ನವದೆಹಲಿ: ದೇಶದಾದ್ಯಂತ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು 23 ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿದ್ದು, ಈ ಕುರಿತು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ಪತ್ರ ಬರೆದಿವೆ.
ಎಸ್ಐಆರ್ ಪ್ರಕ್ರಿಯೆಯ ವಿರೋಧಿಸಿ 'SUಖಇ'- ಸಾಲಿಡಾರಿಟಿ, ಯೂನಿಟಿ ಅಂಡ್ ರೆಸಿಸ್ಟೆನ್ಸ್ ಘೋಷಣೆ ಅಡಿಯಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಅಭಿಯಾನ ಆರಂಭಿಸಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಜೂನ್ 8ರಂದು ನಡೆದ ಇಂಡಿಯಾ ಬಣದ ಸಭೆಯಲ್ಲಿ 21 ಪಕ್ಷಗಳ ನಾಯಕರು ಮತ್ತು ಪಕ್ಷೇತರ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆ ಮತ್ತು ಇತರ ಚುನಾವಣೆ ಸಂಬಂಧಿತ ವಿಷಯಗಳ ಕುರಿತು ಸಿಜೆಐ ಸೂರ್ಯ ಕಾಂತ್ ಅವರಿಗೆ ಜಂಟಿ ಪತ್ರ ಬರೆಯಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು' ಎಂದು ರಮೇಶ್ ತಿಳಿಸಿದ್ದಾರೆ.
ಅದರಂತೆ, 23 ಪಕ್ಷಗಳ ನಾಯಕರು ಮತ್ತು ಒಬ್ಬ ಪಕ್ಷೇತರ ಸಂಸದರು ಸಹಿ ಮಾಡಿರುವ ಜಂಟಿ ಪತ್ರವನ್ನು ಇಂದು (ಮಂಗಳವಾರ) ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗಿದೆ ಎಂದಿದ್ದಾರೆ.
'ಇಂಡಿಯಾ ಒಕ್ಕೂಟದಿಂದ ಉತ್ತಮ ನಡೆ. ಹೌದು, ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಯಾನ್, ಎಎಪಿ ಮತ್ತು ಡಿಎಂಕೆ ನಾಯಕರೂ ಈ ಪತ್ರಕ್ಕೆ ಸಹಿ ಹಾಕಿದ್ದಾರೆ' ಎಂದೂ ಅವರು ಮಾಹಿತಿ ನೀಡಿದ್ದಾರೆ.
ಎಸ್ಐಆರ್ ಕುರಿತು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಚುನಾವಣಾ ಆಯೋಗವನ್ನು ಪದೇ ಪದೇ ಟೀಕಿಸುತ್ತಾ ಬಂದಿವೆ.

