AICC ಸಂಶೋಧನಾ ವಿಭಾಗ ಸಿದ್ಧಪಡಿಸಿದ 75 ಪುಟಗಳ ಈ ವಿಶ್ಲೇಷಣೆಯನ್ನು ಕಾಂಗ್ರೆಸ್ ನಾಯಕರಾದ ರಾಜೀವ್ ಗೌಡ ಮತ್ತು ಅಮಿತಾಭ್ ದುಬೆ ಬಿಡುಗಡೆ ಮಾಡಿದರು.
ಆರ್ಥಿಕತೆ, ಉದ್ಯೋಗ, ವಿದೇಶಾಂಗ ನೀತಿ, ಇಂಧನ, ಪರಿಸರ, ಹವಾಮಾನ ವೈಪರೀತ್ಯ, ಕೃಷಿ, ಎಂಎಸ್ಎಂಇ, ಮೂಲಸೌಕರ್ಯ, ನಗರಾಭಿವೃದ್ಧಿ, ಸಾಮಾಜಿಕ ಕ್ಷೇತ್ರ, ನಾಗರಿಕ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಕಲ್ಯಾಣ, ಆಡಳಿತ ಮತ್ತು ಕಾನೂನು ಸೇರಿದಂತೆ ವಿವಿಧ ವಿಷಯಗಳ ಕುರಿತು ಸರ್ಕಾರದ ಪ್ರಚಾರವನ್ನು ಪರೀಕ್ಷೆಗೆ ಒಳಪಡಿಸಲು ಈ ದಾಖಲೆಯನ್ನು ಸಿದ್ಧಪಡಿಸಲಾಗಿದೆ ಎಂದು ಪಕ್ಷ ತಿಳಿಸಿದೆ.
ಸಹೋದ್ಯೋಗಿ ದುಬೆ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ AICC ಸಂಶೋಧನಾ ವಿಭಾಗದ ಮುಖ್ಯಸ್ಥ ರಾಜೀವ್ ಗೌಡ, ಮೋದಿ ಸರ್ಕಾರದ ವೈಫಲ್ಯಗಳತ್ತ ಬೆಟ್ಟು ಮಾಡಿದರು.
►ಉಜ್ವಲ ಸಿಲಿಂಡರ್ ಗಳು 12ರಿಂದ 4ಕ್ಕೆ ಕುಸಿತ!
ಕೇವಲ ಹತ್ತು ವರ್ಷಗಳ ಹಿಂದೆ, ಭಾರತದ ಮಹಿಳೆಯರು ಇನ್ನು ಮುಂದೆ ಅಪಾಯಕಾರಿ ಮತ್ತು ಹಾನಿಕಾರಕ ಅಡುಗೆ ಪದ್ಧತಿಗಳನ್ನು ಅವಲಂಬಿಸಬೇಕಾಗಿಲ್ಲ ಎಂದು ಘೋಷಿಸಲಾಗಿತ್ತು ಹಾಗೂ ಉಜ್ವಲ ಯೋಜನೆಯ ಪ್ರತಿ ಫಲಾನುಭವಿಗೆ ವರ್ಷಕ್ಕೆ 12 ಅಡುಗೆ ಅನಿಲ ಸಿಲಿಂಡರ್ ಗಳನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಅವರು ಹೇಳಿದರು.
ಆದರೆ, ಈಗ ಮೋದಿ ಸರ್ಕಾರವು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ನೀಡುವ LPG ಸಿಲಿಂಡರ್ ಗಳ ಸಂಖ್ಯೆಯನ್ನು ಒಂಭತ್ತರಿಂದ ನಾಲ್ಕಕ್ಕೆ ಕಡಿತಗೊಳಿಸುವುದಾಗಿ ಘೋಷಿಸಿದೆ ಎಂದರು.
'ಕಳೆದ ವರ್ಷ 12 ಸಿಲಿಂಡರ್ ಗಳನ್ನು ಒಂಭತ್ತಕ್ಕೆ ಇಳಿಸಲಾಯಿತು. ಇಂದು, ಅದನ್ನು ನಾಲ್ಕಕ್ಕೆ ಇಳಿಸಲಾಗಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ವಾರ್ಷಿಕ ದಿನವನ್ನೇ ಭಾರತದ ಮಹಿಳೆಯರು ಮತ್ತು ಕುಟುಂಬಗಳ ಮೇಲೆ ಈ ರೀತಿಯ ಗದಾಪ್ರಹಾರ ಮಾಡಲು ಆಯ್ದುಕೊಳ್ಳಲಾಗಿದೆ' ಎಂದು ಗೌಡ ಹೇಳಿದರು.
