ಮಂಜೇಶ್ವರ: ದೈವ, ದೇಗುಲಗಳು ಬ್ರಹ್ಮಕಲಶೋತ್ಸವದ ಮೂಲಕ ಪುನರುತ್ಥಾನವಾದಾಗ ಸಮಾಜ ಸುಭಿಕ್ಷಗೊಳ್ಳುತ್ತದೆ ಎಂದು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ತಿಳಿಸಿದರು.
ಅವರು ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಭಾನುವಾರ ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದರು.
ಜೀವನದಲ್ಲಿ ನೆಮ್ಮದಿಯ ವಾತಾವರಣವನ್ನು ಪಡೆಯಲು ಶ್ರದ್ದಾ ಭಕ್ತಿಯ ಭಗವಂತನ ಆರಾಧನೆ ಮುಖ್ಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಆಡಳಿತ ಟ್ರಸ್ಟ್ ನ ಅಧ್ಯಕ್ಷ ಡಾ. ಎಂ ಶ್ರೀಧರ ಭಟ್ ವಹಿಸಿದ್ದರು. ಮಾನವ ಹಕ್ಕುಗಳ ಆಯೋಗದ ಸದಸ್ಯ ಡಾ.ಟಿ.ಶ್ಯಾಮ್ ಭಟ್, ಕೇರಳ ತುಳು ಅಕಾಡಮಿ ಅಧ್ಯಕ್ಷ ಕೆ.ಆರ್. ಜಯಾನಂದ, ಧಾರ್ಮಿಕ ಮುಂದಾಳು ಮಂಜುನಾಥ್ ಆಳ್ವ ಮಡ್ವ, ವರ್ಕಾಡಿ ಶ್ರೀ ಮಡಿಕತ್ತಾಯ ಕ್ಷೇತ್ರದ ಗಡಿ ಪ್ರಧಾನರಾದ ದೇವಪ್ಪ ಮಾಸ್ತರ್ ಚಾವಡಿಬೈಲು, ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಹರಿನಾಥ ಭಂಡಾರಿ ಮುಳಿಂಜ, ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ದಿನೇಶ್.ವಿ, ಮಂಗಳೂರು ನ್ಯಾಯವಾದಿ ಹರಿಶ್ಚಂದ್ರ ಶೆಟ್ಟಿಗಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ, ಮಂಜೇಶ್ವರ ಎ.ಇ ಕಚೇರಿಯ ಹಿರಿಯ ಮೇಲ್ವಿಚಾರಣಾಧಿಕಾರಿ ಜಿತೇಂದ್ರ ಕಟ್ಟೆಬಜಾರ್, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ವೇಣುಗೋಪಾಲ ಶೆಟ್ಟಿ, ಉದ್ಯಮಿ ಜಗದೀಶ್ ಸುವರ್ಣ ಬೇಕೂರು, ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಶ್ರೀಧರ ರಾವ್ ಆರ್ ಎಂ, ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಕಿರಣ್ ಶೆಟ್ಟಿ ಮಾಡ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಎಂ.ಎಲ್ ಪಜ್ವ, ಮೀಂಜ ಗ್ರಾಮ ಪಂಚಾಯತಿ ಸದಸ್ಯ ಜನಾರ್ದನ ಪೂಜಾರಿ ಕುಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಸಂಶನೆಗೈದರು. ಈ ವೇಳೆ ಕ್ಷೇತ್ರದ ಬಗ್ಗೆ ನಿರ್ಮಿಸಿದ ತುಳು ಭಕ್ತಿ ಗೀತೆ "ಇರ್ವೇರು ಅರಸು ಸಂಕಲ ಮಾಡ" ದ ಆಲ್ಬಂ ಸಾಂಗ್ ನ್ನು ಕೇರಳ ತುಳು ಅಕಾಡಮಿ ಅಧ್ಯಕ್ಷ ಕೆ.