ಕಾಸರಗೋಡು: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿ ಸೋಲಿಸುವ ಮೂಲಕ ಕಾಂಗ್ರೆಸ್ ಸೇರಿದಂತೆ ದೇಶದ ಪ್ರತಿಪಕ್ಷಗಳು ದ.ಭಾರತಕ್ಕೆ ಹೆಚ್ಚುವರಿ ಸಂಸದರಾಗದಂತೆ ತಡೆಯೊಡ್ಡುವ ಮೂಲಕ ದೇಶದ ಜನತೆಗೆ ವಂಚನೆ ಎಸಗಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ತಿಳಿಸಿದ್ದಾರೆ.
ಅವರು ಮಹಿಳಾ ಮೀಸಲಾತಿ ಮಸೂದೆ ತಡೆಯೊಡ್ಡಲು ನೇತೃತ್ವ ನೀಡಿದ್ದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಮಹಿಳಾ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ-ಮಹಿಳಾ ಮೋರ್ಛಾ ನೇತೃತ್ವದಲ್ಲಿ ನಗರದ ಹೊಸಬಸ್ ನಿಲ್ದಾಣ ಬಳಿ ಆಯೋಜಿಸಿದ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಮೀಸಲಾತಿ ಮಸೂದೆ ಜ್ಯಾರಿಯಾಗಿರುತ್ತಿದ್ದರೆ ಕೇರಳಕ್ಕೆ 30 ಸಂಸತ್ ಸ್ಥಾನ ದೊರಕುತಿತ್ತು. ಆದರೆ ಮಸೂದೆ ಪರಾಜಯಗೊಳಿಸುವ ಮೂಲಕ ಕೇರಳದಲ್ಲಿ ಇರುವ 20ಸ್ಥಾನಗಳಿಂದ ನಾಲ್ಕರಷ್ಟು ಸ್ಥಾನಗಳು ಕಡಿತವಾಗುವ ಸಾಧ್ಯತೆಯಿದೆ. ಪ್ರತಿಪಕ್ಷಗಳು ಮಸೂದೆ ಪರಾಭವಗೊಳಿಸಿ ಮಹಿಳೆಯರ ಹಕ್ಕುಗಳನ್ನು ತಡೆದಿರುವುದಾಗಿ ಟೀಕಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಮೀಳಾ ಸಿ ನಾಯ್ಕ್, ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಉಪಾಧ್ಯಕ್ಷೆ ಎಚ್. ಆರ್. ಸುಕನ್ಯ, ಪುಷ್ಪಾ ಗೋಪಾಲನ್, ಪ್ರಮಿಳಾ ಮಜಲ್, ಅಶ್ವಿನಿ ಕೆ. ಎಂ, ಮಧೂರು ಗ್ರಾ. ಪಂ. ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಬೆಳ್ಳೂರು ಗ್ರಾ. ಪಂ. ಅಧ್ಯಕ್ಷೆ ಮಾಲಿನಿ, ಮಹಿಳಾ ಮೋರ್ಛಾ ಜಿಲ್ಲಾಧ್ಯಕ್ಷೆ ಎಸ್. ರಮಣಿ, ಜಿಲ್ಲಾ ಕಾರ್ಯದರ್ಶಿ ಅನಿತಾ ಆರ್ ನಾಯ್ಕ್, ಪ್ರೇಮಲತಾ ಎಸ್, ಜಯಂತಿ ಶೆಟ್ಟಿ ನೇತೃತ್ವ ನೀಡಿದರು. ಕಾರ್ಯಕ್ರಮಕ್ಕೂ ಮೊದಲು ಕರಂದಕಾಡಿನಿಂದ ಹೊಸ ಬಸ್ ನಿಲ್ದಾಣ ವರೆಗೆ ಮಹಿಳಾ ಮೋರ್ಛಾ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