ಕಳೆದ 12 ವರ್ಷಗಳಲ್ಲಿ ಭರವಸೆಗಳ ಜೊತೆಗೆ ದೊಡ್ಡ ಘೋಷಣೆಗಳು, ಭವ್ಯ ಹೇಳಿಕೆಗಳು ಮತ್ತು ಆಕರ್ಷಕ ತಲೆಬರಹಗಳು ಮಾತ್ರ ಬಂದಿವೆ ಎಂದು ಅವರು ಹೇಳಿದರು.
'ಆದರೆ ವಾಸ್ತವ ಏನೆಂದರೆ, ಆ ಯಾವುದೇ ತಲೆಬರಹಗಳು ಜನರ ಜೀವನವನ್ನು ಅರ್ಥಪೂರ್ಣವಾಗಿ ಬದಲಾಯಿಸಿಲ್ಲ' ಎಂದು ಕಾಂಗ್ರೆಸ್ ನಾಯಕ ಹೇಳಿದರು.
►10ರಲ್ಲಿ 4 ಪದವೀಧರರು ನಿರುದ್ಯೋಗಿಗಳು
ಭಾರತವನ್ನು ಉದ್ಯೋಗ ಸೃಷ್ಟಿಯ ಜಾಗತಿಕ ಕೇಂದ್ರವನ್ನಾಗಿ ಮಾಡುವುದಾಗಿ ಮೋದಿ ಸರ್ಕಾರ ಭರವಸೆ ನೀಡಿತ್ತು. ಆದರೆ ವಾಸ್ತವದಲ್ಲಿ ಪ್ರತಿ ಹತ್ತು ಪದವೀಧರರಲ್ಲಿ ನಾಲ್ವರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ ಎಂದು ರಾಜೀವ್ ಗೌಡ ಹೇಳಿದರು.
ನಗರ ಪ್ರದೇಶದ ಯುವಕರ ನಿರುದ್ಯೋಗ ದರ ಶೇಕಡಾ 18.4ರಷ್ಟಿದೆ ಮತ್ತು ನಿರುದ್ಯೋಗಿ ಪದವೀಧರರಲ್ಲಿ ಕೇವಲ ಶೇಕಡಾ 7ರಷ್ಟು ಜನರಿಗೆ ಮಾತ್ರ ಒಂದು ವರ್ಷದೊಳಗೆ ಕಾಯಂ ವೇತನದ ಕೆಲಸ ಸಿಗುತ್ತಿದೆ ಎಂದು ಅವರು ಹೇಳಿದರು.
►ಸಮಾನ ಅವಕಾಶವೆಲ್ಲಿ?
ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವ ಸರ್ಕಾರದ ಭರವಸೆಯ ಕುರಿತು ಮಾತನಾಡಿದ ಗೌಡ, 'ಜಾಗತಿಕ ಲಿಂಗ ತಾರತಮ್ಯ ಸೂಚ್ಯಂಕದಲ್ಲಿ ನಾವು ಹಿಂದೆ 108ನೇ ಸ್ಥಾನದಲ್ಲಿದ್ದೆವು. ಈಗ ನಾವು 131ನೇ ಸ್ಥಾನಕ್ಕೆ ಕುಸಿದಿದ್ದೇವೆ. ಮಹಿಳೆಯರು ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸಲು ಅವಕಾಶಗಳನ್ನು ಸೃಷ್ಟಿಸದೆ ನಾವು ನಮ್ಮ ಜನಸಂಖ್ಯೆಯ ಅರ್ಧದಷ್ಟು ಭಾಗಕ್ಕೆ ಅನ್ಯಾಯ ಮಾಡುತ್ತಿದ್ದೇವೆ' ಎಂದರು.
►ಮುಚ್ಚಿದ 40,000 ಸಣ್ಣ ಉದ್ಯಮಗಳು
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME) ಭಾರತೀಯ ಆರ್ಥಿಕತೆಯ ಬೆನ್ನೆಲುಬು ಮತ್ತು ಉದ್ಯೋಗ ಸೃಷ್ಟಿಕರ್ತರು ಎಂದು ಬಣ್ಣಿಸಿದ ರಾಜೀವ್ ಗೌಡ, ಕಳೆದ ಹಣಕಾಸು ವರ್ಷದಲ್ಲಿ 40,000 MSME ಗಳು ಮುಚ್ಚಿವೆ ಎಂದು ಹೇಳಿದರು.
'ನೋಟು ಅಮಾನ್ಯೀಕರಣದಿಂದ ಉಂಟಾದ ಹಾನಿ ಇನ್ನೂ ಮುಂದುವರಿದಿದೆ ಮತ್ತು MSME ವಲಯವು ಅದರ ಭೀಕರ ಪರಿಣಾಮವನ್ನು ಅನುಭವಿಸುತ್ತಲೇ ಇದೆ' ಎಂದು ಅವರು ಹೇಳಿದರು.

