ನವದೆಹಲಿ: ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಗುರುವಾರ ಮಂಡಿಸಲಾಯಿತು.
ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಅಮಿತ್ ಶಾ ಅವರು ಮೂರು ಮಸೂದೆಗಳನ್ನು ಮಂಡಿಸಿದರು. ಪ್ರಸ್ತಾವಿತ ಮಸೂದೆಗಳು ಸಂವಿಧಾನ ವಿರೋಧಿ ಎಂದು ವಿಪಕ್ಷಗಳ ಪ್ರತಿಭಟನೆ ನಡೆಸಿದವು.
ತೀವ್ರ ಪ್ರತಿಭಟನೆ ನಡುವೆಯೇ ಈ ಮೂರು ಮಸೂದೆಗಳನ್ನು ಮಂಡಿಸಲಾಯಿತು.
ಮಹಿಳಾ ಮೀಸಲಾತಿ ಮಸೂದೆಗೆ ಉದ್ದೇಶಿತ ಬದಲಾವಣೆಗಳನ್ನು ಈ ಹಿಂದೆ ಸಂಸತ್ತಿನಲ್ಲಿ ಅಂಗೀಕರಿಸುವಾಗ ಏಕೆ ಸೇರಿಸಲಿಲ್ಲ ಎಂದು ಕಾಂಗ್ರೆಸ್ನ ಕೆ.ಸಿ. ವೇಣುಗೋಪಾಲ್ ಪ್ರಶ್ನಿಸಿದರು. ಮಹಿಳಾ ಮೀಸಲಾತಿ ತಿದ್ದುಪಡಿಯ ನೆಪದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಸಮಿತಿ ರಚಿಸುವ ಮಸೂದೆ ಸಂವಿಧಾನ ವಿರೋಧಿಯಾಗಿದೆ ಎಂದು ಅವರು ಹೇಳಿದರು.
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಮಸೂದೆಗಳನ್ನು ಮಂಡಿಸುವಲ್ಲಿ ಸರ್ಕಾರ ತೋರುತ್ತಿರುವ ಅವಸರವನ್ನು ಪ್ರಶ್ನಿಸಿದರು. ನಾವು ಮಹಿಳೆಯರ ಪರವಾಗಿದ್ದೇವೆ, ಆದರೆ ನೀವು ಜನಗಣತಿಯನ್ನು ಏಕೆ ನಡೆಸಲು ಬಯಸುತ್ತಿಲ್ಲ? ಎಂದು ಪ್ರಶ್ನಿಸಿದರು.

