ತ್ರಿಶೂರ್: ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತಿಕೋಡ್ನಲ್ಲಿರುವ ಪಟಾಕಿ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 13 ಜನರು ಸಾವಿಗೀಡಾಗಿದ್ದು, ಇದನ್ನು ರಾಜ್ಯ-ನಿರ್ದಿಷ್ಟ ವಿಪತ್ತು ಎಂದು ಘೋಷಿಸಿರುವುದಾಗಿ ಕಂದಾಯ ಸಚಿವ ಕೆ. ರಾಜನ್ ಬುಧವಾರ ಹೇಳಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಫೋಟದ ನಂತರ ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಆನ್ಲೈನ್ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹14 ಲಕ್ಷ ಆರ್ಥಿಕ ನೆರವು ನೀಡಲು ಸಹ ನಿರ್ಧರಿಸಲಾಗಿದೆ ಎಂದುಹೇಳಿದ್ಧಾರೆ.
ಸ್ಫೋಟವನ್ನು ರಾಜ್ಯ ನಿರ್ದಿಷ್ಟ ವಿಪತ್ತು ಎಂದು ಘೋಷಿಸಲು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ(ಕೆಎಸ್ಡಿಎಂಎ) ರಾಜ್ಯ ಕಾರ್ಯಕಾರಿ ಸಮಿತಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಇದರ ಜೊತೆಗೆ, ಘಟನೆ ಕುರಿತಂತೆ ನ್ಯಾಯಾಂಗ ತನಿಖೆಗೂ ಸರ್ಕಾರ ಆದೇಶಿಸಿದೆ. ಜಸ್ಟಿಸ್ ಸಿ.ಎನ್. ರಾಮಚಂದ್ರನ್ ನಾಯರ್ ನೇತೃತ್ವದ ಏಕ ಸದಸ್ಯ ಸಮಿತಿಯು ಈ ಬಗ್ಗೆ ತನಿಖೆ ನಡೆಸಲಿದೆ ಎಂದೂ ಹೇಳಿದ್ದಾರೆ.
₹14 ಲಕ್ಷ ಆರ್ಥಿಕ ನೆರವಿನ ಬಗ್ಗೆ ಮಾತನಾಡಿದ ಸಚಿವರು, ರಾಜ್ಯ ವಿಪತ್ತು ಸ್ಪಂದನಾ ನಿಧಿಯಿಂದ (ಎಸ್ಡಿಆರ್ಎಫ್) ₹4 ಲಕ್ಷ ಮತ್ತು ಉಳಿದ ₹10 ಲಕ್ಷವನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಯಿಂದ (ಸಿಎಂಡಿರ್ಎಫ್) ನೀಡಲಾಗುವುದು ಎಂದು ಹೇಳಿದ್ದಾರೆ.
ಗಾಯಾಳುಗಳಿಗೆ ಎಸ್ಡಿಆರ್ಎಫ್ ಅಡಿಯಲ್ಲಿ ಅನುಮತಿಸಲಾದ ಮೊತ್ತವನ್ನು ನೀಡಲಾಗುವುದು. ಹೆಚ್ಚುವರಿಯಾಗಿ ಸಿಎಂಡಿಆರ್ಎಫ್ನಿಂದ ತುರ್ತು ಆರ್ಥಿಕ ನೆರವಾಗಿ ₹2 ಲಕ್ಷ ನೀಡಲಾಗುವುದು. ಮುಂದಿನ 6 ತಿಂಗಳ ಕಾಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲು ಸಚಿವ ಸಂಪುಟ ನಿರ್ಧರಿಸಿದೆ. ಅದಕ್ಕೆ ಅಗತ್ಯವಿರುವ ಮೊತ್ತವನ್ನು ಜಿಲ್ಲಾಧಿಕಾರಿ ಶಿಫಾರಸು ಆಧಾರದ ಮೇಲೆ ಸಿಎಂಡಿಆರ್ಎಫ್ನಿಂದ ಹಂಚಿಕೆ ಮಾಡಲಾಗುತ್ತದೆ ಎಂದಿದ್ದಾರೆ.

