ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಬಹುಮತ ಪಡೆಯುವಲ್ಲಿ ವಿಫಲವಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಜಿನಾಮೆ ನೀಡಬೇಕು ಎಂದು ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಒಬ್ರಯಾನ್ ಅವರು ಸವಾಲು ಹಾಕಿದ್ದಾರೆ.
ಈ ಕುರಿತು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಡೆರೆಕ್ ಒಬ್ರಯಾನ್, 'ರಾಜ್ಯದ 294 ವಿಧಾನಸಭಾ ಕ್ಷೇತ್ರಗಳಲ್ಲೂ ಮೋದಿ ಅವರು ಬಿಜೆಪಿಯ ಮುಖವಾಣಿಯಂತೆ ಬಿಂಬಿಸಿಕೊಂಡಿದ್ದಾರೆ.
ಅವರಿಗೆ ಧೈರ್ಯವಿದ್ದರೆ ನನ್ನ ಸವಾಲು ಸ್ವೀಕರಿಸಲಿ' ಎಂದು ಹೇಳಿದ್ದಾರೆ.
'ಬಂಗಾಳದ ಎಲ್ಲಾ ಕ್ಷೇತ್ರದಲ್ಲೂ ನಾನೇ ಅಭ್ಯರ್ಥಿ ಎಂದು ಮೋದಿ ಹೇಳಿದ್ದಾರೆ. ಮೇ 4ರಂದು ಚುನಾವಣಾ ಫಲಿತಾಂಶ ಬಂದು, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದಾಗ, ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡುವ ಧೈರ್ಯವನ್ನು ತೋರಿಸಿ' ಎಂದು ಹೇಳಿದ್ದಾರೆ.
ಏ.23ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಆಗಿತ್ತು. ಎರಡನೇ ಹಾಗೂ ಕೊನೆ ಹಂತದ ಮತದಾನ ಆರಂಭವಾಗಿದ್ದು, 142 ಕ್ಷೇತ್ರಗಳಲ್ಲಿ ಇಂದು (ಏ.29) ಮತದಾನ ನಡೆಯುತ್ತಿದೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ನಿಕಟ ಪೈಪೋಟಿಯಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ.

