ಮೀರತ್ : ಇನ್ಸ್ಟಾಗ್ರಾಂ ಪೋಸ್ಟ್ವೊಂದನ್ನು ಆಧರಿಸಿ ಮೆಟಾ ಕಳಿಸಿದ ಆತ್ಮಹತ್ಯೆ ಮುನ್ನೆಚ್ಚರಿಕೆ ಸಂದೇಶದಿಂದ 25 ವರ್ಷದ ಯುವಕನೊಬ್ಬನ ಪ್ರಾಣ ಉಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಪ್ರೇಮ ವೈಫಲ್ಯದಿಂದ ಖಿನ್ನತೆಗೆ ಒಳಗಾಗಿದ್ದ ಮೀರತ್ನ ಸರ್ಧನಾ ಪ್ರದೇಶದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದನು.
ಇದಕ್ಕೂ ಮುನ್ನ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದ ಆತ, 'ನೀನು ನಿನ್ನ ಜೀವನದಲ್ಲಿ ಸಂತೋಷವಾಗಿರು' ಎಂದು ಹೇಳಿದ್ದನು.
ಈ ಪೋಸ್ಟ್ ಅನ್ನು ಅವಲೋಕಿಸಿದ ಮೆಟಾ, ಪೊಲೀಸ್ ಪ್ರಧಾನ ಕಛೇರಿಯ ಸೋಶಿಯಲ್ ಮೀಡಿಯಾ ಸೆಂಟರ್ಗೆ ಆತ್ಮಹತ್ಯೆ ಮುನ್ನೆಚ್ಚರಿಕೆ ಸಂದೇಶವನ್ನು ಕಳುಹಿಸಿತ್ತು. ಸಂದೇಶ ಬಂದ 8 ನಿಮಿಷದಲ್ಲೇ ಪೊಲೀಸರು ಸ್ಥಳಕ್ಕೆ ತಲುಪಿ ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಆತ್ಮಹತ್ಯೆಗೆ ಸಂಬಂಧಿಸಿದ ಪೋಸ್ಟ್ಗಳನ್ನು ಗುರುತಿಸಿ ಮಾಹಿತಿ ನೀಡುವ ಸಲುವಾಗಿ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಮತ್ತು ಮೆಟಾ ಸಂಸ್ಥೆ ಒಪ್ಪಂದ ಮಾಡಿಕೊಂಡಿವೆ. 2023ರಿಂದ ಇಲ್ಲಿಯವರೆಗೆ 3,011 ಜನರ ಪ್ರಾಣವನ್ನು ಉಳಿಸಲು ಸಾಧ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಹಿನ್ನೆಲೆ:
ಸೋಮವಾರ ಸಂಜೆ 6.53 ಸುಮಾರಿಗೆ ಮೆಟಾ ಸಂಸ್ಥೆಯು ಆತ್ಮಹತ್ಯೆ ಮುನ್ನೆಚ್ಚರಿಕೆ ಸಂದೇಶವನ್ನು ಪೊಲೀಸ್ ಪ್ರಧಾನ ಕಛೇರಿಯ ಸೋಶಿಯಲ್ ಮೀಡಿಯಾ ಸೆಂಟರ್ಗೆ ಕಳುಹಿಸಿತ್ತು. ಪೊಲೀಸ್ ಮಹಾನಿರ್ದೇಶಕರ ನಿರ್ದೇಶನದಂತೆ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಲಭ್ಯವಿದ್ದ ಮೊಬೈಲ್ ಸಂಖ್ಯೆ ಮತ್ತು ಸ್ಥಳದ ವಿವರಗಳನ್ನು ತಕ್ಷಣ ಮೀರತ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಅವರ ಮೇಲ್ವಿಚಾರಣೆಯಲ್ಲಿ ಸರ್ಧನಾ ಪೊಲೀಸರು ಯುವಕನ ಮನೆಗೆ ತಲುಪಿದಾಗ ಆತನ ಸ್ಥಿತಿ ಗಂಭೀರವಾಗಿರುವುದು ಕಂಡುಬಂದಿದೆ. ಆತನ ಬಳಿ ವಿಷಯದ ಬಾಟಲಿಯೊಂದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಟುಂಬ ಸದಸ್ಯರ ಸಹಾಯದಿಂದ ಯುವಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ವಿಚಾರಣೆಯ ವೇಳೆ, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ ಯುವಕ ತಿಳಿಸಿದ್ದಾನೆ. ಆತನಿಗೆ ಆಪ್ತಸಮಾಲೋಚನೆ ನಡೆಸಲಾಗಿದ್ದು, ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

