ಈ ಚಿತ್ರದ ಪಾತ್ರವೊಂದು 'ಅರಿಷ್ಠಂ' ಎಂಬ ಹುದುಗಿಸಿದ ಗಿಡಮೂಲಿಕೆ ಕಷಾಯದ ಮಿತಿ ಮೀರಿದ ಸೇವನೆಯ ನಂತರ ಲಿವರ್ ಸಿರೋಸಿಸ್ನಿಂದ ಸಾವನ್ನಪ್ಪುತ್ತದೆ. ನಟ ಬಿಜುಕ್ಕುಟ್ಟನ್ ನಟಿಸಿದ ಈ ಸಿನಿಮಾದ ಪಾತ್ರ ದೀರ್ಘಕಾಲದವರೆಗೆ ಕಷಾಯವನ್ನು ಸೇವಿಸಿ ಸಾವನ್ನಪ್ಪಿರುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ಇದೀಗ ಆಯುರ್ವೇದ ವೈದ್ಯರ ಸಮೂಹವು ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿ ವಿರುದ್ಧ ಅಪಪ್ರಚಾರದ ಭಾಗ ಈ ಸಿನಿಮಾ ಎಂದು ಹೇಳಿದ್ದಾರೆ. ಆಯುರ್ವೇದ ವೈದ್ಯಕೀಯ ಸಂಘದ (AMAI) ಕೆಲವು ಕಾರ್ಯಕರ್ತರು ಇತ್ತೀಚೆಗೆ ಈ ಸಿನಿಮಾದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. "ಸಿನಿಮಾದಲ್ಲಿ ಕಷಾಯ ಸೇವಿಸಿ ಸಾವನ್ನಪ್ಪುವ ಪಾತ್ರದ ನಿರ್ವಹಣೆಯನ್ನು ಮತ್ತು ಅಪಪ್ರಚಾರವನ್ನು ತೆಗೆದು ಹಾಕಬೇಕು" ಎಂದು ಸಂಘ ಹೇಳಿದೆ. ಆದರೆ AMAIನ ಕೇರಳ ರಾಜ್ಯದ ಅಧ್ಯಕ್ಷ ವಿಷ್ಣು ನಂಬೂದಿರಿ ಸೋಮವಾರ ಈ ನಿಟ್ಟಿನಲ್ಲಿ ಇನ್ನೂ ಅಧಿಕೃತವಾಗಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.
ಎಕ್ಸ್ ನಲ್ಲಿ ʼಲಿವರ್ ಡಾಕ್ʼ ಎಂದೇ ಪ್ರಸಿದ್ಧರಾಗಿರುವ ಡಾ. ಸಿರಿಯಾಕ್ ಅಬಿ ಫಿಲಿಪ್ಸ್ ಈ ಬಗ್ಗೆ ಎಕ್ಸ್ ನಲ್ಲಿ ದೀರ್ಘವಾದ ಪೋಸ್ಟ್ ಒಂದು ಹಾಕಿದ್ದು ಪರ-ವಿರೋಧ ಚರ್ಚೆಗೆ ಕಾರಣರಾಗಿದ್ದಾರೆ. ಆದರೆ ವಿಷ್ಣು ನಂಬೂದಿರಿ ಪ್ರಕಾರ, "ಸಿನಿಮಾದಲ್ಲಿ ತೋರಿಸಲಾಗಿರುವ ಪಾತ್ರವು ದೀರ್ಘಕಾಲ ವೈದ್ಯರ ರೋಗಪರಿಶೀಲನೆಯ ಚೀಟಿಯಿಲ್ಲದೇ ಅರಿಷ್ಠಂ ಸೇವಿಸಿರುವ ಕಾರಣದಿಂದ ಸಾವನ್ನಪ್ಪಿದ್ದಾರೆ. ಇದು ಜನರ ನಡುವೆ ವೈದ್ಯರ ಸೂಚನೆಯ ವಿನಃ ಅರಿಷ್ಠಂ ಸೇವಿಸಬಾರದು ಎನ್ನುವ ಮಾಹಿತಿಯನ್ನೂ ಕೊಡುತ್ತದೆ!"
ಅವರ ಪ್ರಕಾರ, ಆಯುರ್ವೇದ ಔಷಧಿಗಳನ್ನು ಎಷ್ಟು ದೀರ್ಘಕಾಲ ಸೇವಿಸುತ್ತೀರಿ ಮತ್ತು ಎಷ್ಟು ಸೇವಿಸುವಿರಿ ಎನ್ನುವುದೂ ಮುಖ್ಯವಾಗುತ್ತದೆ. ಆದರೆ ಸಿನಿಮಾವನ್ನು ಬಳಸಿ ಆಯುರ್ವೇದ ವಿರೋಧಿಗಳು ಆಯುರ್ವೇದದ ವಿರುದ್ಧ "ನಕಾರಾತ್ಮಕ ಪ್ರಚಾರ" ಮಾಡುತ್ತಿದ್ದಾರೆ. ವೈದ್ಯಕೀಯ ಕಂಪನಿಗಳ ಏಕಸ್ವಾಮ್ಯದ ಪ್ರಯತ್ನದಿಂದ ಇಂತಹ ಅಪಪ್ರಚಾರ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ಚಿತ್ರದ ನಿರ್ದೇಶಕ ಸವಿನ್ ಎಸ್ ಎ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅಗತ್ಯವಿದ್ದರೆ ನಿರ್ಮಾಪಕರು ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದ್ದಾರೆ. "ವಾಝಾ ಬಯೋಪಿಕ್ ಆಫ್ ಎ ಬಿಲಿಯನ್ ಬಾಯ್ಸ್' ಚಿತ್ರದ ಮುಂದುವರಿದ ಭಾಗವಾಗಿರುವ ಸಿನಿಮಾ ಎಪ್ರಿಲ್ 2ರಂದು ಬಿಡುಗಡೆಯಾದಂದಿನಿಂದ ವಿಶ್ವಾದ್ಯಂತ 200 ಕೋಟಿ ರೂಳಗೂ ಮಿಗಿಲಾಗಿ ಲಾಭ ಗಳಿಸಿದೆ.
