ಹೈದರಾಬಾದ್: ಶನಿವಾರ ಇಲ್ಲಿಗೆ ಸಮೀಪದ ಕನ್ಹಾ ಶಾಂತಿ ವನದಲ್ಲಿ 6,000ಕ್ಕೂ ಹೆಚ್ಚು ಮಂದಿ 'ಭುಜಂಗಾಸನ' ಪ್ರದರ್ಶಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಏಕಕಾಲದಲ್ಲಿ ಇಷ್ಟು ಮಂದಿ ಒಂದೇ ಕಡೆ ಭುಜಂಗಾಸನ ಮಾಡಿದ್ದು ಇದೇ ಮೊದಲಾಗಿದ್ದು, 'ಏಷ್ಯಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದಿದ್ದಾರೆ.
ಆಯುಷ್ ಸಚಿವಾಲಯದ ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಾರು ಉತ್ಸಾಹಿ ಯೋಗ ಪಟುಗಳು ಪಾಲ್ಗೊಂಡಿದ್ದರು.
ಈ ಅಪರೂಪದ ಯೋಗ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ.ಕಿಶನ್ ರೆಡ್ಡಿ, ಯೋಗವು ಕೇವಲ ಭಾರತದ ಪ್ರಾಚೀನ ಪರಂಪರೆಯಲ್ಲ, ಬದಲಾಗಿ ಮಾನವೀಯತೆಗೆ ಅಮೂಲ್ಯ ಕೊಡುಗೆಯಾಗಿದೆ ಎಂದು ಹೇಳಿದರು.
ದೇಶ ನಿರ್ಮಾಣದಲ್ಲಿ ಯೋಗದ ಪಾತ್ರವನ್ನು ವಿವರಿಸಿದ ಅವರು, 2047ರ ಹೊತ್ತಿಗೆ ಭಾರತವು ವಿಕಸಿತ ಭಾರತವಾಗಲಿದ್ದು, ಆರೋಗ್ಯಕರ, ಶಾಂತಿಯುತ ಮತ್ತು ಶಿಸ್ತಿನ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಒತ್ತಡ, ಅನಾರೋಗ್ಯಕರ ಜೀವನಶೈಲಿ ಮತ್ತು ಮಾಲಿನ್ಯದಂತಹ ಆಧುನಿಕ ಸವಾಲುಗಳಿಗೆ ಪ್ರಾಯೋಗಿಕ ಮತ್ತು ಅಗ್ಗದ ಪರಿಣಾಮಕಾರಿ ಪರಿಹಾರವನ್ನು ಯೋಗ ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೈಹಿಕ ಆರೋಗ್ಯ, ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ಸಮತೋಲನವನ್ನು ಉತ್ತೇಜಿಸುವ ಸಮಗ್ರ ಯೋಗಕ್ಷೇಮಕ್ಕಾಗಿ ಯೋಗವು ಜಾಗತಿಕ ಚಳವಳಿಯಾಗಿ ವಿಕಸನಗೊಂಡಿದೆ ಎಂದು ಕೇಂದ್ರದ ಆಯುಷ್ ಸಚಿವ ಪ್ರತಾಪ್ರಾವ್ ಜಾಧವ್ ಹೇಳಿದರು.

