ಮುಳ್ಳೇರಿಯ: ಮೈಸೂರು ವಿಶ್ವವಿದ್ಯಾಲಯದಲ್ಲಿ ಸೆ. 7 ರಂದು ನಡೆದ 101ನೇ ವಾರ್ಷಿಕ ಘಟಿಕೋತ್ಸವದ ಸಂಗೀತ ಪದವಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾಲಯಕ್ಕೇ ಪ್ರಥಮ ಶ್ರೇಣಿಯನ್ನು ಕೇರಳ ರಾಜ್ಯದ ಕಾಸರಗೋಡಿನ ಮುಳ್ಳೇರಿಯ ಸಮೀಪದ ಕುಮಾರಿ ಅಶ್ವಿನಿ ಕೋಳಿಕ್ಕಜೆ ಅವರಿಗೆ ಕೊಡಮಾಡಲಾಯಿತು.ಈ ಸಂದರ್ಭ ಇವರು 6 ಚಿನ್ನ ಮತ್ತು 3 ಪ್ರತ್ಯೇಕ ನಗದು ಪುರಸ್ಕಾರಗಳನ್ನು ಬಾಚಿಕೊಂಡರು.
ಅಶ್ವಿನಿ ಕೋಳಿಕ್ಕಜೆ ಅವರು ಈ ಮೊದಲು ಪ್ರಸಿದ್ಧ ಆಕಾಶವಾಣಿ ಕಲಾವಿದರಾಗಿದ್ದ(1960-1980 ರ ಅವಧಿಯಲ್ಲಿ)ದಿವಂಗತ ಕೋಳಿಕ್ಕಜೆ ವಿಷ್ಣು ಭಟ್ ಅವರ ಮೊಮ್ಮಗಳು,ಸಂಗೀತ ಕಲಾವಿದ ಹಾಗೂ ಶಿಕ್ಷಕ ಬಾಲಸುಬ್ರಹ್ಮಣ್ಯ ಭಟ್ ಮತ್ತು ಶುಭಾ ದಂಪತಿಗಳ ಸುಪುತ್ರಿ.
ಅಶ್ವಿನಿ ಯಲ್ಲಿನ ರಕ್ತಗತ ಸಂಗೀತ ಕಲಾ ಜಾಗೃತಿ ಅವಳ 4ನೆಯ ವಯಸ್ಸಿನಲ್ಲಿ,ಸಾರ್ವಜನಿಕ ಶಾರದೊತ್ಸವದ ಸಂದರ್ಭದಲ್ಲಿ ಮಕ್ಕಳು ಹಾಡಿದ ದೇವರ ಕೀರ್ತನೆಗಳನ್ನು ತಾನೂ ಹಾಡಬೇಕೆಂಬ ಹಂಬಲದೊಂದಿಗೆ ಚಿಗುರೊಡೆಯಿತು.ಇವಳ ಸುಪ್ತ ಪ್ರತಿಭೆಗೆ ತಂದೆಯವರಾದ ಬಾಲಸುಬ್ರಹ್ಮಣ್ಯ ಭಟ್ ಅವರು ನೀರೆರೆಯಲು ಶುರುವಿಟ್ಟರು. ಇದರಿಂದಾಗಿ ಪ್ರಪ್ರಥಮವಾಗಿ ನಾಲ್ಕನೇ ತರಗತಿಯಲ್ಲಿದ್ದಾಗಲೇ ಪ್ರಸಿದ್ಧ ಮಲಯಾಳಂ ಸಂಗೀತ ನಿರ್ದೇಶಕರಾದ ಸುದರ್ಶನ್ ಪಯ್ಯನ್ನೂರ್ ಅವರ "ಮತ್ತಪ್ಪ ಪ್ರಸಾದಂ" ಎಂಬ ಧ್ವನಿ ಸುರುಳಿಯಲ್ಲಿ ಈಕೆಯ ಕಂಠ ಸಿರಿಯು ಅನಾವರಣಗೊಂಡಿತು.ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ಸ್ವತಃ ತಂದೆಯವರಿಂದ ಕಲಿತು ನಂತರ ಅದನ್ನು ಕೋವಿಲಡಿ ಆರ್ ಕಲಾ ಮೈಸೂರು ಇಲ್ಲಿ ಮುಂದುವೆಸಿದಳು.ಈಕೆಯು ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯ,ಪದವಿಪೂರ್ವ ಶಿಕ್ಷಣವನ್ನು ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಅಗಲ್ಪಾಡಿ ಹಾಗೂ ಸಂಗೀತ ಪದವಿಯನ್ನು ಮಾನಸಗಂಗೋತ್ರಿ ಮೈಸೂರು ಇಲ್ಲಿ ಪೂರೈಸಿರುತ್ತಾಳೆ.
ಅಶ್ವಿನಿ ಅವರು 100 ಕ್ಕಿಂತಲೂ ಹೆಚ್ಚಿನ ಕಲಾಮೇಳ ಗಳಲ್ಲಿ ಪ್ರಥಮ ಶ್ರೇಣಿ ಪಡೆದಿದ್ದಾಳೆ. ಶ್ರೀ ಶಂಕರ ಸೂಪರ್ ಸಿಂಗರ್ ವಿನ್ನರ್ 2020 ಇದರಲ್ಲಿ ಪ್ರಥಮ ಶ್ರೇಣಿ ಯೊಂದಿಗೆ ಒಂದು ಲಕ್ಷ ರೂ ಗಳ ನಗದು ಪುರಸ್ಕಾರ ಪಡೆದಿದ್ದಾಳೆ. ಅಖಿಲ ಭಾರತ ಸಂಗೀತ ವಿಶ್ವ ವಿದ್ಯಾಲಯಗಳ ಸಂಗೀತ ಸ್ಪರ್ಧೆಯಲ್ಲಿ ಸತತ 2 ಬಾರಿ (2019ಮತ್ತು2020) ಪ್ರಥಮ ಸ್ಥಾನ ಹಾಗೂ ಅಂತರ ರಾಷ್ಟ್ರೀಯ ಮಟ್ಟಕ್ಕೆ ಆಯೆ ಯಾಗಿದ್ದರು. ಪ್ರಸ್ತುತ ಈಕೆ ಅನಿವಾಸಿ ಭಾರತೀಯರಿಗೆ ಸಂಗೀತ ಶಿಕ್ಷಣವನ್ನು ನೀಡುತ್ತಿದ್ದಾಳೆ.
ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯ,ಶ್ರೀ ಅನ್ನಪೂರ್ಣೆಶ್ವರಿ ಹೈಯರ್ ಸೆಕೆಂಡರಿ ಶಾಲೆ ಇವುಗಳ ಆಡಳಿತ ಹಾಗೂ ಬೋಧಕ ವರ್ಗ ಹಾಗೂ ಊರ - ಪರವೂರ ಸಂಗೀತ ಅಭಿಮಾನಿಗಳು ಈಕೆಯ ಸಾಧನೆಗೆ ಹರ್ಷವನ್ನುವಕ್ತಪಡಿಸಿದ್ದಾರೆ.



