ನವದೆಹಲಿ: ಯುಪಿಐ ವಹಿವಾಟುಗಳ ಮೇಲೆ ಪ್ರಸ್ತಾವಿತ ಮರ್ಚಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕಗಳ ವಿಚಾರವಾಗಿ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಶನಿವಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕ್ರಮವನ್ನು ''ದರೋಡೆ'' ಎಂದು ಕರೆದಿರುವ ಅವರು, ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ದೀಪ್ಕೆ, ನೋಟು ಅಮಾನ್ಯೀಕರಣದ ಬಳಿಕ ಸರಕಾರ ನಗದುರಹಿತ ಆರ್ಥಿಕತೆ ಬಗ್ಗೆ ಮಾತನಾಡುತ್ತಿತ್ತು. ಜನರು ಅದನ್ನು ಅಳವಡಿಸಿಕೊಂಡ ನಂತರ, ಸರಕಾರ ಅದರ ಮೇಲೆ ತೆರಿಗೆ ವಿಧಿಸುತ್ತಿದೆ ಎಂದು ಪ್ರತಿಪಾದಿಸಿದರು.
''ಇದು ದರೋಡೆ ಎಂದು ನನಗೆ ಅನಿಸುತ್ತಿದೆ. ಯುಪಿಐ ಮೇಲೆ ವಿಧಿಸಲಾಗುತ್ತಿರುವ ಶುಲ್ಕಗಳನ್ನು ಹಿಂಪಡೆಯಬೇಕು. ನೋಟು ಅಮಾನ್ಯೀಕರಣ ಪರಿಚಯಿಸಿದ ಸಂದರ್ಭ ನೀವು (ಸರಕಾರ) ನಗದುರಹಿತ ಆರ್ಥಿಕತೆಯ ಬಗ್ಗೆ ಮಾತನಾಡಿದ್ದೀರಿ. ಈಗ ಜನರು ನಿಜವಾಗಿಯೂ ನಗದುರಹಿತ ಆರ್ಥಿಕತೆಯನ್ನು ಅಳವಡಿಸಿಕೊಂಡಿದ್ದಾರೆ. ಆದರೆ, ಈಗ ನೀವು ಅದರ ಮೇಲೆಯೂ ತೆರಿಗೆ ವಿಧಿಸುತ್ತಿದ್ದೀರಿ. ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು'' ಎಂದು ಅಭಿಜಿತ್ ದೀಪ್ಕೆ ಆಗ್ರಹಿಸಿದರು.
ಇದೇ ರೀತಿಯ ಕಳವಳವನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ, ಈ ಹಿಂದೆ ಭರವಸೆ ನೀಡಿದ ಹೊರತಾಗಿಯೂ ಶುಲ್ಕಗಳನ್ನು ಪರಿಚಯಿಸಿರುವುದನ್ನು ಟೀಕಿಸಿದರು.
''UPI ಕುರಿತು ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಸರಕಾರ ಯುಪಿಐ ತೆರಿಗೆಯನ್ನು ಹಿಂಪಡೆಯಬೇಕು. ತೆರಿಗೆ ವಿಧಿಸಬಾರದು. ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ಹಣಕಾಸು ಸಚಿವಾಲಯ ಈ ಹಿಂದೆ ತಿಳಿಸಿತ್ತು. ಆದರೂ ಈಗ ತೆರಿಗೆಯನ್ನು ಜಾರಿ ಮಾಡಲಾಗಿದೆ'' ಎಂದು ರಾಜೀವ್ ಶುಕ್ಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಿಜೆಡಿ ರಾಜ್ಯಸಭಾ ಸಂಸದ ಸುಭಾಷೀಶ್ ಖುಂಟಿಯಾ ಕೂಡ ಯುಪಿಐ ವಹಿವಾಟುಗಳ ಮೇಲಿನ ಶುಲ್ಕಗಳ ಕುರಿತು ಕಳವಳ ವ್ಯಕ್ತಪಡಿಸಿದ್ದು, ಈ ತೆರಿಗೆಯಿಂದ ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ ಎಂದರು.

