ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಜನರ ಗೃಹಪಯೋಗಿ ಖರ್ಚುಗಳನ್ನು ದುಬಾರಿಯಾಗಿಸಿದ್ದಾರೆ. ಆದರೆ ಅದರ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಮುಜುಗರ ಪಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹರಿಹಾಯ್ದಿದ್ದಾರೆ.
0
samarasasudhi
ಜುಲೈ 20, 2022
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಜನರ ಗೃಹಪಯೋಗಿ ಖರ್ಚುಗಳನ್ನು ದುಬಾರಿಯಾಗಿಸಿದ್ದಾರೆ. ಆದರೆ ಅದರ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಮುಜುಗರ ಪಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹರಿಹಾಯ್ದಿದ್ದಾರೆ.
ನಿರ್ದಿಷ್ಟ ಆಹಾರೋತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಿರುವುದನ್ನು ಕಾಂಗ್ರೆಸ್ 'ಕ್ರೂರತೆ' ಎಂದು ಆಪಾದಿಸಿದೆ. ಮುಂದಿನ ದಿನಗಳಲ್ಲಿ ಇದರಿಂದ ಅಪಾರ ಪ್ರಮಾಣದ ಬೆಲೆಯೇರಿಕೆ ಸಂಭವಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಹಣದುಬ್ಬರ ಮತ್ತು ದುಬಾರಿ ಗೃಹಪಯೋಗಿ ವೆಚ್ಚಕ್ಕೆ 'ಸಂಜೀವಿನಿ' ಬೇಕಿದೆ. ಹಿಟ್ಟು, ಧಾನ್ಯ, ಬೆಲ್ಲ, ಮೊಸರು, ಮಜ್ಜಿಗೆ ಇತ್ಯಾದಿ ನಿರ್ದಿಷ್ಟ ಆಹಾರೋತ್ಪನ್ನಗಳ ಮೇಲಿನ ತೆರಿಗೆಯು ಗೃಹಸ್ಥೀ ಸತ್ಯನಾಶ್ ಟ್ಯಾಕ್ಸ್ (ಜಿಎಸ್ಟಿ) ಎಂದು ಕಿಡಿಕಾರಿದ್ದಾರೆ.
ಬೆಲೆ ಏರಿಕೆ ವಿರೋಧಿಸಿ ಸಂಸತ್ನ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಫೋಟೊವನ್ನು ಶೇರ್ ಮಾಡಿದ್ದಾರೆ.
ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅಧಿವೇಶನದಲ್ಲಿ ಬೆಲೆಯೇರಿಕೆ ಮತ್ತು ಜಿಎಸ್ಟಿ ದರಗಳ ಕುರಿತು ಚರ್ಚಿಸಲು ಎದುರು ನೋಡುತ್ತಿವೆ. ಮುಂಗಾರು ಅಧಿವೇಶನ ಸೋಮವಾರ ಆರಂಭಗೊಂಡಿದೆ. ಆದರೆ ಈವರೆಗೆ ಕಲಾಪ ಸುಗಮವಾಗಿ ನಡೆದಿಲ್ಲ.