ಕೊಲಂಬೊ (PTI): ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರನ್ನು ಬುಧವಾರ ಭೇಟಿಯಾಗಿ, ಪ್ರಾದೇಶಿಕ ಭದ್ರತೆ, ಸುರಕ್ಷತೆ, ಶಾಂತಿ ಮತ್ತು ಅಭಿವೃದ್ಧಿ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದರು.
'ಭಾರತ ಮತ್ತು ಶ್ರೀಲಂಕಾ ನಾಗರಿಕತೆಯ ಅವಳಿ ದೇಶಗಳಾಗಿದ್ದು, ಕಡಲ ಪಾಲುದಾರಿಕೆಯನ್ನು ಹೊಂದಿವೆ. ಉಭಯ ದೇಶಗಳ ಅಭಿವೃದ್ಧಿ ಹಾಗೂ ಜನರ ಕಲ್ಯಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ' ಎಂದು ಸಚಿವರು 'ಎಕ್ಸ್' ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಬಳಿಕ, ಭಾರತೀಯ ವಲಸಿಗರೊಂದಿಗಿನ ಸಂವಾದ ನಡೆಸಿದ ರಕ್ಷಣಾ ಸಚಿವರು, 'ಸಂಕಷ್ಟದ ಸಮಯದಲ್ಲಿ ಭಾರತವು ಶ್ರೀಲಂಕಾದ ಪರ ದೃಢವಾಗಿ ನಿಲ್ಲುತ್ತದೆ. ಉಭಯ ದೇಶಗಳ ನಡುವಿನ ಸಂಬಂಧವು ಇತಿಹಾಸ, ಸಂಸ್ಕೃತಿ ಮತ್ತು ನಂಬಿಕೆಯನ್ನು ಆಧರಿಸಿದೆ' ಎಂದು ಹೇಳಿದ್ದಾರೆ.
'ದಿಸ್ಸನಾಯಕೆ ನೇತೃತ್ವದ ಸರ್ಕಾರ ಎರಡು ವರ್ಷ ಪೂರೈಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಶುಭಾಶಯ ತಿಳಿಸಿದ್ದೇನೆ' ಎಂದಿದ್ದಾರೆ.

