ತಮ್ಮ ಮೂರು ದಿನಗಳ ಭೇಟಿ ಅಂಗವಾಗಿ ಜರ್ಮನ್ ಸಂಸತ್ತಿನ ರಕ್ಷಣಾ ಮತ್ತು ಭದ್ರತಾ ಸ್ಥಾಯಿ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜಗತ್ತು ಹೊಸ ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ. ತಾಂತ್ರಿಕ ಪರಿವರ್ತನೆಯಿಂದ ಪರಿಸ್ಥಿತಿ ಅತ್ಯಂತ ಸಂಕೀರ್ಣ ಮತ್ತು ಪರಸ್ಪರ ಸಂಪರ್ಕಿತವಾಗಿದೆ ಎಂದು ಹೇಳಿದರು.
ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಮನೋಭಾವದೊಂದಿಗೆ ಹೊಸ ದೃಷ್ಟಿಕೋನವು ಈ ಸಮಯದ ಅಗತ್ಯವಾಗಿದೆ ಎಂದು ಹೇಳಿದರು.
ಭಾರತ ಮತ್ತು ಜರ್ಮನಿಯ ರಕ್ಷಣಾ ಕೈಗಾರಿಕಾ ವ್ಯವಸ್ಥೆಗಳ ನಡುವೆ ಸಹಕಾರವನ್ನು ಹೆಚ್ಚಿಸಲು ರಾಜನಾಥ್ ಸಿಂಗ್ ಮನವಿ ಮಾಡಿದರು. ಪಶ್ಚಿಮ ಏಷ್ಯಾದ ಸಂಘರ್ಷವು 50 ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದಿದ್ದು, ಜಾಗತಿಕ ಪರಿಣಾಮಗಳನ್ನು ಉಂಟುಮಾಡಿದೆ ಎಂಬ ಹಿನ್ನೆಲೆ ಅವರ ಭೇಟಿ ನಡೆದಿದೆ.
ಪಶ್ಚಿಮ ಏಷ್ಯಾ ಪ್ರದೇಶದಿಂದ ತನ್ನ ಇಂಧನ ಅಗತ್ಯಗಳ ಮಹತ್ತರ ಭಾಗವನ್ನು ಪೂರೈಸಿಕೊಳ್ಳುವ ಅಭಿವೃದ್ಧಿಶೀಲ ದೇಶವಾದ ಭಾರತಕ್ಕೆ, ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗುವ ವ್ಯತ್ಯಯಗಳು ದೂರದ ಘಟನೆಗಳಲ್ಲ; ಅವು ನಮ್ಮ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ನೇರ ಪರಿಣಾಮ ಬೀರುವ ವಾಸ್ತವಗಳಾಗಿವೆ ಎಂದು ಹೇಳಿದರು.
ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ಸಕ್ರಿಯ ಮತ್ತು ಸಂಯೋಜಿತ ಕಾರ್ಯತಂತ್ರವನ್ನು ಅನುಸರಿಸಿದೆ ಎಂದರು.
ಆಧುನಿಕ ಜಾಗತಿಕ ಸವಾಲುಗಳನ್ನು ಎದುರಿಸಲು ಸಮನ್ವಯಿತ ಪ್ರತಿಕ್ರಿಯೆಗಳು ಮತ್ತು ನಂಬಿಕೆಯ ತಂತ್ರಜ್ಞಾನದ ಸಹಭಾಗಿತ್ವಗಳ ಅಗತ್ಯವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಫ್ರಿಡ್ರಿಚ್ ಮರ್ಜ್ ಈ ತಂತ್ರಜ್ಞಾನದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲು ವಿಶೇಷ ಒತ್ತು ನೀಡಿದ್ದಾರೆ ಎಂದು ಹೇಳಿದರು.
ಐರೋಪ್ಯ ಒಕ್ಕೂಟದ ಮಟ್ಟದಲ್ಲಿಯೂ ನಮ್ಮ ಅಭಿಪ್ರಾಯಗಳಲ್ಲಿ ಸ್ಪಷ್ಟ ಹೊಂದಾಣಿಕೆ ಕಂಡುಬರುತ್ತಿದೆ. ಭಾರತ-ಯುರೋಪಿಯನ್ ಒಕ್ಕೂಟ ರಕ್ಷಣಾ ಮತ್ತು ತಂತ್ರಜ್ಞಾನದ ಸಹಭಾಗಿತ್ವದ ಮೂಲಕ ಭಾರತ ಜತೆ ಸಹಕಾರ ಹೆಚ್ಚಿಸಲು ಉತ್ಸಾಹ ಹೆಚ್ಚುತ್ತಿದೆ ಎಂದರು.
ಆತ್ಮನಿರ್ಭರ ಭಾರತವು ಕೇವಲ ಖರೀದಿ ವಿಷಯವಲ್ಲ; ಅದು ಸಹ-ಸೃಷ್ಟಿ, ಸಹ-ಅಭಿವೃದ್ಧಿ ಮತ್ತು ಸಹ-ನವೀನತೆಗೆ ಆಹ್ವಾನವಾಗಿದೆ, ಜರ್ಮನಿಯ ಪ್ರಮುಖ ಕೈಗಾರಿಕಾ ಸಂಸ್ಥೆಗಳ ಬಲವನ್ನು ನಾವು ಗುರುತಿಸುತ್ತೇವೆ, ಪ್ರಸಿದ್ಧ 'ಮಿಟ್ಟೆಲ್ಸ್ಟ್ಯಾಂಡ್' (ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) ಸಂಸ್ಥೆಗಳ ಚುರುಕುತನವನ್ನು ನಾವು ಮೆಚ್ಚುತ್ತೇವೆ ಎಂದರು.
