೇಕು ಎಂದು ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ವಿ.ಶ್ರೀಶಾನಂದ ತಿಳಿಸಿದ್ದಾರೆ.
ಅವರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ನ್ಯಾಯಶಾಸ್ತ್ರದ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ನಮ್ಮ ಸಂವಿಧಾನದ ಪಾರಮ್ಯತೆ ಎತ್ತಿ ಹಿಡಿದಿರುವ ಎಲ್ಲಾ ತೀರ್ಪುಗಳಿಗೆ ಎಡನೀರು ಶ್ರೀ ಕೇಶವಾನಂದ ಭಾರತೀ ತೀರ್ಪು ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. ಇದಕ್ಕಾಗಿಯೇ ಕೇಶವಾನಂದ ಭಾರತೀ ತೀರ್ಪನ್ನು ಸಂವಿಧಾನದ ಬ್ರಹ್ಮಾಸ್ತ್ರವಾಗಿ ಪರಿಗಣಿಸಲಾಗಿದೆ. ಜನಸಾಮಾನ್ಯರಿಗೂ ನ್ಯಾಯಾಂಗ ಅತ್ಯಂತ ಸನಿಹದಲ್ಲಿದೆ ಎಂಬ ಅಂಶವನ್ನು ಎಡನೀರು ಕೇಶವಾನಂದ ಭಾರತೀ ತೀರ್ಪು ತೋರಿಸಿಕೊಟ್ಟಿದೆ.
ಕರ್ತವ್ಯ ನಿರ್ವಹಣೆ ನಮ್ಮ ಜೀವನದ ಅಂಗವಾಗಿ ಮೈಗೂಡಿಸಿಕೊಳ್ಳಬೇಕಾಗಿದೆ. ಮಠಗಳ ರಕ್ಷಣೆಯಿಂದ ಸಂಸ್ಕøತಿ ಬೆಳೆಯಲು ಸಾಧ್ಯ, ಅತ್ಯುನ್ನತ ನಾಗರಿಕ ಪದ್ಧತಿಯೊಂದಿಗೆ ಶ್ರೇಷ್ಠ ನ್ಯಾಯ ವ್ಯವಸ್ಥೆ ಹೊಂದಿದ ದೇಶ ನಮ್ಮದು ಎಂದು ತಿಳಿಸಿದ ಅವರು, ಸಂಸ್ಕøತದಿಂದ ದೂರಾದಲ್ಲಿ ಸಂಸ್ಕøತಿಯೂ ನಮ್ಮಿಂದ ದೂರಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.