ಆರ್. ಜಯಾನಂದ ಬಿಡುಗಡೆಗೊಳಿಸಿದರು. ಕ್ಷೇತ್ರದ ಮರದ ಶಿಲ್ಪಿ ಬಾಲಕೃಷ್ಣ ಆಚಾರ್ಯ ಹಾಗೂ ಕಲ್ಲಿನ ಕಾಮಗಾರಿಯನ್ನು ನಿರ್ವಹಿಸಿದ ಬಾಲಕೃಷ್ಣ ಶೆಟ್ಟಿ, ಕಳೆದ 24 ವರ್ಷಗಳಿಂದ ಕ್ಷೇತ್ರದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕೊಡುಗೆಯಾಗಿ ನೀಡುತ್ತಿರುವ ದಯಾನಂದ ಮಾಡ, ಕ್ಷೇತ್ರ ಮಾಡದ ಹಂಚುಗಳಿಗೆ ಅನುಭವದ ಮೆರುಗು ನೀಡಿದ ಆನಂದ ಶೆಟ್ಟಿಗಾರ್, ಸಾಂಸ್ಕøತಿಕ ರಂಗದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಹರಿಕಥಾ ಕಾರ್ಯಕ್ರಮದ ಸೇವೆ ಸಲ್ಲಿಸುತ್ತಿರುವ ಈಶ್ವರ ನಾಯ್ಕ ಹಾಗೂ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಹಗಳಿರುಳು ಶ್ರಮಿಸುತ್ತಿರುವ ತತ್ವಮಸಿ ಮೀಯಪದವು ಸಂಸ್ಥೆಯವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪಗಳನ್ನು ನೀಡಿ ಸನ್ಮಾನಿಸಿದರು. ಟೀಮ್ ಗರುಡ ಸಂಸ್ಥೆಯ ಲೋಗೋ ಅನಾವರಣ ವೇದಿಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ಕ್ಷೇತ್ರದ ಉಪಾಧ್ಯಕ್ಷ ಅರವಿಂದಾಕ್ಷ ಭಂಡಾರಿ ದಡ್ಡoಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಅಂಗಡಿದಾರು ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ ವಂದಿಸಿದರು. ಬಳಿಕ ಟೀಮ್ ಗರುಡ ಸಂತಡ್ಕ ಪ್ರಾಯೋಜಕತ್ವದಲ್ಲಿ ಸ್ಥಳೀಯ ಪ್ರತಿಭೆಗಳ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು. ಸಂಜೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ವಿವಿಧ ಸಂಘ ಸಂಸ್ಥೆ, ಕ್ಷೇತ್ರ ಮಠ ಮಂದಿರಗಳ ನೇತೃತ್ವದೊಂದಿಗೆ ಹಸಿರು ಹೊರೆಕಾಣಿಕೆ ಮೆರವಣಿಗೆ ಕ್ಷೇತ್ರಕ್ಕೆ ಹರಿದು ಬಂತು. ಮುತ್ತು ಕೊಡೆಗಳೊಂದಿಗೆ ಮಾತೆಯರು, ಮಕ್ಕಳು, ಮಹನೀಯರು ಸೇರಿದಂತೆ ವಿವಿಧ ಕುಣಿತ ಭಜನಾ ಸಂಘಗಳ ಕುಣಿತ ಭಜನೆಯ ಮೆರುಗಿನೊಂದಿಗೆ ಮೆರವಣಿಗೆ ಉತ್ಸವಾಂಗಣಕ್ಕೆ ಆಗಮಿಸಿತು. ಈ ವೇಳೆ ಸಂತಡ್ಕ ಜಂಕ್ಷನ್ ನಲ್ಲಿ ಮುಸ್ಲಿಂ ಭಾಂದವರು ಸಿಹಿತಿಂಡಿ ಪಾನೀಯವನ್ನು ವಿತರಿಸಿ, ಮೆರವಣಿಗೆಯನ್ನು ಸ್ವಾಗತಿಸಿ, ಸೌಹಾರ್ದತೆ ಮೆರೆದರು.

.jpg)
.jpg)
.jpg)
