ಕುಂಬಳೆ: ಮುಳ್ಳೇರಿಯ ಮಂಡಲದ ಗುಂಪೆ ವಲಯದಲ್ಲಿ ಮಾತೃ ವಿಭಾಗದ ವತಿಯಿಂದ ಇತ್ತೀಚೆಗೆ ಶ್ರೀಗಣೇಶ ಪಂಚರತ್ನಸ್ತೋತ್ರ ಪಠಣ, ಕುಂಕುಮಾರ್ಚನೆ ಮತ್ತು ಭಜನಾ ತರಬೇತಿ ನಡೆಯಿತು.
ಧರ್ಮತ್ತಡ್ಕದ ಗುಂಪೆ ವಲಯ ಕಛೇರಿಯಲ್ಲಿ ಬೆಳಗ್ಗೆ 9.45 ಕ್ಕೆ ವಲಯ ಮಾತೃಪ್ರಧಾನೆ ಕಾವೇರಿ ಅಮ್ಮ ಗುಂಪೆ ದೀಪ ಪ್ರಜ್ವಲನೆಗೈದು ಚಾಲನೆ ನೀಡಿದರು. ಸಂಘಟನಾ ಕಾರ್ಯದರ್ಶಿ ವೆಂಕಟಕೃಷ್ಣ ಚೆಕ್ಕೆಮನೆ ಧ್ವಜಾರೋಹಣ ನೆರವೇರಿಸಿದರು. ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಾಮೂಹಿಕವಾಗಿ ಶ್ರೀಗಣೇಶ ಪಂಚರತ್ನ ಸ್ತೋತ್ರ ಪಠಣ ಆರಂಭಿಸಲಾಯಿತು.
ಮಧ್ಯಾಹ್ನ 12ಕ್ಕೆ ಮಾತೆಯರಿಂದ ಕುಂಕುಮಾರ್ಚನೆ ನೆರವೇರಿತು. ಬಳಿಕ ನಡೆದ ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷ ಶಂಭು ಹೆಬ್ಬಾರ್ ವಹಿಸಿದ್ದರು. ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಲಯದ ಪದಾಧಿಕಾರಿಗಳು, ಕಾರ್ಯಕರ್ತರು, ಶಿಷ್ಯಬಂಧುಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಮಂಡಲ ಮಾತೃಪ್ರಧಾನೆ ಕುಸುಮಾ ಪೆರ್ಮುಖ ಅವರು ಅ. 15 ರಿಂದ ಪೆರಾಜೆಯ ಮಾಣಿಮಠದಲ್ಲಿ ನಡೆಯಲಿರುವ ಶ್ರೀಗುರುಗಳ ನವರಾತ್ರ ನಮಸ್ಯಾ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿ, ಬಾಗಿನ ಸಮರ್ಪಣೆಯ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮಂಡಲ ಅಧ್ಯಕ್ಷ ಉದಯ ಶಂಕರ ನೀರ್ಪಾಜೆ, ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಕಾರ್ಯದರ್ಶಿ ರಮೇಶ ಭಟ್ ಸರವು ಹಾಗೂ ಇತರ ಪದಾಧಿಕಾರಿಗಳು ಮತ್ತು ಬಾಯಾರು ವಲಯದ ಅಧ್ಯಕ್ಷ ರವೀಶ ಭಟ್ ಸೊಂದಿ, ವಲಯ ಪದಾಧಿಕಾರಿಗಳು ಆಗಮಿಸಿ ಪೊಸಡಿಗುಂಪೆಯ ಶ್ರೀಶಂಕರ ಧ್ಯಾನ ಮಂದಿರದ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ನಡೆಸಿದರು. ಶಂಕರ ರಾವ್ ಕಕ್ವೆ ಪೊಸಡಿ ಗುಂಪೆಯ ವಿಚಾರಗಳನ್ನು ಸಭೆಗೆ ತಿಳಿಸಿದರು.
ಅಪರಾಹ್ನ ನೇರೋಳು ಮಹಾಲಿಂಗ ಭಟ್, ರಾಮಚಂದ್ರ ಭಟ್ ನೇರೋಳು, ಶಂಕರ ನಾರಾಯಣ ಭಟ್ ನೇರೋಳು ಇವರು ಶ್ರೀಶಂಕರ ರಾಮಾರ್ಪಣ ಭಜನಾ ತಂಡದ ಸದಸ್ಯರಿಗೆ ಹಾಗೂ ಮಕ್ಕಳ ಕುಣಿತ ಭಜನಾ ತಂಡಕ್ಕೆ ತರಬೇತಿಯನ್ನು ನೀಡಿದರು.
ಸಂಜೆ 5.30 ಕ್ಕೆ ಶಾಂತಿಮಂತ್ರ, ಶಂಖನಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

.jpg)
