ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಮಂಟಪದಲ್ಲಿ ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಪಂಚಲೋಹದ ಪ್ರತಿಮೆ ಸ್ಥಾಪನಾ ಸಮಾರಂಭ ಮೇ 11ರಂದು ಜರುಗಲಿದೆ. ಬೆಳಗ್ಗೆ 9.30ಕ್ಕೆ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಕರಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಪ್ರತಿಮೆ ಪ್ರತಿಷ್ಠಾಪಿಸಲಿರುವರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ7ಕ್ಕೆ ಶ್ರೀ ರುದ್ರಹವನ, ಶ್ರೀ ದಕ್ಷಿಣಾಮೂರ್ತಿ ಹವನ, ಶ್ರೀ ಗೋಪಾಲಕೃಷ್ಣ ಹವನ ನಡೆಯುವುದು. ಶ್ರೀ ಸಚ್ಚಿದಾನಂದಭಾರತೀ ಶ್ರಿ ಪಾದಂಗಳವರು ದಿವ್ಯ ಉಪಸ್ಥಿತರಿರುವರು. ಬೆಳಗ್ಗೆ ಗಂಟೆ 10.30ಕ್ಕೆ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ಅನುಗ್ರಹ ಭಾಷಣ ನಡೆಯುವುದು.
10ಕ್ಕೆ ಶೃಂಗೇರಿಶ್ರೀಗಳ ಆಗಮನ:
10ರಂದು ಸಂಜೆ 5.30 ಕ್ಕೆ ಭಜನ್ಸಂಧ್ಯಾ ಕಾರ್ಯಕ್ರಮ ನಡೆಯಲಿದ್ದು, 7ಕ್ಕೆ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಶ್ರೀಮಠಕ್ಕೆ ಚಿತ್ತೈಸಲಿರುವರು. ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ, ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಲಿರುವುದು.



