ನವದೆಹಲಿ: ಕೆಂಪುಕೋಟೆ ಬಳಿ ಸಂಭವಿಸಿದ್ದ ಬಾಂಙ್ ಸ್ಫೋಟವು ಆತ್ಮಹತ್ಯಾ ಬಾಂಬ್ ದಾಳಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಿದೆ. ಐ20 ಕಾರನ್ನು ಚಲಾಯಿಸುತ್ತಿದ್ದ ಆರೋಪಿ ಉಮರ್ ಉನ್ ನಬಿ, ಸುಧಾರಿತ ಸ್ಫೋಟಕ ಸಾಧನವನ್ನು(ಐಇಡಿ) ಸಕ್ರಿಯಗೊಳಿಸಿದ್ದನು ಎಂದು ಉಲ್ಲೇಖಿಸಿದೆ.
2025ರ ನವೆಂಬರ್ 10ರಂದು ಸಂಭವಿಸಿದ ಸ್ಫೋಟದಲ್ಲಿ 15 ಮಂದಿ ಮೃತಪಟ್ಟಿದ್ದರು.
ಸ್ಫೋಟದ ಸ್ಥಳದಲ್ಲಿ ಸಂಗ್ರಹಿಸಿದ ಜೈವಿಕ ಮಾದರಿಯ ಡಿಎನ್ಎ ವಿಶ್ಲೇಷಣೆಯಲ್ಲಿ ಕಾರಿನಲ್ಲಿದ್ದದ್ದು ನಬಿಯೇ ಎಂಬುದು ದೃಢಪಟ್ಟಿದೆ.
ವೃತ್ತಿಯಲ್ಲಿ ವೈದ್ಯನಾಗಿರುವ ನಬಿ, ಫರಿದಾಬಾದ್ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದನು. ಕಾರಿನಲ್ಲಿ ಕಮ್ಯಾಂಡ್ ಮೆಕ್ಯಾನಿಸಂ ಬಳಸಿ ಐಇಡಿ ಸ್ಫೋಟಿಸಿದ್ದನು ಎಂದು ಉಲ್ಲೇಖಿಸಲಾಗಿದೆ.
ಎರಡು ವರ್ಷ ನಡೆದ ಸಂಚಿನ ಭಾಗವಾಗಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಗಿದೆ. ಅಲ್ ಕೈದಾದ ಅಂಗಸಂಸ್ಥೆ ಅನ್ಸಾರ್ ಘಜ್ವಾಲ್ ಉನ್ ಹಿಂದ್ನ ಕಾರ್ಯಾಚರಣಾ ಮುಖ್ಯಸ್ಥನಾಗಿದ್ದನು. ಕೆಂಪುಕೋಟೆ ಬಳಿಗೆ ಹಲವು ಬಾರಿ ಭೇಟಿ ನೀಡಿದ್ದ ನಬಿ ಮತ್ತು ಆತನ ಸಹಚರರು, ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.
ಭಾರತದ ರಾಷ್ಟ್ರೀಯ ಸಂಕೇತವಾಗಿರುವುದರಿಂದ ಕೆಂಪುಕೋಟೆಯನ್ನು ಗುರಿಯಾಗಿಸಿಕೊಂಡಿದ್ದರು. ಭಾರತದಲ್ಲಿ ನಿಷ್ಕ್ರಿಯವಾಗಿದ್ದ ಭಯೋತ್ಪಾದಕ ಜಾಲದ ಪುನಶ್ಚೇತನಕ್ಕೆ ನಬಿ 2022ರಿಂದ ಯತ್ನಿಸಿದ್ದ ಎಂದು ಉಲ್ಲೇಖಿಸಲಾಗಿದೆ.
ಪೂರ್ವನಿರ್ಧರಿತ ದಿನದಂದು ಸ್ಫೋಟ ನಡೆದಿಲ್ಲ. ಶ್ರೀನಗರದಲ್ಲಿ ಭಯೋತ್ಪಾದಕರ ಬಂಧನದ ಬಳಿಕ ವಿಚಲಿತಗೊಂಡಿದ್ದ ನಬಿ, ತಾನೂ ಬಂಧನಕ್ಕೊಳಗಾಗುವ ಆತಂಕದಲ್ಲಿ ದಾಳಿ ನಡೆಸಿದ್ದಾನೆ ಎಂದೂ ಉಲ್ಲೇಖಿಸಲಾಗಿದೆ.

