ಪೆರ್ಲ:ದೇಶ ವಿಭಜನೆಗೆ ಕಾರಣರಾದ ಪ್ರತ್ಯೇಕತಾವಾದಿ ಮುಸ್ಲಿಂ ಲೀಗ್ ದೇಶ ವಿಭಜನೆಯ ಬಳಿಕವೂ ಪಾಕಿಸ್ತಾನದ ಮುಸ್ಲಿಂ ಲೀಗ್ ಧ್ವಜವನ್ನು ಎತ್ತಿ ಹಿಡಿದು ಭಾರತದಲ್ಲಿ ಮತ ಯಾಚಿಸುತ್ತಿರುವುದು ದೇಶಕ್ಕೆ ಅವಮಾನ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
ಪೆರ್ಲ ಭಾರತೀ ಸದನದಲ್ಲಿ ಭಾನುವಾರ ನಡೆದ ಬಿಜೆಪಿ ಎಣ್ಮಕಜೆ ಪಂಚಾಯಿತಿ ಸಮಿತಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ವಿಭಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಜಿನ್ನಾ, ಹಿಂದು ಮುಸ್ಲಿಮರ ವೈಪರೀತ್ಯಗಳನ್ನು ಎತ್ತಿ ತೋರಿಸಿ ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗುನೊಂದಿಗೆ ದೇಶ ವಿಭಜನೆಗೆ ಕಾರಣರಾದರು. ದೇಶ ವಿಭಜನೆಗೊಂಡು 70 ವರ್ಷ ಕಳೆದರೂ ಅದೇ ಪಾಕಿಸ್ಥಾನದ ಮುಸ್ಲಿಂ ಲೀಗ್ ಪತಾಕೆಯೊಂದಿಗೆ ಭಾರತದಲ್ಲಿ ಮತ ಯಾಚಿಸುತ್ತಿದೆ. ಭಾರತದ ಪ್ರಮುಖ ರಾಜಕೀಯ ಪಕ್ಷ ಕಾಂಗ್ರೆಸ್ ನ ಎಲ್ಲಾ ಅಧಿಕಾರವನ್ನೂ ಮುಸ್ಲಿಂ ಲೀಗ್ ಕಬಳಿಸಿ ಪಕ್ಷವನ್ನು ನಿರ್ಣಾಮ ಗೊಳಿಸುವ ಪ್ರಯತ್ನದಲ್ಲಿ ಸಫಲವಾಗಿದೆ.ಪಂಚಾಯಿತಿ, ಬ್ಲಾಕ್ , ಜಿಲ್ಲೆಯಿಂದ ರಾಜ್ಯ, ದೇಶದವರೆಗೂ ಲೀಗ್ ಕಾಂಗ್ರೆಸ್ ಮೇಲೆ ಪ್ರಭಾವ ಬೀರಿದೆ.ಇದೇ ಕಾರಣದಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಕಳೆದ ಲೋಕ ಸಭಾ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಹೊರ ಜಿಲ್ಲೆಯ ಅಭ್ಯರ್ಥಿ ಯನ್ನು ಸಂಸದೀಯ ಚುನಾವಣಾ ಕಣಾಕ್ಕಿಳಿಸಿ ಗೆಲ್ಲಿಸಿದೆ ಎಂದು ಅವರು ತಿಳಿಸಿದರು. ಸಿಪಿಐ(ಎಂ) ಪಕ್ಷದ ಜನ ವಿರೋಧಿ ನೀತಿ, ದಬ್ಬಾಳಿಕೆ, ಹಿಂಸಾ ಪ್ರವೃತ್ತಿಯ ರಾಜಕಾರಣದಿಂದ ಜನರು ರೋಸಿ ಹೋಗಿದ್ದು ಎಡರಂಗ ತಿರಸ್ಕರಿಸಲ್ಪಟ್ಟಿದೆ.