ಕೊಚ್ಚಿ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾಯಿತ ಜನಪ್ರತಿನಿಧಿಗಳು ಕಾನೂನಿನಿಂದ ರೂಪಿಸಲಾದ ಚೌಕಟ್ಟಿಗೆ ಅನ್ವಯವಾಗಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ಕೇರಳ ಹೈಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ತಿರುವನಂತಪುರ ಕಾರ್ಪೋರೇಷನ್ನಲ್ಲಿ 'ದೇವರ ಹೆಸರನ್ನು' ಅಥವಾ 'ವಿಧಿಬದ್ಧವನ್ನು' ಹೊರತುಪಡಿಸಿ ಇತರೆ ಹೆಸರುಗಳಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ಹಲವಾರು ಕೌನ್ಸಿಲರ್ಗಳ ಪ್ರಮಾಣವಚನ ಅಮಾನ್ಯವೆಂದು ಆದೇಶಿಸಿದೆ.
ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರು ನೀಡಿದ ತೀರ್ಪಿನಲ್ಲಿ, ಕೇರಳಂ ಪುರಸಭೆ ಕಾಯ್ದೆ ಮತ್ತು ಕೇರಳಂ ಪಂಚಾಯಿತಿ ರಾಜ್ ಕಾಯ್ದೆಯಡಿ ಚುನಾಯಿತ ಸದಸ್ಯರು 'ದೇವರ ಹೆಸರಿನಲ್ಲಿ' ಅಥವಾ ವಿಧಿಬದ್ಧವಾಗಿ ಪ್ರಮಾಣವಚನ ಸ್ವೀಕರಿಸಬೇಕು ಎಂದಿದೆ.
ಅದನ್ನು ಹೊರತುಪಡಿಸಿ ಯಾವುದಾದರೂ 'ನಿರ್ದಿಷ್ಟ ದೇವತೆ', 'ಭಾರತ ಮಾತೆ', 'ರಾಜಕೀಯ ಹುತಾತ್ಮರು', 'ಸಂಸ್ಥೆಗಳು' ಅಥವಾ 'ವ್ಯಕ್ತಿ'ಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಕಾನೂನಿನಡಿಯಲ್ಲಿ ಅವಕಾಶ ಇಲ್ಲ ಎಂದು ಹೇಳಿದೆ.
ತಿರುವನಂತಪುರ ಕಾರ್ಪೋರೇಷನ್ನ 20 ಕೌನ್ಸಿಲರ್ಗಳು ವಿವಿಧ ಹಿಂದೂ ದೇವತೆಗಳಾದ 'ಭಾರತಾಂಬೆ', 'ಭಾರತ ಮಾತೆ', 'ಗುರುದೇವ' ಮತ್ತು ರಾಜಕೀಯ ಚಳವಳಿಯ 'ಹುತಾತ್ಮ'ರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.
ಮತ್ತೊಂದು ಪ್ರತ್ಯೇಕವಾದ ಅರ್ಜಿಯಲ್ಲಿ ಪಾಲಕ್ಕಾಡ್ ಜಿಲ್ಲೆಯ ವಡಕ್ಕೆಂಚೇರಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೆಸರಿನಲ್ಲಿ ದೇವರ ಆಶೀರ್ವಾದದಿಂದ ಪ್ರಮಾಣವಚನ ಸ್ವೀಕರಿಸಿದ್ದರು ಎಂದು ಉಲ್ಲೇಖಿಸಲಾಗಿತ್ತು.
ಚುನಾಯಿತ ಪ್ರತಿನಿಧಿಯೊಬ್ಬರು ದೇಶದ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುತ್ತಾರೆ, ಕಾನೂನನ್ನು ಪಾಲಿಸುತ್ತಾರೆ ಮತ್ತು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಾರೆ. ಹಾಗಾಗಿ ಪ್ರಮಾಣವನ್ನು ಕಾನೂನಿಂದ ರಚಿಸಲಾದ ಚೌಕಟ್ಟಿಗೆ ಅನುಗುಣವಾಗಿ ಸ್ವೀಕರಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜನರಿಗೆ ಯಾವುದೇ ದೇವರನ್ನು ಪೂಜಿಸುವ ಅಥವಾ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ಆದರೆ, ಪ್ರಮಾಣವು ಶಾಸನಬದ್ಧವಾಗಿಯೇ ನಡೆಯಬೇಕು ಎಂದಿದೆ.

