ಮೀರತ್: ಇನ್ಸ್ಟಾಗ್ರಾಮ್ ಪೋಸ್ಟ್ ನ ಹಿನ್ನೆಲೆಯಲ್ಲಿ ಮೆಟಾ ಸಂಸ್ಥೆ ರವಾನಿಸಿದ ಆತ್ಮಹತ್ಯೆ ಮುನ್ನೆಚ್ಚರಿಕೆ ಸಂದೇಶ 25 ವರ್ಷದ ಯುವಕನೊಬ್ಬನ ಪ್ರಾಣ ಉಳಿಸಿದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಸೋಮವಾರ ಬಿಡುಗಡೆ ಮಾಡಲಾದ ಪೊಲೀಸ್ ಹೇಳಿಕೆ ಪ್ರಕಾರ, ಮೀರತ್ ನ ಸರ್ಧನಾ ಪ್ರದೇಶದ ನಿವಾಸಿಯಾಗಿರುವ ಯುವಕ ಜೂನ್ 7ರಂದು ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದ.
ಈ ವೀಡಿಯೊದಲ್ಲಿ ಆತ ಬಿಳಿ ಬಣ್ಣದ ದ್ರವ ಕುಡಿಯುತ್ತಿರುವುದು ಕಂಡು ಬಂದಿದೆ. ಅದರಲ್ಲಿ, ''ನೀನು ನಿನ್ನ ಜೀವನದಲ್ಲಿ ಸುಖವಾಗಿರು'' ಎಂಬ ಸಂದೇಶವೂ ಇತ್ತು.
ಈ ಪೋಸ್ಟ್ಗೆ ಸಂಬಂಧಿಸಿ ಮೆಟಾ ಸಂಸ್ಥೆ ಸಂಜೆ 6.53ಕ್ಕೆ ಪೊಲೀಸ್ ಕೇಂದ್ರ ಕಚೇರಿಯಲ್ಲಿರುವ ಸಾಮಾಜಿಕ ಮಾಧ್ಯಮ ಕೇಂದ್ರಕ್ಕೆ ಆತ್ಮಹತ್ಯೆ ಮುನ್ನೆಚ್ಚರಿಕೆ ಸಂದೇಶ ಕಳುಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕರ (DGP) ನಿರ್ದೇಶನದಂತೆ ಈ ಕೇಂದ್ರ ಲಭ್ಯವಿದ್ದ ಮೊಬೈಲ್ ಸಂಖ್ಯೆ ಮತ್ತು ಸ್ಥಳದ ವಿವರಗಳ ಆಧಾರದ ಮೇಲೆ ತಕ್ಷಣ ಮೀರತ್ ಪೊಲೀಸರಿಗೆ ಮಾಹಿತಿ ನೀಡಿತು.
ಕೂಡಲೇ ಹಿರಿಯ ಪೊಲೀಸ್ ಅಧೀಕ್ಷಕರ ಮೇಲ್ವಿಚಾರಣೆಯಲ್ಲಿ ಸರ್ಧನಾ ಪೊಲೀಸರು ಯುವಕನ ಮನೆಗೆ ತಲುಪಿದರು. ಅಲ್ಲಿ ಆತ ಗಂಭೀರ ಸ್ಥಿತಿಯಲ್ಲಿರುವುದು ಕಂಡು ಬಂತು. ಆತನ ಬಳಿ ಸಂಶಯಾಸ್ಪದ ದ್ರವವಿದ್ದ ಬಾಟಲಿಯೂ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಕುಟುಂಬದ ಸದಸ್ಯರ ಸಹಾಯದಿಂದ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿತು. ಚಿಕಿತ್ಸೆಯ ಬಳಿಕ ಆತನ ಆರೋಗ್ಯ ಸ್ಥಿತಿ ಸುಧಾರಿಸಿದೆ.
ವಿಚಾರಣೆಯ ಸಂದರ್ಭ ಯುವಕ, ತಾನು ಪ್ರೇಮ ವೈಫಲ್ಯದಿಂದಾಗಿ ತೀವ್ರ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದೆ. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾನೆ.
ಯುವಕ ಮತ್ತು ಆತನ ಕುಟುಂಬದ ಸದಸ್ಯರಿಗೆ ಕೌನ್ಸೆಲಿಂಗ್ ಮಾಡಲಾಗಿದ್ದು, ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