ದೇಶದ ಜನತೆ ಭಾರತದ ಭೂಪಟದಿಂದಲೇ ಎಡರಂಗವನ್ನು ಹೊರಗಟ್ಟಿದ್ದಾರೆ. ಕೇರಳದಲ್ಲಿ ಮಾತ್ರ ಅಳಿದುಳಿದಿದ್ದ ಎಡರಂಗ ಲೋಕಸಭೆ ಚುನಾವಣೆಯಲ್ಲಿ ನಾಮಾವಶೇಷವಾಗಿದೆ. ಇದೀಗ ಮಂಜೇಶ್ವರ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆ ಸಮೀಪಿಸುತ್ತಿರುವಂತೆ ಸಿಪಿಐ (ಎಂ), ಮುಸ್ಲಿಂ ಲೀಗ್ ನಡುವೆ ಒಳ ಒಪ್ಪಂದ ನಡೆದಿದ್ದು ಎಡರಂಗದ ಮತವನ್ನು ಮುಸ್ಲಿಂ ಲೀಗ್ ಗೆ ಮಾರಾಟ ಮಾಡುವ ಕೆಲಸ ನಡೆಯಲಿದೆ ಎಂದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮಾತನಾಡಿ, ಮಂಜೇಶ್ವರ ಉಪ ಚುನಾವಣೆ ಸಮೀಪಿಸಿದ್ದು ಕಾರ್ಯಕರ್ತರು ಒಗ್ಗೂಡಿ ಪಕ್ಷವನ್ನು ಬಲ ಪಡಿಸುವಂತೆ ಕರೆ ನೀಡಿದರು.
ಪಂಚಾಯಿತಿ ಸಮಿತಿ ಉಪಾಧ್ಯಕ್ಷ ರಮಾನಂದ ಎಡಮಲೆ ಅಧ್ಯಕ್ಷತೆ ವಹಿಸಿದ್ದರು.ಮಂಜೇಶ್ವರ ಮಂಡಲ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು, ಕಾಸರಗೋಡು ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಮಾತನಾಡಿದರು.
ಉತ್ತಮ ಹಾಗೂ ನಿಸ್ವಾರ್ಥ ಸಮಾಜ ಸೇವೆಗೆ ಸುಂದರ ನಾಯ್ಕ್ ಖಂಡಿಗೆ, ಗೋವಿಂದ ನಾಯ್ಕ್ ಬಜಕೂಡ್ಲು, ವೆಂಕಟ್ರಮಣ ಭಟ್ ಎಡಮಲೆ ಅವರನ್ನು ಅಭಿನಂದಿಸಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಪುಷ್ಪಾ ಅಮೆಕ್ಕಳ ಉಪಸ್ಥಿತರಿದ್ದರು. ಪಂಚಾಯಿತಿ ಸಮಿತಿ ಉಪಾಧ್ಯಕ್ಷ ಪದ್ಮಶೇಖರ್ ನೇರೋಳು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ್ ಅಡ್ಕಸ್ಥಳ ವಂದಿಸಿದರು.
ಬಿಜೆಪಿ ಎಣ್ಮಕಜೆ ನೂತನ ಪಂಚಾಯಿತಿ ಸಮಿತಿ ರಚನೆ:
ಸಭೆಯಲಲಿ ಬಿಜೆಪಿ ಎಣ್ಮಕಜೆ ನೂತನ ಪಂ.ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಉದಯ ಚೆಟ್ಟಿಯಾರ್ ಬಜಕೂಡ್ಲು, ಉಪಾಧ್ಯಕ್ಷರುಗಳಾಗಿ ರಮಾನಂದ ಎಡಮಲೆ ಮತ್ತು ಪದ್ಮಶೇಖರ್ ನೇರೋಳು, ಕಾರ್ಯದರ್ಶಿಗಳಾಗಿ ಸತೀಶ್ ಕುಲಾಲ್ ನಲ್ಕ ಮತ್ತು ಸುರೇಶ್ ವಾಣೀನಗರ, 9 ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.