ಭಾರತದಲ್ಲಿಯೂ ಸ್ಟಾರ್ಟ್ಅಪ್ಗಳು ಮತ್ತು ಖಾಸಗಿ ಸಂಸ್ಥೆಗಳು ವೇಗವಾಗಿ ಬೆಳೆಯುತ್ತಿದ್ದು, ರಕ್ಷಣಾ ಕ್ಷೇತ್ರದ ಸಾಮರ್ಥ್ಯವನ್ನು ವೃದ್ಧಿಸುತ್ತಿವೆ. ಈ ಕ್ಷೇತ್ರದಲ್ಲಿ ಭಾರತ ಮತ್ತು ಜರ್ಮನಿ ಪರಸ್ಪರ ಪೂರಕವಾಗಿದ್ದು, ಸಹಭಾಗಿತ್ವವನ್ನು ಇನ್ನಷ್ಟು ಗಾಢಗೊಳಿಸಬಹುದು ಎಂದು ಹೇಳಿದರು.
ಭಾರತ ಮತ್ತು ಜರ್ಮನಿ ಕೇವಲ ತಂತ್ರಜ್ಞಾನದ ಪಾಲುದಾರರು ಮಾತ್ರವಲ್ಲ, ಇಂದಿನ ಜಾಗತಿಕ ಚರ್ಚೆಯನ್ನು ರೂಪಿಸುವ ಮಹತ್ವದ ಧ್ವನಿಗಳಾಗಿದ್ದಾರೆ ಎಂದು ಪುನರುಚ್ಚರಿಸಿದರು.
ನಾವು ಹಂಚಿಕೊಂಡ ಮೌಲ್ಯಗಳಿಂದ ಕೂಡಿದ ಸ್ಥಿರ ಪ್ರಜಾಸತ್ತಾತ್ಮಕ ರಾಷ್ಟ್ರಗಳು. ನಮ್ಮ ಆರ್ಥಿಕತೆಗಳು ಸ್ಥೈರ್ಯ, ನವೀನತೆ ಮತ್ತು ಕೈಗಾರಿಕಾ ಮನೋಭಾವದಿಂದ ಚಾಲಿತವಾಗಿವೆ. ನಿಮ್ಮ ಮಾರ್ಗದರ್ಶನ ಮತ್ತು ಬೆಂಬಲವು ನಮ್ಮ ರಕ್ಷಣಾ ಹಾಗೂ ತಂತ್ರಜ್ಞಾನದ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.
ಭಾರತ-ಜರ್ಮನಿ ಸಹಭಾಗಿತ್ವವು ಸಂಕಷ್ಟದ ಪ್ರತಿಕ್ರಿಯೆಯಾಗಿ ಅಲ್ಲ, ಬದಲಾಗಿ ಎರಡು ಪರಿಪಕ್ವ ಪ್ರಜಾಸತ್ತಾತ್ಮಕ ರಾಷ್ಟ್ರಗಳ ದೃಢ ಸಂಕಲ್ಪದಿಂದ ರೂಪುಗೊಂಡ ಮಾದರಿಯಾಗಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು.
ಪ್ರಸ್ತುತ ಭೌಗೋಳಿಕ-ರಾಜಕೀಯ ಅಸ್ಥಿರತೆಯನ್ನು ಕೇವಲ ಪ್ರಾದೇಶಿಕ ವಿಷಯಗಳಾಗಿ ಕಾಣಲು ಸಾಧ್ಯವಿಲ್ಲ. ಇದರ ಪರಿಣಾಮಗಳು ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿದ್ದು, ಇಂಧನ ಭದ್ರತೆ, ಆಹಾರ ಭದ್ರತೆ ಮತ್ತು ಜಾಗತಿಕ ಆರ್ಥಿಕ ಸ್ಥಿರತೆಗೆ ದೂರವ್ಯಾಪಿ ಪರಿಣಾಮ ಬೀರುತ್ತವೆ ಎಂದರು.
ಬೆರ್ಲಿನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜನಾಥ್ ಸಿಂಗ್ ಅವರನ್ನು ಸೈನಿಕ ಗೌರವಗಳೊಂದಿಗೆ ಸ್ವಾಗತಿಸಲಾಯಿತು. ಮ್ಯೂನಿಕ್ನಿಂದ ಬೆರ್ಲಿನ್ಗೆ ತೆರಳುವ ವೇಳೆ ವಿಶೇಷ ಜರ್ಮನ್ ವಾಯುಪಡೆಯ ವಿಮಾನದಲ್ಲಿ ಅವರು ಪ್ರಯಾಣಿಸಿದರು.
ಇದಕ್ಕೂ ಮೊದಲು, ರಾಜನಾಥ್ ಸಿಂಗ್ ಅವರು ಬೆರ್ಲಿನ್ನ ಹುಂಬೋಲ್ಟ್ ವಿಶ್ವವಿದ್ಯಾಲಯದಲ್ಲಿ ನೋಬೆಲ್ ಪುರಸ್ಕೃತ ರವೀಂದ್ರನಾಥ ಟಾಗೋರ್ ಅವರಿಗೆ ಪುಷ್ಪಾಂಜಲಿ ಸಲ್ಲಿಸಿದರು. ಇದು ಭಾರತ ಮತ್ತು ಜರ್ಮನಿಯ ನಡುವಿನ ದೀರ್ಘಕಾಲದ ಸಾಂಸ್ಕೃತಿಕ ಹಾಗೂ ಬೌದ್ಧಿಕ ಬಾಂಧವ್ಯವನ್ನು ಉಲ್ಲೇಖಿಸಲಾಗಿದೆ.

