ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಿಬಿಎಸ್ಸಿ ಪರೀಕ್ಷಾ ಲೋಪ ಸೇರಿದಂತೆ ಕೇಂದ್ರ ಶಿಕ್ಷಣ ಸಚಿವಾಲಯ ನಡೆಸುವ ಪರೀಕ್ಷೆಗಳಲ್ಲಿ ಅಕ್ರಮ ವಿರೋಧಿಸಿ ಮತ್ತು ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ಮಂತರ್ನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಗೆ ಪರಿಸರ ಕಾರ್ಯಕರ್ತ ಸೋನಮ್ ವಾಗ್ಚುಕ್ ಕೈಜೋಡಿಸಿದ್ದು, ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಸತ್ಯಾಗ್ರಹ ಆರಂಭಿಸುವುದಕ್ಕೂ ಮೊದಲು ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಜೊತೆ ರಾಜಘಾಟ್ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು.
ವಾಂಗ್ಚುಕ್ ಸತ್ಯಾಗ್ರಹ ಆರಂಭದ ಸಮಯದಲ್ಲಿ ನೂರಾರು ಯುವಕರು, ವಿದ್ಯಾರ್ಥಿಗಳು ಮತ್ತು ರೈತ ನಾಯಕರು ಉಪಸ್ಥಿತರಿದ್ದರು.
ಕಳೆದ 40 ವರ್ಷಗಳಿಂದ ಶಿಕ್ಷಣ ನನ್ನ ಹೃದಯಕ್ಕೆ ಹತ್ತಿರವಾದ ವಿಷಯವಾಗಿದೆ. ಶಿಕ್ಷಣ ವ್ಯವಸ್ಥೆ ಬಗ್ಗೆ ಯುವಜನರು ಕಳವಳಗೊಂಡಿರುವಾಗ ಕೈಕಟ್ಟಿ ಕೂರುವುದು ಬೇಡವೆಂದು ಪ್ರತಿಭಟನೆಗೆ ಕೈಜೋಡಿಸಿದೆ ಎಂದಿದ್ದಾರೆ.
ಈ ಸತ್ಯಾಗ್ರಹಕ್ಕೆ ಯಾರೂ ನನ್ನ ಮೇಲೆ ಒತ್ತಡ ಹಾಕಿಲ್ಲ. ಸಂತೋಷದಿಂದ ಈ ಹೋರಾಟ ನಡೆಸುತ್ತಿದ್ದೇನೆ. ಲಡಾಖ್ಗೆ ಸ್ಥಾನಮಾನ ಮತ್ತು ಶಿಕ್ಷಣದ ಉಳಿವು ಎರಡೂ ವಿಷಯಗಳಿಗಾಗಿ ನಾನು ಉಪವಾಸ ಮಾಡುತ್ತಿದ್ದೇನೆ ಎಂದಿದ್ದಾರೆ.
ನಾನು ಎಂಜಿನಿಯರಿಂಗ್ ಓದಿದ್ದೇನೆ. ಆದರೆ, ಕೆಲಸಕ್ಕೆ ಹೋಗಲಿಲ್ಲ. ಶಿಕ್ಷಣವು ಎಲ್ಲ ಪೀಳಿಗೆಗೆ ಅತ್ಯಂತ ಪ್ರಮುಖ ಎಂಬುದನ್ನು ನಾನು ಅರಿತಿದ್ದೇನೆ. ಅಂತಹ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಯುವಕರು ಧ್ವನಿ ಎತ್ತುತ್ತಿರುವಾಗ ನಾನು ಸುಮ್ಮನೆ ಕೂರಲು ಹೇಗೆ ಸಾಧ್ಯ? ಹಾಗಾಗಿಯೇ, ಅವರ ಬೆಂಬಲಕ್ಕೆ ಬಂದೆ ಎಂದಿದ್ದಾರೆ.
ಶಿಕ್ಷಣವನ್ನು ಮಕ್ಕಳ ಭವಿಷ್ಯ ರೂಪಿಸಲು ಮತ್ತು ದೇಶ ಮುನ್ನಡೆಸುವ ಶಕ್ತಿಯಾಗಿ ಬಳಸಬೇಕು ಎಂದಿದ್ದಾರೆ.
ಲಡಾಖ್ನಲ್ಲಿ ತಮ್ಮ ಹೋರಾಟದ ಬಗ್ಗೆ ಮಾತನಾಡಿದ ಅವರು, ಹಿಮಾಲಯವನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ. ಅಲ್ಲಿಂದ ಹರಿದುಬರುವ ನೀರಿನ ಮೇಲೆ ಶತಕೋಟಿ ಮಂದಿ ಅವಲಂಬಿತರಾಗಿದ್ದಾರೆ. ಸರ್ಕಾರ ಕೊಂಚ ಸೂಕ್ಷ್ಮತೆ ಪ್ರದರ್ಶಿಸಬೇಲಿದೆ ಎಂದಿದ್ದಾರೆ.

