ಯುಡಿಎಫ್ ಅಧಿಕಾರಕ್ಕೆ ಬರುವುದು ನಿಚ್ಚಳವೆನಿಸಿದ್ದು, ಇದರ ಬೆನ್ನಲ್ಲೇ ಯಾರು ಮುಂದಿನ ಸಿಎಂ ಆಗಲಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
1. ವಿ. ಡಿ. ಸತೀಶನ್:
ಸಿಎಂ ರೇಸ್ನಲ್ಲಿ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ವಿಧಾನಸಭೆಯಲ್ಲಿ ಅವರು ಸರ್ಕಾರವನ್ನು ಎದುರಿಸಿದ ರೀತಿ ಹೆಚ್ಚಿನ ಮನ್ನಣೆ ತಂದುಕೊಟ್ಟಿದೆ. ಯುಡಿಎಫ್ನ ಪ್ರಬಲ ಮಿತ್ರಪಕ್ಷವಾದ ಐಯುಎಂಎಲ್ ನಾಯಕರು ಈಗಾಗಲೇ ಸತೀಶನ್ ಪರವಾಗಿ ಒಲವು ವ್ಯಕ್ತಪಡಿಸಿರುವುದು ಅವರಿಗೆ ಧನಾತ್ಮಕ ಅಂಶವಾಗಿದೆ.
2. ರಮೇಶ್ ಚೆನ್ನಿತ್ತಲ
ಕಾಂಗ್ರೆಸ್ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ, ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿ ಮತ್ತು ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ವಿ.ಡಿ. ಸತೀಶನ್ ಜೊತೆಗೆ ಚೆನ್ನಿತ್ತಲ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದು, ಪಕ್ಷದೊಳಗೆ ಚರ್ಚೆಗೆ ಕಾರಣವಾಗಿದೆ.
3. ಕೆ. ಸಿ. ವೇಣುಗೋಪಾಲ್
ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿರುವ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಹೈಕಮಾಂಡ್ಗೆ ಅತ್ಯಂತ ಆಪ್ತರಾಗಿದ್ದಾರೆ. ಒಂದು ವೇಳೆ ರಾಜ್ಯ ನಾಯಕರ ನಡುವೆ ಒಮ್ಮತ ಮೂಡದಿದ್ದರೆ, ಹೈಕಮಾಂಡ್ ಸೂಚನೆಯ ಮೇರೆಗೆ ಇವರು 'ವೈಲ್ಡ್ ಕಾರ್ಡ್' ಅಭ್ಯರ್ಥಿಯಾಗಿ ಸಿಎಂ ಸ್ಥಾನಕ್ಕೇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
4. ಸನ್ನಿ ಜೋಸೆಫ್
ಸಿಎಂ ರೇಸ್ನಲ್ಲಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸನ್ನಿ ಜೋಸೆಫ್ ಹೆಸರು ಸಹ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದರೆ ಸನ್ನಿಗೆ ಅವಕಾಶ ಹೆಚ್ಚುವ ಸಾಧ್ಯತೆ ಇದೆ.
ಇತರೆ ಸಂಭಾವ್ಯ ಹೆಸರುಗಳು
ಸಂಸದ ಶಶಿ ತರೂರ್, ಚಾಂಡಿ ಉಮ್ಮನ್ ಹಾಗೂ ಕೆ. ಸುಧಾಕರನ್ ಸಹ ರಾಜ್ಯವನ್ನು ಮುನ್ನಡೆಸಬಲ್ಲ ಬಲಿಷ್ಠ ನಾಯಕರೇ ಆಗಿದ್ದಾರೆ. ಈ ಪೈಕಿ ಸುಧಾಕರನ್ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾಜಿ ಸಿಎಂ ಉಮ್ಮನ್ ಚಾಂಡಿ ಅವರ ಪುತ್ರರಾಗಿರುವ ಚಾಂಡಿ ಉಮ್ಮನ್, ಭವಿಷ್ಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಕೇರಳ ಕಾಂಗ್ರೆಸ್ ನಾಯಕರೊಂಡಿದ್ದ ಮುನಿಸಿಕೊಂಡಿದ್ದ ಶಶಿ ತರೂರ್, ಬಳಿಕ ಪ್ರಚಾರದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು.
ಹೈಕಮಾಂಡ್ ನಿರ್ಧಾರವೇ ಅಂತಿಮ
ಪ್ರಚಾರದ ವೇಳೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಾವುದೇ ನಾಯಕರನ್ನು ಕಾಂಗ್ರೆಸ್ ಬಿಂಬಿಸಿರಲಿಲ್ಲ. ಅಲ್ಲದೆ ಅಂತಿಮವಾಗಿ ಕಾಂಗ್ರೆಸ್ ವರಿಷ್ಠರು, ನೂತನ ಶಾಸಕರ ಅಭಿಪ್ರಾಯ ಪಡೆದು ಸಿಎಂ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ. ಇಲ್ಲಿ ಅತಿ ದೊಡ್ಡ ಮಿತ್ರ ಪಕ್ಷವಾಗಿರುವ ಐಯುಎಂಎಲ್ ನಿಲುವು ಸಹ ಮುಖ್ಯವೆನಿಸುತ್ತದೆ.

