ಕೊಟ್ಟಾಯಂ: ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಪೂಂಞಾರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಿರಿಯ ರಾಜಕಾರಣಿ, ಬಿಜೆಪಿ ಅಭ್ಯರ್ಥಿ ಪಿ.ಸಿ. ಜಾರ್ಜ್, 'ಭಾರಿ ಬಹುಮತದೊಂದಿಗೆ ಗೆಲುವು ದಾಖಲಿಸಲಿದ್ದೇನೆ' ಎಂದು ಭಾನುವಾರ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಗೊಂದು ವೇಳೆ ಯಾರಿಗಾದರೂ ಸಂದೇಹವಿದ್ದಲ್ಲಿ ₹1 ಕೋಟಿ ಬೆಟ್ಟಿಂಗ್ ಕಟ್ಟಲು ಸಿದ್ಧವಿರುವುದಾಗಿ ಸವಾಲು ಹಾಕಿದ್ದಾರೆ.
ನೆರೆಯ ಪಾಲಾ ವಿಧಾನಸಭಾ ಕ್ಷೇತ್ರದಲ್ಲೂ ತಮ್ಮ ಮಗ ಶೋನ್ ಜಾರ್ಜ್ ಸಹ ಜಯ ಸಾಧಿಸಲಿದ್ದಾರೆ ಎಂದು ಜಾರ್ಜ್ ಭವಿಷ್ಯ ನುಡಿದಿದ್ದಾರೆ.
'ಮುಂಬರುವ ಕೇರಳ ವಿಧಾಸನಭೆಗೆ ಅಪ್ಪ-ಮಗ ಇಬ್ಬರೂ ಜೊತೆಯಾಗಿ ಸದನ ಪ್ರವೇಶಿಸಲಿದ್ದೇವೆ' ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಗಮನಾರ್ಹ ಸಾಧನೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.
'ಈ ಸಲ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ. ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಯುಡಿಎಫ್ ಅತಿದೊಡ್ಡ ಮೈತ್ರಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ' ಎಂದಿದ್ದಾರೆ.
ರಾಜ್ಯದಲ್ಲಿ ಎನ್ಡಿಎ ಸುಮಾರು 11 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಏಪ್ರಿಲ್ 9ರಂದು ಮತದಾನ ನಡೆದಿತ್ತು. ನಾಳೆ (ಮೇ 4) ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ಕೇರಳದಲ್ಲಿ ಮತದಾನದ ಬೆನ್ನಲ್ಲೇ ಚರ್ಚ್ ವಿರುದ್ದ ಜಾರ್ಜ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

