ಕುಂಬಳೆ: ಬೇಸಿಗೆಯಲ್ಲಿ ಏರುತ್ತಿರುವ ತಾಪಮಾನದಿಂದ ಉರಗಗಳೂ ತಂಪು ಪ್ರದೇಶವನ್ನು ಅರಸಿಕೊಂಡು ಬರುತ್ತಿದೆ. ಈ ರೀತಿ ಕುಂಬಳೆಯ ಕಂಚಿಕಟ್ಟೆಯ ಮನೆಯಂಗಳದಲ್ಲಿಪಂಪಿಗೆ ಅಳವಡಿಸಿದ್ದ ಕ್ಲಾಂಪ್ ಸಂದಿಯಲ್ಲಿ ನುಸುಳಿ ಕುಳಿತ ಬೃಹತ್ ನಾಗರಹಾವನ್ನು ತಾಸುಗಳ ಕಾಲ ನಡೆಸಿದ ಕಾರ್ಯಾಚರಣೆಯಿಂದ ಕಾಸರಗೋಡಿನ 'ಸರ್ಪ ಟೀಂ' ಸದಸ್ಯ ಉರಗತಜ್ಞ, ಪರಿಸರ ಪ್ರೇಮಿ ರಾಜು ಕಿದೂರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಲಾಂಪಿನ ನಡುವೆ ಸಿಲುಕಿ ಬುಸುಗುಡುತ್ತಿದ್ದ ನಾಗರಹಾವಿನ ಸನಿಹ ಹೋಗಲು ಯಾರಿಗೂ ಧೈರ್ಯವಿರಲಿಲ್ಲ. ಉರಗತಜ್ಞ ರಾಜು ಕಿದೂರು ಅವರು ಸ್ಥಳಕ್ಕಾಘಮಿಸಿ, ಪೈಪಿಗೆ ಹೊಂದಿಕೊಮಡಿದ್ದ ಗೋಡೆಯನ್ನು ಒಡೆದು ಗೋಡೆ ಸಂದಿಯಿಂದ ನಾಗರಹಾವನ್ನು ಹೊರಗೆ ಹಾಕಬೇಕಾದರೆ ಸುಸ್ತಾಗಿದ್ದರು. ಭಯ ಹಾಗೂ ಸಿಟ್ಟಿನಿಂದ ಆಕ್ರಮಿಸಲು ಹೆಡೆಯೆತ್ತಿ ಬುಸುಗುಡುತ್ತಿದ್ದ ನಾಗರಹಾವನ್ನು ಕೊನೆಗೂ ರಾಜು ಕಿದೂರು ಅವರು ಚೀಲದೊಳಗೆ ಬಂದಿಯಾಗಿಸುವ ಮೂಲಕ ಮನೆಯವರನ್ನು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಕ್ಲಾಂಪ್ ಸಂದಿಯಲ್ಲಿ ಸಿಲುಕಿಕೊಂಡಿದ್ದ ನಾಗರಹಾವಿಗೆ ಅಲ್ಪ ಗಾಯಗಳುಂಟಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.



