ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಪ್ರಚಾರವು ಮೀನು ಮತ್ತು 'ಜಲ್ ಮುರಿ' (ಖಾರವಾದ ಪುರಿ) ಸುತ್ತ ಸುತ್ತುತ್ತಿದೆ. ಬಿಜೆಪಿಯು ಅಧಿಕಾರಕ್ಕೆ ಬಂದರೆ ಜನರ ಆಹಾರ ಪದ್ಧತಿಯ ಮೇಲೆ ನಿರ್ಬಂಧ ಹೇರಲಿದೆ ಎಂಬ ಟಿಎಂಸಿ ಆರೋಪದ ಬೆನ್ನಲ್ಲೇ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಮೀನು ತಿನ್ನಲು ಇಷ್ಟಪಡುವುದಾದರೆ, ನಾನೇ ಸ್ವತಃ ಅವರಿಗಾಗಿ ಮೀನಿನ ಅಡುಗೆ ಮಾಡಿ ಬಡಿಸುವೆ ಎಂದಿದ್ದಾರೆ.
ಇತ್ತೀಚೆಗೆ ಜಾರ್ಗ್ರಾಮದಲ್ಲಿ ಪ್ರಧಾನಿ ಮೋದಿ ಅವರು ರಸ್ತೆ ಬದಿಯ ಅಂಗಡಿಯೊಂದರಲ್ಲಿ ಬಂಗಾಳದ ಪ್ರಸಿದ್ಧ ತಿಂಡಿ 'ಜಲ್ ಮುರಿ' ಸವಿದಿದ್ದರು. ಇದನ್ನು 'ಕೇವಲ ಒಂದು ಪ್ರದರ್ಶನ' ಎಂದು ಕರೆದ ಮಮತಾ ಬ್ಯಾನರ್ಜಿ, ಆ ಜಲ್ ಮುರಿಯನ್ನು ಅಂಗಡಿಯವರು ಮಾಡಿದ್ದಲ್ಲ, ಅದನ್ನು ಅವರ ಎಸ್ಪಿಜಿ ಭದ್ರತಾ ಸಿಬ್ಬಂದಿಯೇ ಸಿದ್ಧಪಡಿಸಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದರು.
ಬಿಜೆಪಿ ತಿರುಗೇಟು
ಮಮತಾ ಅವರ ಟೀಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಅನುರಾಗ್ ಠಾಕೂರ್, ಪ್ರಧಾನಿಗಳು ಸಣ್ಣ ವ್ಯಾಪಾರಿಗಳ ಬಳಿ ಹೋಗಿ ತಿಂಡಿ ಖರೀದಿಸಿದ್ದು ದೊಡ್ಡ ಪ್ರಭಾವ ಬೀರಲಿದೆ. ಮಮತಾ ಅವರು ಕಳೆದ 15 ವರ್ಷಗಳಲ್ಲಿ ಇಂತಹ ಸಣ್ಣ ವ್ಯಾಪಾರಿಗಳನ್ನು ಎಂದಾದರೂ ಭೇಟಿ ಮಾಡಿದ್ದಾರೆಯೇ?, ಬಂಗಾಳದ ಮೀನು ಪ್ರಿಯರ ಆಹಾರ ಪದ್ಧತಿಯನ್ನು ಕಿತ್ತುಕೊಳ್ಳುವ ಯಾವುದೇ ಉದ್ದೇಶ ನಮಗಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಗೆ ಮೊದಲ ಹಂತದ ಮತದಾನ ಏಪ್ರಿಲ್ 23ರಂದು ನಡೆಯಲಿದ್ದು, 2ನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದೆ. ಫಲಿತಾಂಶ ಮೇ 4ರಂದು ಹೊರಬೀಳಲಿದೆ.

