ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡನೆ (ಡೆಲಿಮಿಟೇಶನ್) ಸಂಬಂಧಿಸಿದ ಮಸೂದೆಗಳ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ನಾರಿ ಶಕ್ತಿ”ಯನ್ನು ನೀಡಿದ್ದೇವೆ ಎಂದು ಹೇಳಿದರೂ, ಅದನ್ನು “ಮುಳ್ಳಿನ ತಂತಿಯಲ್ಲಿ ಸುತ್ತಿ ನೀಡಿದ್ದಾರೆಂದು” ಎಂದು ಕಿಡಿಕಾರಿದ್ದಾರೆ.
ಲೋಕಸಭೆಯಲ್ಲಿ ಚರ್ಚೆಯ ವೇಳೆ ಮಾತನಾಡಿದ ತರೂರ್ ಅವರು, ಮಹಿಳಾ ಮೀಸಲಾತಿಗೆ ದೇಶಾದ್ಯಂತ ವ್ಯಾಪಕ ರಾಜಕೀಯ ಒಪ್ಪಿಗೆ ಇದ್ದರೂ, ಅದನ್ನು ಜಾರಿಗೆ ತರಲು ಡೆಲಿಮಿಟೇಶನ್ ಪ್ರಕ್ರಿಯೆಯೊಂದಿಗೆ ಜೋಡಿಸಿರುವುದೇಕೆ ಎಂದು ಪ್ರಶ್ನಿಸಿದರು. ಇದೇ ವೇಳೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯು "ರಾಜಕೀಯ ನೋಟು ಅಮಾನ್ಯೀಕರಣ"ವಾಗಿ ಪರಿಣಮಿಸುತ್ತದೆ ಎಂದು ಹೇಳಿದರು.
ಮಹಿಳಾ ಮೀಸಲಾತಿಯನ್ನು ಕ್ಷೇತ್ರ ನಿರ್ಣಯದೊಂದಿಗೆ ಜೋಡಿಸುವುದು ಭಾರತೀಯ ಮಹಿಳೆಯರ ಆಕಾಂಕ್ಷೆಗಳನ್ನು ದೇಶದ ಇತಿಹಾಸದಲ್ಲಿ ''ಅತ್ಯಂತ ವಿವಾದಾತ್ಮಕ ಮತ್ತು ಸಂಕೀರ್ಣ'' ಆಡಳಿತಾತ್ಮಕ ವ್ಯಾಯಾಮಗಳಲ್ಲಿ ಒಂದಕ್ಕೆ ಒತ್ತೆಯಾಳುಗಳನ್ನಾಗಿ ಮಾಡುವುದಾಗಿದೆ ಎಂದರು.
ಇಂದು ನಾವು ಮಹಿಳಾ ಮೀಸಲಾತಿ ಪರವಾಗಿ ಬಹುತೇಕ ಸರ್ವಾನುಮತದ ರಾಜಕೀಯ ಒಮ್ಮತವಿರುವ ಹೊಸ್ತಿಲಲ್ಲಿ ನಿಂತಿದ್ದೇವೆ. ಪ್ರತಿಯೊಂದು ಪ್ರಮುಖ ಪಕ್ಷವೂ ಸಾಂಕೇತಿಕತೆಯ ಸಮಯ ಮುಗಿದಿದೆ ಮತ್ತು ಸಾಮೂಹಿಕ ಪಾಲುದಾರಿಕೆಯ ಯುಗ ಪ್ರಾರಂಭವಾಗಬೇಕು ಎಂದು ಅರಿತುಕೊಂಡಿದೆ ಆದರೆ ನಮ್ಮ ಮುಂದಿರುವ ಶಾಸಕಾಂಗ ಪ್ರಕ್ರಿಯೆಯಿಂದ ನಾನು ತೀವ್ರವಾಗಿ ವಿಚಲಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.

