ಲಖನೌ: ಬೆಂಕಿ ಅವಘಡದಲ್ಲಿ 15 ಜನರು ಪ್ರಾಣ ಕಳೆದುಕೊಂಡ ಘಟನೆಗೆ ಸಂಬಂಧಿಸಿ ಇಲ್ಲಿನ ಅಲಿಗಂಜ್ ಕಟ್ಟಡಕ್ಕೆ ಲಖನೌ ಅಭಿವೃದ್ಧಿ ಪ್ರಾಧಿಕಾರವು (ಎಲ್ಡಿಎ) ಬುಧವಾರ ನೋಟಿಸ್ ಅಂಟಿಸಿದೆ.
ಕಟ್ಟಡದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದು ಮತ್ತು ವಸತಿ ಉದ್ದೇಶಕ್ಕೆ ಅನುಮತಿ ಪಡೆದು ವಾಣಿಜ್ಯ ಉದ್ದೇಶಕ್ಕೆ ಕಟ್ಟಡವನ್ನು ಬಳಕೆ ಮಾಡಿದ್ದಕ್ಕೆ ಸಂಬಂಧಿಸಿ ನೋಟಿಸ್ ಅಂಟಿಸಲಾಗಿದ್ದು, ಮಾಲೀಕರು 15 ದಿನಗಳಲ್ಲಿ ಉತ್ತರಿಸಬೇಕು ಎಂದು ತಿಳಿಸಲಾಗಿದೆ.
'ಜುಲೈ 7ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ. ಮಾಲೀಕರ ಪ್ರತಿಕ್ರಿಯೆಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದೊಮ್ಮೆ ಮಾಲೀಕರಿಂದ ತೃಪ್ತಿಕರ ಉತ್ತರ ಬಾರದಿದ್ದಲ್ಲಿ, ಅಂತಿಮವಾಗಿ ಕಟ್ಟಡವನ್ನು ನೆಲಸಮ ಮಾಡುವ ಆದೇಶವನ್ನು ಅನುಷ್ಠಾನಕ್ಕೆ ತರಲಾಗುತ್ತದೆ' ಎಂದು ಎಲ್ಡಿಎ ಅಧ್ಯಕ್ಷ ಪ್ರಥಮೇಶ ಕುಮಾರ್ ತಿಳಿಸಿದ್ದಾರೆ.
'ನಿಯಮ ಉಲ್ಲಂಘನೆ ಕಾರಣಕ್ಕಾಗಿ 2016ರಲ್ಲೇ ಕಟ್ಟಡದ ಕೆಲವು ಭಾಗವನ್ನು ಕಡೆವಲು ಆದೇಶ ನೀಡಲಾಗಿತ್ತು. ಆದರೆ, ಆದೇಶಕ್ಕೂ ಮುನ್ನ ತನ್ನ ವಾದವನ್ನು ಆಲಿಸಲಿಲ್ಲ ಎಂಬ ಮಾಲೀಕರ ವಾದವನ್ನು ಪರಿಗಣಿಸಿ, ಎರಡು ತಿಂಗಳ ಬಳಿಕ ಈ ಆದೇಶವನ್ನು ಹಿಂಪಡೆಯಲಾಗಿತ್ತು. ಎರಡೂ ಆದೇಶಗಳನ್ನು ಹೊರಡಿಸಿದ್ದು ಒಬ್ಬರೇ ಅಧಿಕಾರಿ ಆಗಿದ್ದರಿಂದ, ಈ ನಿರ್ಧಾರಗಳ ಕುರಿತೂ ತನಿಖೆ ನಡೆಯುತ್ತಿದೆ' ಎಂದು ಅವರು ಮಾಹಿತಿ ನಿಡಿದರು.
ಎಲ್ಲರೂ ಉಸಿರುಗಟ್ಟಿ ಸಾವು: ಅಗ್ನಿ ಅವಘಡದಲ್ಲಿ 15 ಮಂದಿಯೂ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿಗಳಿಂದ ದೃಢಪಟ್ಟಿದೆ.
ಪ್ರಥಮೇಶ ಕುಮಾರ್, ಎಲ್ಡಿಎ ಅಧ್ಯಕ್ಷನಗರದಾದ್ಯಂತ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳು ಮತ್ತು ಅನಧಿಕೃತವಾಗಿ ವಾಣಿಜ್ಯ ಚಟುವಟಿಕೆ ನಡೆಸುವುದನ್ನು ಪತ್ತೆ ಹಚ್ಚಲು ಏಳು ತಂಡಗಳನ್ನು ರಚಿಸಲಾಗಿದೆ ಲಖನೌ: ಬೆಂಕಿ ಅವಘಡ ಸಂಭವಿಸಿದ ಬೆನ್ನಲ್ಲೇ ಸಮರ್ಪಕ ಸುರಕ್ಷತಾ ಮಾನದಂಡಗಳನ್ನು ಅನುಸರಿಸದ ಮತ್ತು ಅನಧಿಕೃತ ಕಟ್ಟಡಗಳಲ್ಲಿ ನಡೆಯುವ ಕೋಚಿಂಗ್ ಕೇಂದ್ರಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರವು ರಾಜ್ಯದಾದ್ಯಂತ ಅಭಿಯಾನವನ್ನು ಆರಂಭಿಸಿದೆ. 'ಪ್ರಯಾಗ್ರಾಜ್ನಲ್ಲಿರುವ 'ಖಾನ್ ಸರ್' ಅವರ ಸಂಸ್ಥೆಯೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನೂರಕ್ಕೂ ಹೆಚ್ಚು ಕೋಚಿಂಗ್ ಕೇಂದ್ರಳಿಗೆ ಬೀಗ ಹಾಕಲಾಗಿದೆ. ಇದರಲ್ಲಿ ಕೆಲವು ಗ್ರಂಥಾಲಯಗಳು ಚಿಕಿತ್ಸಾಲಯಗಳು ಮತ್ತು ಹೋಟೆಲ್ಗಳೂ ಒಳಗೊಂಡಿವೆ' ಎಂದು ವರದಿಯಾಗಿದೆ. ಇನ್ನೂ ಕೆಲವು ದಿನಗಳವರೆಗೆ ಈ ಅಭಿಯಾನ ಮುಂದಿವರಿಯಲಿವೆ ಎಂದು ಮೂಲಗಳು ತಿಳಿಸಿವೆ.