ಈ ನಡುವೆ ಸಾಮಾಜಿಕ ಮಾಧ್ಯಮಗಳ ಮೂಲಕ ಆಯುರ್ವೇದ ಔಷಧಿಗಳ ಪರಿಣಾಮವನ್ನು ಸದಾ ಪ್ರಶ್ನಿಸುತ್ತಿರುವ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ಸಿನಿಮಾವನ್ನು ಬೆಂಬಲಿಸಿದ್ದಾರೆ. 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಅವರು ಹಾಕಿರುವ ಪೋಸ್ಟ್ನಲ್ಲಿ ನಿರ್ಮಾಪಕರಿಗೆ ಸಂಪೂರ್ಣ ಮತ್ತು ಅತ್ಯುನ್ನತ ಮಟ್ಟದ ಶೈಕ್ಷಣಿಕ ಪರಿಣತಿಯಿದೆ ಎಂದು ಬೆಂಬಲ ಸೂಚಿಸಿದ್ದಾರೆ.
"ಇತ್ತೀಚೆಗಿನ ಮಲಯಾಳಂ ಸಿನಿಮಾವಾದ "ವಾಝಾ 2 ಆಯುರ್ವೇದ ಔಷಧವನ್ನು ಸೇವಿಸುತ್ತಲೇ ಇರುವ ಪಾತ್ರವನ್ನು ಚಿತ್ರಿಸಿದೆ. (ಅರಿಷ್ಟ, ಗಿಡಮೂಲಿಕೆ ಮದ್ಯ, ಶೇ 10-15 ಆಲ್ಕೋಹಾಲ್. ಆಯುರ್ವೇದ ವೈದ್ಯರು ಕುರುಡಾಗಿ ಅರಿಷ್ಟದಲ್ಲಿ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದಾಗಿ ಹೇಳುತ್ತಾರೆ) ಗಂಭೀರ ಮಾರಕ ಯಕೃತ್ತಿನ ಕಾಯಿಲೆಯಿಂದ ಪಾತ್ರ ಮರಣ ಹೊಂದುವಲ್ಲಿ ಸಿನಿಮಾ ಕೊನೆಗೊಳ್ಳುತ್ತದೆ. ಸಿನಿಮಾ ಮಾಡಿದ ಜನರು ಬುದ್ಧಿವಂತರು ಮತ್ತು ಉತ್ತಮ ಮಾಹಿತಿ ಹೊಂದಿದ್ದಾರೆ. ದಶಕಗಳಿಂದ ಆಯುರ್ವೇದ ಸಮುದಾಐವು ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಗಿಡಮೂಲಿಕೆ ಔಷಧ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಹೇಳುತ್ತಿದೆ. ಆದರೆ ಔಷಧಿಗಳಲ್ಲಿ ವಿಷಮಯ ಸಸ್ಯಶಾಸ್ತ್ರ ಮತ್ತು ಆಲ್ಕೋಹಾಲ್ ಹೆಚ್ಚಿರುತ್ತದೆ. ಅದು ಯಕೃತ್ತಿಗೆ ಅತ್ಯಂತ ವಿಷಕಾರಿಯಾಗಬಹುದು. ಹೀಗಾಗಿ ಲಿವರ್ ಕಸಿ ಅಥವಾ ಸಾವು ಸಂಭವಿಸಬಹುದು. ಸಮಂಜಸವಾದ ಪುರಾವೆಗಳಿಲ್ಲದೆ ಇದನ್ನು ನೀಡಲಾಗುತ್ತಿದೆ. ಸಿನಿಮಾ ಈ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದೆ" ಎಂದು ಅವರು ಬರೆದಿದ್ದಾರೆ.
ಫಿಲಿಪ್ ಅವರು, "ಆಯುರ್ವೇದ ಗಿಡಮೂಲಿಕೆಗಳು, ಶಾಸ್ತ್ರೀಯ ಸೂತ್ರೀಕರಣಗಳು, ಸ್ವಾಮ್ಯದ ಗಿಡಮೂಲಿಕೆಗಳು ಮತ್ತು ಸಾಂಪ್ರದಾಯಿವಾಗಿ ತಯಾರಿಸಿರುವುದಾಗಿ ಹೇಳಲಾಗುತ್ತಿದೆ. ಆದರೆ ಅವು ಆಲ್ಕೋಹಾಲ್, ಯಕೃತ್ತಿಗೆ ವಿಷವಾಗಿರುವ ಸಸ್ಯಶಾಸ್ತ್ರ, ಭಾರ ಲೋಹಗಳು ಮತ್ತು ಅಂಗಗಳಿಗೆ ಹಾನಿ ಮಾಡುವ ಕಲಬೆರಕೆಗಳನ್ನು ಹೊಂದಿವೆ" ಎಂದು ತೋರಿಸಲು ಅನೇಕ ಅಧ್ಯಯನಗಳನ್ನು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಜೋಡಿಸಿದ್ದಾರೆ.

