ನವದೆಹಲಿ: ಪಶ್ಚಿಮ ಏಷ್ಯಾ ಯುದ್ಧ ಕುರಿತು ಚರ್ಚಿಸಲು ಇತ್ತೀಚೆಗೆ ಕರೆದಿದ್ದ ಸರ್ವಪಕ್ಷಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೈರಾಗಿದ್ದ ವಿಚಾರವಾಗಿ ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಬುಧವಾರ ವಾಗ್ಯುದ್ಧ ನಡೆಯಿತು.
'ಪ್ರಧಾನಿ ಮೋದಿ ಅಂದಿನ ಸಭೆಗೆ ಏಕೆ ಗೈರಾಗಿದ್ದರು' ಎಂದು ಪ್ರಶ್ನಿಸುವ ಮೂಲಕ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರೆ, 'ಪಶ್ಚಿಮ ಏಷ್ಯಾ ಯುದ್ಧದ ವಿಷಯವಾಗಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ' ಎಂದು ಸಚಿವ ರಿಜಿಜು ತಿರುಗೇಟು ನೀಡಿದರು.
'ಪಶ್ಚಿಮ ಏಷ್ಯಾ ಯುದ್ಧ ಹಾಗೂ ಅದರಿಂದ ಆಗುತ್ತಿರುವ ಪರಿಣಾಮಗಳ ಕುರಿತು ಸಂಬಂಧಿಸಿದ ಸಚಿವರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತಮ್ಮ ಹೇಳಿಕೆ ನೀಡಿದ್ದಾರೆ. ನಂತರ, ಪ್ರಧಾನಿ ನರೇಂದ್ರ ಮೋದಿ ಕೂಡ ವಿಸ್ತೃತ ಹೇಳಿಕೆ ನೀಡಿದ್ದಾರೆ' ಎಂದು ಹೇಳಿದರು.
'ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಗೆ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳ ಸದಸ್ಯರು ಮಾತ್ರ ಹಾಜರಾಗಿದ್ದರು. ಲೋಕಸಭೆ ಮತ್ತು ರಾಜ್ಯಸಭೆ ವಿಪಕ್ಷ ನಾಯಕರು ಈ ಸಭೆಗೆ ಹಾಜರಾಗಿರಲಿಲ್ಲ' ಎಂದು ರಿಜಿಜು ಕುಟುಕಿದರು.
'ಸರ್ಕಾರ ಯಾವಾಗಲೂ ವಿರೋಧ ಪಕ್ಷದ ನಾಯಕನನ್ನು ಗೌರವಿಸಿದೆ. ಆದರೆ, ವಿಪಕ್ಷಗಳು ಮಾತ್ರ ಸಂಸತ್ನ ಒಳಗೆ ಹಾಗೂ ಹೊರಗೆ ಪ್ರಧಾನಿಯವರನ್ನು ಟೀಕಿಸುತ್ತಿವೆ. ವಿರೋಧ ಪಕ್ಷ ನಾಯಕ ತಮ್ಮ ಸ್ಥಾನದ ಘನತೆ ಎತ್ತಿ ಹಿಡಿಯುತ್ತಾರೆ ಎಂಬುದು ನಮ್ಮ ಭಾವನೆ. ಅವರು ಹಾಗೆ ಮಾಡದೇ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಕೂಡ ಇದೇ ರೀತಿ ವರ್ತಿಸುತ್ತಾರೆ' ಎಂದು ರಿಜಿಜು ಆರೋಪಿಸಿದರು.
ಮಲ್ಲಿಕಾರ್ಜುನ ಖರ್ಗೆ ಕಿರಣ್ ರಿಜಿಜು ಸಂಸದೀಯ ವ್ಯವಹಾರಗಳ ಸಚಿವ ನಮ್ಮಿಂದಾಗಿ ಪಶ್ಚಿಮ ಏಷ್ಯಾ ಯುದ್ಧ ನಡೆಯುತ್ತಿಲ್ಲ. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಇಡೀ ದೇಶವೇ ಒಗ್ಗಟ್ಟಿನಿಂದ ನಿಲ್ಲಬೇಕು. ಆದರೆ ವಿಪಕ್ಷ ಪಾಳಯ ಈ ವಿಷಯದಲ್ಲಿಯೂ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕಸರ್ವಪಕ್ಷ ಸಭೆ ನಡೆದಾಗ ನಿಮ್ಮ ಪ್ರಧಾನಿ ಎಲ್ಲಿದ್ದರು? ನೀವು ಸರ್ಕಾರದ ಪ್ರತಿನಿಧಿಯಾಗಿ ಅಂದಿನ ಸಭೆಯಲ್ಲಿ ಪಾಲ್ಗೊಂಡಿದ್ದಿರಿ. ನಾನು ಕೂಡ ನನ್ನ ಪ್ರತಿನಿಧಿಯೊಬ್ಬರನ್ನು ಕಳುಹಿಸಿದ್ದೆ. ನಾವು ನಿಮ್ಮ ಭಾಷಣ ಕೇಳುವುದಕ್ಕಾಗಿ ಸಭೆಗೆ ಹಾಜರಾಗಬೇಕಿತ್ತಾ? ಈ ವಿಚಾರವಾಗಿ ಮಾತನಾಡಲು ನಿಮಗೆ ಏನು ಅಧಿಕಾರ ಇದೆ?

